ಕೊಡಗು ಸಂತ್ರಸ್ತರಿಗೆ ತಜ್ಞ ಮನೋವೈದ್ಯರಿಂದ ಆಪ್ತ ಸಮಾಲೋಚನೆ
Recommended Video
ಕೊಡಗು, ಆಗಸ್ಟ್ 21: ಕೊಡಗು ಜಿಲ್ಲೆಯ ಭಾರಿ ಮಳೆಯಿಂದ ಪ್ರವಾಹವೇ ಸೃಷ್ಟಿಯಾಗಿ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಜೀವ ಹಾನಿ ಅನುಭವಿಸಿರುವ ಕುಟುಂಬಗಳಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಬದುಕಿನಲ್ಲಿ ಭರವಸೆ ಮೂಡಿಸಲು ಮಾನಸಿಕ ತಜ್ಞರಿಗೆ ಸಮಾಲೋಚನೆ ಮೂಡಿಸುವ ಕಾರ್ಯ ಆರಂಭಿಸಲಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುರುವ ಮಾನಸಿಕ ತಜ್ಞ ವೈದ್ಯರಾದ ಡಾ. ರೂಪೇಶ್ ಗೋಪಾಲ್ ಅವರು ಈ ನಿಟ್ಟಿನಲ್ಲಿ ಈಗಾಗಲೆ ಕಾರ್ಯತತ್ಪರರಾಗಿದ್ದು, ಜಿಲ್ಲೆಯ ವೈದ್ಯರುಗಳು, ಮಾನಸಿಕ ತಜ್ಞರು ಹಾಗೂ ಎಂಎಸ್ಡಬ್ಲ್ಯೂ ವಿದ್ಯಾರ್ಥಿಗಳಿಗೆ ಈ ಕುರಿತು ತರಬೇತಿಯನ್ನು ಮಂಗಳವಾರ ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು.
ಪ್ರವಾಹಕ್ಕೆ ನಲುಗಿದ ತಾಯ್ನಾಡಿಗೆ ಮಿಡಿದ ಬೆಂಗಳೂರು ಕೊಡವ ಸಮಾಜ!
ಮಾನಸಿಕ ರೋಗ ತಜ್ಞರಾಗಿರುವ ಡಾ. ರೂಪೇಶ್ ಗೋಪಾಲ್ ಅವರು ಭಾರತೀಯ ಸೇನೆಯಲ್ಲಿ ಸುಮಾರು 5 ವರ್ಷಗಳ ಕಾಲ ಮಾನಸಿಕ ರೋಗ ತಜ್ಞರಾಗಿ ಸೇವೆ ಸಲ್ಲಿಸಿದ್ದು, ಸೈನ್ಯದಲ್ಲೂ ಅವರು, ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕಾರ್ಯವೆಸಗಿದ ಅಪಾರ ಅನುಭವ ಹೊಂದಿದ್ದಾರೆ.
ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರೊಂದಿಗೆ ಸಮಾಲೋಚನೆ
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಆಸ್ತಿ-ಪಾಸ್ತಿ ನಷ್ಟ ಅನುಭವಿಸಿ ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬಬೇಕಿದೆ. ಆರೋಗ್ಯ ಪೂರ್ಣ ಮನಸ್ಸುಗಳನ್ನು ನಿರ್ಮಿಸುವ ಮೂಲಕ ಸಂತ್ರಸ್ತರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡಿಸುವ ಕಾರ್ಯ ಆಗಬೇಕಿದೆ. ದೇಹದ ಆರೋಗ್ಯಕ್ಕೆ ನೀಡಿದಷ್ಟೇ ಆದ್ಯತೆಯನ್ನು ಮನಸ್ಸಿನ ಆರೋಗ್ಯಕ್ಕೂ ನೀಡಬೇಕಿದೆ. ಇದರ ಪ್ರಯತ್ನವಾಗಿಯೇ ಜಿಲ್ಲೆಯಲ್ಲಿ ಸಂತ್ರಸ್ತರಿಗಾಗಿ ಸರ್ಕಾರದಿಂದ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸುವ ಕಾರ್ಯ ಇಂದಿನಿಂದಲೇ ಪ್ರಾರಂಭಗೊಳಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ
