ತಲಕಾವೇರಿಯ ಅಗಸ್ತ್ಯೇಶ್ವರ ಶಿವಲಿಂಗ ವಿಸರ್ಜನೆಗೆ ತಡೆ:ಏತಕ್ಕಾಗಿ?
ಮಡಿಕೇರಿ, ಏಪ್ರಿಲ್ 12: ಕನ್ನಡ ನಾಡಿನ ಜೀವನದಿ ಕಾವೇರಿಯ ಉದ್ಭವ ಸ್ಥಳ ತಲಕಾವೇರಿಯಲ್ಲಿ ಶ್ರೀ ಅಗಸ್ತ್ಯೇಶ್ವರ ಮುನಿಗಳು ಪ್ರತಿಷ್ಠಾಪಿಸಿದ್ದು ಎನ್ನಲಾದ ಶ್ರೀ ಅಗಸ್ತ್ಯೇಶ್ವರ ಶಿವಲಿಂಗವನ್ನು ತೆಗೆಯಲಾಗಿದ್ದು, ಶಾಸ್ತ್ರೋಕ್ತವಾಗಿ ಪುನರ್ ಪ್ರತಿಷ್ಠಾಪನಾ ಕಾರ್ಯವೂ ನಡೆದಿದೆ. ಆದರೆ ಇದೀಗ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವಲಿಂಗದ ವಿಸರ್ಜನಾ ಕಾರ್ಯ ಸ್ಥಗಿತಗೊಂಡಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನ್ಯಾಯಾಲಯದಿಂದ ತಡೆಯಾಜ್ಞೆ ಬರುವ ಮುನ್ನವೇ ದೇವಾಲಯ ವ್ಯವಸ್ಥಾಪನಾ ಸಮಿತಿಯು ಕ್ಷೇತ್ರದಲ್ಲಿ ತಂತ್ರಿಗಳು ನುಡಿದಂತೆ ಎಲ್ಲ ಧಾರ್ಮಿಕ ಕಾರ್ಯಗಳನ್ನು ಮುಕ್ತಾಯಗೊಳಿಸಿಯಾಗಿದೆ. ಅಗಸ್ತ್ಯೇಶ್ವರ ಶಿವಲಿಂಗವನ್ನು ತೆಗೆದು ಪುನರ್ ಶಿವಲಿಂಗದ ಪ್ರತಿಷ್ಠಾಪನೆಯೂ ಮುಗಿದಿದೆ.
ಮೂಲ ಅಗಸ್ತ್ಯೇಶ್ವರ ಶಿವಲಿಂಗವನ್ನು ಮಾತ್ರ ಮೇ.24ರಂದು ತಮಿಳುನಾಡಿನ 'ಪೂಂಪೂಹಾರ್'ನಲ್ಲಿ ವಿಸರ್ಜಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ದೇವಾಲಯ ವ್ಯವಸ್ಥಾಪನಾ ಸಮಿತಿ ಇದೀಗ ನ್ಯಾಯಾಲಯದ ಆದೇಶವನ್ನು ಪಾಲಿಸುವಂತಾಗಿದೆ.
ಕೇರಳದ ಜ್ಯೋತಿಷಿ ನಾರಾಯಣ ಪೊದುವಾಳ್, ಚೋದ್ಯಗಾರ ಶ್ಯಾಮ ಶಾಸ್ತ್ರಿ ಹಾಗೂ ಕ್ಷೇತ್ರ ತಂತ್ರಿಗಳಾದ ಪದ್ಮನಾಭ ನೀಲೇಶ್ವರ ತಂತ್ರಿಗಳ ನಿರ್ದೇಶಾನುಸಾರ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಪ್ರಾಚೀನ ಶಿವಲಿಂಗವನ್ನು ಅಗಸ್ತ್ಯೇಶ್ವರ ಗರ್ಭಗುಡಿಯಿಂದ ಹೊರ ತೆಗೆದಿದ್ದು, ನೂತನ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನ ವಕೀಲರುಗಳಾದ ಓ. ಶ್ಯಾಂಭಟ್ ಹಾಗೂ ಓ. ಸತೀಶ್ ರವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಹಾಗೂ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರುಗಳನ್ನು ಪ್ರತಿವಾದಿಗಳಾಗಿ ಪರಿಗಣಿಸಲಾಗಿತ್ತು. ಮುಂದೆ ಓದಿ...

ತಡೆಯಾಜ್ಞೆ ನೀಡಿದ ಉಚ್ಚ ನ್ಯಾಯಾಲಯ
ಇದೀಗ ಶ್ರೀ ಅಗಸ್ತ್ಯೇಶ್ವರ ಶಿವಲಿಂಗವನ್ನು ಈ ಹಿಂದೆ ಇದ್ದ ಸ್ಥಳದಿಂದ ತೆಗೆಯದಂತೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ತಲಕಾವೇರಿಯ ಅಗಸ್ತ್ಯೇಶ್ವರ ದೇವಾಲಯದ ಶಿವಲಿಂಗವನ್ನು ಆ ಸ್ಥಳದಿಂದ ತೆಗೆಯದಂತೆ ನಿರ್ದೇಶಿಸುತ್ತಿದ್ದೇನೆ; ಈ ಬಗ್ಗೆ ಜಿಲ್ಲಾಡಳಿತಕ್ಕೂ ಸೂಚನೆ ನೀಡುವಂತೆ ಆದೇಶಿಸುತ್ತಿರುವದಾಗಿ ಪ್ರಬಾರ ಮುಖ್ಯ ನ್ಯಾಯಾಧೀಶರಾದ ಪಿ.ಎಸ್. ದಿನೇಶಕುಮಾರ್ ಅವರು ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕರಾದ ಡಿ. ನಾಗರಾಜ್ ಅವರಿಗೆ ಸೂಚಿಸಿ ಸಂಬಂಧಿಸಿದ ಇಲಾಖೆಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಫ್ಯಾಕ್ಸ್ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.

