ಏ.15, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಮಹತ್ವದ ವಿಚಾರಣೆ
ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದ ವರದಿ ತೃಪ್ತಿ ನೀಡದ ಹಿನ್ನಲೆಯಲ್ಲಿ ಗಣಪತಿ ಸಹೋದರ ಮಾಚಯ್ಯ ಅವರು ಖಾಸಗಿ ಮೊಕದ್ದಮೆ ದಾಖಲಿಸಿದ್ದು ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ
ಮಡಿಕೇರಿ, ಏಪ್ರಿಲ್ 12: ಸರ್ಕಾರ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಷರಾ ಎಳೆಯಲು ಯತ್ನಿಸುತ್ತಿದ್ದರೆ ಅತ್ತ ಅವರ ಸಹೋದರ ಮಾಚಯ್ಯ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಿದ್ದಾರೆ.
ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಎಂ.ಕೆ.ಗಣಪತಿಯವರು ಮಡಿಕೇರಿಯಲ್ಲಿ ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ವಾಹಿನಿಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರಲ್ಲದೆ, ಅಧಿಕಾರಿಗಳು ಹಾಗೂ ಸಚಿವರ ಹೆಸರನ್ನು ಉಲ್ಲೇಖ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬಂದ ವರದಿ ತೃಪ್ತಿ ನೀಡದ ಹಿನ್ನಲೆಯಲ್ಲಿ ಮೃತ ಗಣಪತಿ ಅವರ ಸಹೋದರ ಮಾಚಯ್ಯ ಅವರು ಖಾಸಗಿ ಮೊಕದ್ದಮೆ ದಾಖಲಿಸಿದ್ದು ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಗಣಪತಿ ಸಾವಿನ ಕುರಿತು ವಿಚಾರಣೆಯನ್ನು ಏ.15ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ. [ಕರ್ನಾಟಕ ಸರ್ಕಾರಕ್ಕೆ ಮತ್ತೊಮ್ಮೆ ಗಣಪತಿ ಆತ್ಮಹತ್ಯೆ ಕೇಸ್ ಕಾಟ]
ಮಡಿಕೇರಿ ಜೆಎಂಎಫ್ಸಿ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರ ಮುಂದೆ, ಮೃತರ ಸಹೋದರ ಮಾಚಯ್ಯ ಅವರು ತಮ್ಮನ್ನು ದೂರುದಾರರನ್ನಾಗಿ ಪರಿಗಣಿಸಬೇಕೆಂದು ಮನವಿ ಮಾಡಿ ಖಾಸಗಿ ಮೊಕದ್ದಮೆ ನಮೂದಿಸಲು ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ. ಹೈಕೋರ್ಟ್ ವಕೀಲ ಪವನ್ ಚಂದ್ರಶೇಖರ್ ಶೆಟ್ಟಿ ಮೂಲಕ ಮೊಕದ್ದಮೆ ದಾಖಲಿಸಲು ಮಾಚಯ್ಯ ಅವರು ಕಾಲಾವಕಾಶ ಕೋರಿದ್ದು ಈ ಸಂಬಂಧ ಏ. 15ರಂದು ವಿಚಾರಣೆ ನಿಗದಿಗೊಳಿಸಲಾಗಿದೆ.
ಏ.10ರಂದು ದಾಖಲೆಗಳನ್ನು ಒದಗಿಸುವಂತೆ ನ್ಯಾಯಾಲಯ ನೀಡಿದ ನೋಟೀಸ್ ಮಾಚಯ್ಯನವರಿಗೆ ಶುಕ್ರವಾರ ತಲುಪಿತ್ತು. ಕಾಲಾವಕಾಶ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ಏ.15ರವರೆಗೆ ಸಮಯಾವಕಾಶ ಕೋರಿದ್ದು, ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಏ. 15ರವರೆಗೆ ಸಮಯಾವಕಾಶ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಹೋದರ ಮಾಚಯ್ಯ, "ಏ.15 ರಂದು ವಕೀಲ ಪವನ್ ಚಂದ್ರಶೇಖರ್ ಶೆಟ್ಟಿ ಆಗಮಿಸಲಿದ್ದು, ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಏತಕ್ಕಾಗಿ ಈ ರೀತಿ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ತನಿಖಾ ಸಮಿತಿಯವರು ತನ್ನೊಂದಿಗೆ ಮಾಹಿತಿ ಕೋರಿದ್ದರು. ಆದರೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಯಾವುದೇ ಮಾಹಿತಿ ನೀಡಲಾಗುವದಿಲ್ಲ," ಎಂದು ಹೇಳಿದರು.