ಸರ್ಕಾರ ನಿಮ್ಮೊಂದಿಗೆ ಇದೆ ಎನ್ನುವ ಭರವಸೆ ಮೂಡಿಸಬೇಕು
ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರಿಗೆ ಸದ್ಯ ಆ ಶಾಕ್ನಿಂದ ಹೊರತರುವ ಕಾರ್ಯ ಆಗಬೇಕಿದೆ. ದಿಢೀರ್ ತೊಂದರೆಗೆ ಒಳಗಾದವರ ಮನಸ್ಸು, ಬುದ್ದಿ ಚುರುಕಾಗಿರುವುದಿಲ್ಲ, ದೇಹದ ಹಾರ್ಮೋನ್ನಲ್ಲಿ ವ್ಯತ್ಯಾಸವಾಗುವುದರಿಂದ ಅವರಲ್ಲಿ ಯೋಚನಾ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು, ಈಗಾಗಲೆ ಬಹಳಷ್ಟು ಜನ ಇದಕ್ಕೆ ಒಳಗಾಗಿರುವ ಸಾಧ್ಯತೆ ಇದ್ದು, ಗಾಬರಿ, ಹೆದರಿಕೆ ಅವರ ಮೊದಲ ಸಮಸ್ಯೆಯಾಗಿದೆ. ಇದು ಮಾನಸಿಕ ತೊಂದರೆಯ ಮೊದಲ ಗುಣಲಕ್ಷಣವಾಗಿದ್ದು, ಕಿರಿಕಿರಿ, ಸಿಟ್ಟು, ಮಕ್ಕಳ ಮೇಲೆ, ತಂದೆ-ತಾಯಿ, ಗಂಡ-ಹೆಂಡತಿಯರ ನಡುವೆ ಆಸಕ್ತಿ ಮತ್ತು ಸಿಟ್ಟಾಗುವುದು ಇಂತಹ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ.
ಪ್ರೀತಿ ಪಾತ್ರರನ್ನು ಅಥವಾ ಮನೆಗಳನ್ನು ಕಳೆದುಕೊಂಡು, ಮುಂದೇನು ಎನ್ನುವ ಭಯ ಅವರಲ್ಲಿ ಆವರಿಸಿರುತ್ತದೆ. ಇಂತಹವರಿಗೆ ಸಮಾಲೋಚನೆ ನಡೆಸುವ ಮೂಲಕ, ಸರ್ಕಾರ ನಿಮ್ಮೊಂದಿಗೆ ಸದಾ ಇದೆ. ಪರಿಹಾರ ಕಾರ್ಯಗಳನ್ನು ಮಾಡುತ್ತಿದೆ. ಸದ್ಯ ಸರ್ಕಾರ ಜನರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಮಾಹಿತಿ ಪಡೆದು, ಶೀಘ್ರದಲ್ಲೇ ಪುನರ್ವಸತಿ ಕಾರ್ಯ, ಮನೆ ಕಳೆದುಕೊಂಡವರಿಗೆ ಮನೆ, ಜೀವ ಹಾನಿ ಅನುಭವಿಸಿರುವವರಿಗೆ ಹಣಕಾಸಿನ ನೆರವು ಪರಿಹಾರ ದೊರಕಿಸುವ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಎಲ್ಲೆಲ್ಲಿ ಸಂತ್ರಸ್ತರಿಗೆ ಸಮಾಲೋಚನೆ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿಯೇ ಅತವೃಷ್ಟಿಯಿಂದ ಹೆಚ್ಚು ಹಾನಿ ಸಂಭವಿಸಿದೆ. ಮಡಿಕೇರಿಯಲ್ಲಿ ಸಂತ್ರಸ್ತರಿಗಾಗಿ 11 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮೈತ್ರಿ ಹಾಲ್, ಕೂರ್ಗ್ ಕಮ್ಯುನಿಟಿ ಹಾಲ್, ಅಂಬೇಡ್ಕರ್ ಭವನ, ಚೌಡೇಶ್ವರಿ ಹಾಲ್, ಬ್ರಾಹ್ಮಣರ ಕಲ್ಯಾಣ ಮಂಟಪ, ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪ, ಕೊಡವ ಸಮಾಜ, ಓಂಕಾರ ಸದನ, ಜಿಪಂ ವಿದ್ಯಾನಗರ, ಜನರಲ್ ತಿಮ್ಮಯ್ಯ ಸ್ಕೂಲ್, ಜೋಸೆಫ್ ಸ್ಕೂಲ್ ಇಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಮಾನಸಿಕ ಸಮಾಲೋಚನೆಗಾಗಿ ತಂಡವನ್ನು ರಚಿಸಿ, ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ಹೆದರಿಕೆ, ಬೇಜಾರು, ಸಿಟ್ಟು ಈ ಮೂರು ಅಂಶಗಳನ್ನು ನಿವಾರಿಸಬೇಕಿದೆ
ಏಕಾಏಕಿ ಸುರಿದ ಭಾರಿ ಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದವರಿಗೆ ಮಾನಸಿಕವಾಗಿ ಮೊದಲು ಕಂಡುಬರುವ ಹೆದರಿಕೆ, ಬೇಜಾರು ಮತ್ತು ಸಿಟ್ಟು, ಈ ಮೂರು ಅಂಶಗಳನ್ನು ನಿವಾರಿಸುವ ಗುರುತರ ಕಾರ್ಯ ಮಾನಸಿಕ ತಜ್ಞ ಸಮಾಲೋಚಕರು ಮಾಡಬೇಕಿದೆ. ಸಂತ್ರಸ್ತರ ಮಾತುಗಳನ್ನು ತಾಳ್ಮೆಯಿಂದ ಕೇಳಿ, ಬೇಸರಿಸಿಕೊಳ್ಳಬೇಡಿ, ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಇದೇ ಸೂಕ್ತ ಸಮಯವಾಗಿದೆ. ಇಲ್ಲದಿದ್ದಲ್ಲಿ, ಅವರ ಯೋಚನಾ ಲಹರಿ ಋಣಾತ್ಮಕ ಅಂಶಗಳತ್ತ ಸೆಳೆಯುವ ಸಾಧ್ಯತೆಗಳಿರುತ್ತವೆ. ಖಿನ್ನತೆ, ಮಾದಕಗಳತ್ತ ಮನಸ್ಸು ಜಾರುವುದನ್ನು ತಡೆಗಟ್ಟುವುದು ಸಮಾಲೋಚಕರ ಕರ್ತವ್ಯವಾಗಿದೆ. ಕೆಲ ಕಿಡಿಗೇಡಿಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಕಾರ್ಯ ಮಾಡುವ ಸಾಧ್ಯತೆಗಳಿರುತ್ತವೆ. ಇದನ್ನು ಕೂಡ ಮಾನಸಿಕ ಸ್ಥೈರ್ಯ ತುಂಬುವ ಸಮಯದಲ್ಲಿ ಸಮಾಲೋಚಕರು ಇಂತಹ ಸಾಧ್ಯತೆಗಳ ಬಗ್ಗೆ ಸಂತ್ರಸ್ತರಲ್ಲಿ ಮನವರಿಕೆ ಮಾಡಿಕೊಡಬೇಕು.
ಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ: ಸಿಎಂ
ಯೋಗಾಭ್ಯಾಸಕ್ಕೆ 30 ಜನರ ತಂಡ
ವಿಚಲಿತಗೊಂಡಿರುವ ಮನಸ್ಸನ್ನು ಶಾಂತಗೊಳಿಸಲು, ಸಮಾಧಾನಗೊಳಿಸಲು ಯೋಗ ಒಳ್ಳೆಯ ಮಾರ್ಗವಾಗಿದೆ. ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ, ಸಂತ್ರಸ್ತರ ಮನಸ್ಸನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ 30 ಜನರ ತಂಡ ಕೊಡಗು ಜಿಲ್ಲೆಗೆ ಆಗಮಿಸಿದ್ದು, ಇವರು ಪರಿಹಾರ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಯೋಗಾಭ್ಯಾಸ ಮಾಡಿಸಲಿದ್ದಾರೆ ಎಂದು ಡಾ. ರೂಪೇಶ್ ತಿಳಿಸಿದರು.