ಅಗಸ್ತ್ಯೇಶ್ವರ ಲಿಂಗವೆಂದು ಪರಿಗಣನೆ
ಇಷ್ಟಕ್ಕೂ ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ ಮುಖ್ಯವಾಗಿ ತಲಕಾವೇರಿಯಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯ, ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾದಿಗಳನ್ನು ನಡೆಸುವ ಸಂದರ್ಭ ಪ್ರಾಚೀನ ಶಿವಲಿಂಗವನ್ನು ವಿಸರ್ಜನೆ ಮಾಡುವುದಾಗಲೀ, ನಾಶಗೊಳಿಸುವದಾಗಲೀ ಮಾಡಬಾರದು, ಸಾವಿಲ್ಲದ ಮಹರ್ಷಿ ಅಗಸ್ತ್ಯರು ಸ್ಥಾಪಿಸಿದ ಅಗಸ್ತ್ಯೇಶ್ವರ ದೇವಾಲಯ ಹಾಗೂ ಪ್ರತಿಷ್ಠಾಪಿಸಿದ ಶಿವಲಿಂಗವು ಅತ್ಯಂತ ಮಹತ್ತರವಾದದ್ದು ಎಂದು ಬಣ್ಣಿಸಿದ್ದು, ಸಹಸ್ರಾರು ವರ್ಷಗಳ ಇತಿಹಾಸವಿರುವ ಅಗಸ್ತ್ಯರ ಪ್ರಭಾವದ ಕುರಿತು ವಾಲ್ಮೀಕಿ ರಾಮಾಯಣದಲ್ಲಿಯೂ ಉಲ್ಲೇಖವಿದೆ. ಅಗಸ್ತ್ಯರ ಕಮಂಡಲದಿಂದಲೇ ಪವಿತ್ರ ಕಾವೇರಿ ಉದ್ಭವಿಸಿದ್ದಾಳೆ. ಅಗಸ್ತ್ಯರು ತಲಕಾವೇರಿಯಿಂದ ತಮಿಳುನಾಡಿನ ಕಾವೇರಿ ಪಟ್ಟಣಂ ತನಕ ಅನೇಕ ಶಿವಲಿಂಗಗಳನ್ನು ಸ್ಥಾಪಿಸಿದ್ದಾರೆ. ಅದೇ ರೀತಿ ತಲಕಾವೇರಿಯಲ್ಲಿ ಸ್ಥಾಪಿಸಲ್ಪಟ್ಟ ಶಿವಲಿಂಗವನ್ನು ಅಗಸ್ತ್ಯೇಶ್ವರ ಲಿಂಗವೆಂದು ಪರಿಗಣಿಸಲಾಗಿದೆ.

ಶಿವಲಿಂಗ ವಿಸರ್ಜಿಸುವುದು ಸೂಕ್ತವಲ್ಲ
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳು ನಡೆದಿವೆ. ಈ ಸಂದರ್ಭ ಪ್ರಾಚೀನ ಶಿವಲಿಂಗವನ್ನು ವಿಸರ್ಜಿಸುವುದು ಸೂಕ್ತವಲ್ಲ. ಪ್ರಾಚ್ಯ ವಸ್ತು ಇಲಾಖೆಯ ನಿಯಮದ ಅನ್ವಯ ದೇವಾಲಯದ ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸುವುದು ಕೂಡ ಅತ್ಯಗತ್ಯವಾಗಿದೆ.1992 ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಅಧಿಕೃತವಾಗಿ ನಿರ್ವಹಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಗೆ ಸೂಕ್ತವಾದ ಆದೇಶ ಪಡೆದಿಲ್ಲ. ಈ ಎಲ್ಲ ಹಿನ್ನೆಲೆಯನ್ನು ಗಮನಿಸಿ ಪ್ರಾಚೀನ ಶಿವಲಿಂಗವನ್ನು ಯಥಾವತ್ತಾಗಿ ರಕ್ಷಿಸುವಂತೆ ಕೋರಿರುವುದಾಗಿ ತಿಳಿಸಲಾಗಿದೆ.

ಮೇ 24 ರಂದು ವಿಸರ್ಜಿಸಲು ಚರ್ಚೆ
ದೇವಸ್ಥಾನ ವ್ಯವಸ್ಥಾನ ಸಮಿತಿ ಅಧ್ಯಕ್ಷರಾದ ಬಿ.ಎಸ್. ತಮ್ಮಯ್ಯ ಅವರು ಈಗಾಗಲೇ ಪೂರ್ವ ನಿಶ್ಚಯದಂತೆ ಕ್ಷೇತ್ರದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದಿದ್ದು, ಹಳೆಯ ಶಿವಲಿಂಗ ವಿಸರ್ಜಿಸುವ ಸಂಬಂಧ ಕ್ಷೇತ್ರ ತಂತ್ರಿಗಳ ನಿರ್ದೇಶನದಂತೆ ಮೇ 24 ರಂದು ವಿಸರ್ಜಿಸಲು ಚರ್ಚೆ ನಡೆದಿತ್ತು ಈಗ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವ ಹಿನ್ನಲೆಯಲ್ಲಿ ಕಾನೂನನ್ನು ಪಾಲನೆ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications