ಪುಂಡ ಪೋಕರಿಗಳಿಗೆ ಆಶ್ರಯ ತಾಣವಾಯಿತಾ ಈ ಸುಂದರ ಚಿಕ್ಲಿಹೊಳೆ?
ಮಡಿಕೇರಿ, ಜೂನ್ 10: ಮುಂಗಾರು ಆರಂಭವಾಗಿ ಮಳೆ ಧೋ ಸುರಿಯುತ್ತಿದ್ದಂತೆಯೇ ಕೊಡಗಿನಲ್ಲಿರುವ ಅತಿ ಚಿಕ್ಕ ಜಲಾಶಯ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿ ವೃತ್ತಾಕಾರವಾಗಿ ಧುಮ್ಮಿಕ್ಕುವ ಜಲಧಾರೆಯ ದೃಶ್ಯ ಮನಮೋಹಕವಾಗಿರುತ್ತದೆ. ಇದನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ.
Recommended Video
ಮಳೆಗಾಲ ಕಳೆದು ಬೇಸಿಗೆಯ ದಿನ ಬರುತ್ತಿದ್ದಂತೆಯೇ ಚಿಕ್ಲಿಹೊಳೆ ತನ್ನ ಸೌಂದರ್ಯ ಕಳೆದುಕೊಂಡು ಅನಾಥವಾಗಿ ಬಿಡುತ್ತದೆ. ಹೀಗಾಗಿ ಪ್ರವಾಸಿಗರು ಇತ್ತ ಸುಳಿಯುವುದಿಲ್ಲ. ಜತೆಗೆ ಸಂಬಂಧಿಸಿದ ಸಿಬ್ಬಂದಿಯಾಗಲೀ, ಕಾವಲುಗಾರರಾಗಲೀ ಇಲ್ಲಿರದ ಕಾರಣದಿಂದಾಗಿ ಪುಂಡಪೋಕರಿಗಳ ಆವಾಸತಾಣವಾಗಿ ಬಿಡುತ್ತದೆ. ಈ ವೇಳೆ ಅಕ್ರಮವಾಗಿ ಜಲಾಶಯಕ್ಕೆ ಪ್ರವೇಶಿಸುವ ಪುಂಡರು ಮದ್ಯ, ಗಾಂಜಾ ಸೇವಿಸುವುದು, ಪಾರ್ಟಿ ಮಾಡುವುದರಿಂದ ಅಕ್ರಮ ಚಟುವಟಿಕೆಯ ಕೇಂದ್ರವಾಗಿ ಬಿಡುತ್ತದೆ.
ಚಿತ್ರಗಳು : ಕೊಡಗಿನ ಚಿಕ್ಲಿಹೊಳೆಯಲ್ಲೀಗ ಜಲವೈಭವ!
ನೀರಾವರಿ ಇಲಾಖೆಯ ನಿರ್ಲಕ್ಷ್ಯ
ಚಿಕ್ಲಿಹೊಳೆ ಜಲಾಶಯ ಪ್ರಕೃತಿಯ ರಮಣೀಯ ವಾತಾವರಣದಲ್ಲಿ ನೆಲೆ ನಿಂತಿರುವುದರಿಂದ ಅಭಿವೃದ್ಧಿಗೊಳಿಸಿದ್ದೇ ಆದರೆ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಜಲಾಶಯ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿದ್ದು, ದಿನದಿಂದ ದಿನಕ್ಕೆ ತನ್ನ ಅವಶೇಷವನ್ನು ಕಳೆದುಕೊಂಡು ಅನಾಥವಾಗುವುದರೊಂದಿಗೆ ತನ್ನ ವೈಭವನ್ನು ಕಳೆದುಕೊಳ್ಳುತ್ತಿದೆ.
ಮಡಿಕೇರಿಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಚಿಕ್ಲಿಹೊಳೆ ಜಲಾಶಯಕ್ಕೆ ಯಾವುದೇ ಬಸ್ ಸೌಲಭ್ಯವಿಲ್ಲ. ಇಲ್ಲಿಗೆ ಸ್ಥಳೀಯರು ಬಾರದ ಕಾರಣದಿಂದ ಯಾವುದೇ ಭಯವಿಲ್ಲದೆ ಕೆಲವರು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ ಎನ್ನುವುದು ಕೆಲವರ ಆರೋಪವಾಗಿದೆ.
1982ಲ್ಲಿ ನಿರ್ಮಾಣವಾದ ಜಲಾಶಯ
ಕುಶಾಲನಗರ ಹಾಗೂ ಪಿರಿಯಾಪಟ್ಟಣ ವ್ಯಾಪ್ತಿಯ ಸುಮಾರು 18 ಗ್ರಾಮಗಳ 862 ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುವ ಉದ್ದೇಶದಿಂದ ಕಾವೇರಿ ನದಿಯ ಉಪನದಿಯಾದ ಚಿಕ್ಲಿಹೊಳೆಗೆ 1982ರಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಜಲಾಶಯ ನಿರ್ಮಿಸಲಾಗಿದೆ. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ನಿರ್ಮಾಣವಾಯಿತು. ಒಂದೆಡೆ ಕಾಫಿ ತೋಟ ಮತ್ತೊಂದೆಡೆ ಅರಣ್ಯ ಇದರ ನಡುವಿನ ಪ್ರಕೃತಿಯ ಮಡಿಲಲ್ಲಿ ಜಲಾಶಯ ನಿರ್ಮಾಣಗೊಂಡಿದೆ.
ಈ ಜಲಾಶಯದಿಂದ ಒಂದಷ್ಟು ರೈತರಿಗೆ ಉಪಯೋಗವಾಗುತ್ತಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಇದರ ನೀರು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಒಂದು ವೇಳೆ ನಾಲೆಗಳು ದುರಸ್ತಿಗೊಂಡು ನೀರು ಸಮರ್ಪಕವಾಗಿ ಹರಿದಿದ್ದೇ ಆದರೆ ವಿರೂಪಾಕ್ಷಪುರ, ರಸೂಲ್ ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಆದರೆ ಅದು ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಚಿಕ್ಲಿಹೊಳೆ ಜಲಾಶಯ: ಎಚ್ಚರಿಕೆ ಫಲಕ ಅಳವಡಿಕೆಗೆ ಕಾರಣಗಳೇನು?
ಜಲಾಶಯಕ್ಕೆ ಒಂದೇ ಕ್ರೆಸ್ಟ್ ಗೇಟ್
ಈ ಜಲಾಶಯದ ಹೂಳನ್ನು ಸಮರ್ಪಕವಾಗಿ ತೆಗೆಯದ ಕಾರಣ ಹೆಚ್ಚು ನೀರು ಶೇಖರಣೆಯಾಗುತ್ತಿಲ್ಲ ಎಂಬ ಆರೋಪವೂ ಇದೆ. ಜಲಾಶಯದಲ್ಲಿ ದೇವಾಲಯವೊಂದು ಮುಳುಗಡೆಯಾಗಿದ್ದು, ಬೇಸಿಗೆ ಬರುತ್ತಿದ್ದಂತೆಯೇ ನೀರು ಕಡಿಮೆಯಾದಾಗ ದೇವಾಲಯ ಕಾಣಸಿಗುತ್ತದೆ. ಈ ಜಲಾಶಯದಲ್ಲಿ ಇರುವುದು ಒಂದೇ ಕ್ರೆಸ್ಟ್ ಗೇಟ್ ಜಲಾಶಯದ ಗರಿಷ್ಠ ಮಟ್ಟಕ್ಕಿಂತ ಹೆಚ್ಚಿನ ನೀರು ತುಂಬಿದ ಸಂದರ್ಭ ಅದು ತಾನಾಗಿಯೇ ಹರಿದು ಹೋಗಲು ಅನುಕೂಲವಾಗುವಂತೆ ಜಲಾಶಯದ ಒಂದು ಬದಿಯಲ್ಲಿ ವೃತ್ತಾಕಾರದ ತೂಬನ್ನು ಮಾಡಿದ್ದಾರೆ. ಇದರ ಮೂಲಕ ನೀರು ಹರಿದು ಹೋಗುತ್ತದೆ. ಮಳೆ ಸುರಿದು ಜಲಾಶಯ ತುಂಬಿದಾಗ ಹೆಚ್ಚಾದ ನೀರು ವೃತ್ತಾಕಾರವಾಗಿ ಧುಮುಕುತ್ತಾ ತೂಬಿನ ಮೂಲಕ ಹರಿದು ಹೋಗುವ ದೃಶ್ಯ ಸುಂದರವಾಗಿರುತ್ತದೆ.
ಈ ಜಲಾಶಯವನ್ನು ಕಾಯಲು ಕಾವಲುಗಾರರನ್ನು ನೇಮಿಸದ ಕಾರಣ ಜಲಾಶಯದ ಉದ್ದಕ್ಕೂ ನಿರ್ಮಿಸಲಾಗಿದ್ದ ಕಬ್ಬಿಣದ ಸರಪಳಿಗಳು, ಯಂತ್ರೋಪಕರಣಗಳ ಬಿಡಿಭಾಗಗಳು ಕಳ್ಳರ ಪಾಲಾಗಿದೆ.
ದುರಸ್ತಿಗೆ ಮುಂದಾಗದ ಅಧಿಕಾರಿಗಳು
ಜಲಾಶಯದ ಎದುರೇ ಇರುವ ಮುಖ್ಯ ನಾಲೆಯಲ್ಲಿ ಆರಂಭದಲ್ಲಿ ಕಟ್ಟಿದ ಕಲ್ಲು ಹಾಸುಗಳು ಕಿತ್ತು ಕಾಲುವೆ ಮೂಲ ಸ್ವರೂಪ ಕಳೆದುಕೊಂಡಿದ್ದರೂ ಮುಖ್ಯ ಕಾಲುವೆಯ ದುರಸ್ತಿಗೆ ಅಧಿಕಾರಿಗಳು ಮುಂದಾಗದಿರುವುದು ಕಂಡು ಬರುತ್ತಿದೆ. ನೀರು ಸರಾಗವಾಗಿ ಹರಿಯಬೇಕಾಗಿದ್ದ ಕಾಲುವೆಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಅವುಗಳನ್ನು ದುರಸ್ತಿಪಡಿಸದ ಹೊರತು ನೀರು ಹರಿಯುವುದು ಕನಸಿನ ಮಾತೇ ಸರಿ.
ಇತ್ತೀಚೆಗಿನ ದಿನಗಳಲ್ಲಿ ಈ ಜಲಾಶಯಕ್ಕೆ ಮೋಜು ಮಸ್ತಿ ಮಾಡಲು ಬರುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಕೆಲವು ಪುಂಡ ಪೋಕರಿಗಳು ಇಲ್ಲಿಗೆ ಬರುತ್ತಿರುವುದರಿಂದ ಅಂತಹವರು ಜಲಾಶಯದ ಬಳಿಯೇ ಮದ್ಯ, ಗುಟ್ಕಾ, ಗಾಂಜಾ ಸೇವಿಸುವುದು, ಪಾರ್ಟಿ ಮಾಡುವುದು ಹೀಗೆ ಅಕ್ರಮ ಚಟುವಟಿಕೆ ನಡೆಸುತ್ತಿರುತ್ತಾರೆ. ಕೆಲವರು ಜಲಾಗಾರದೊಳಗೆ ಅಕ್ರಮವಾಗಿ ಪ್ರವೇಶಿಸಿ ಅನೈತಿಕ ಚಟುವಟಿಕೆ ನಡೆಸುತ್ತಾರೆ ಎಂಬುದಾಗಿ ಸ್ಥಳೀಯರು ದೂರುತ್ತಿದ್ದಾರೆ.
ಉತ್ತಮ ವಾತಾವರಣ ನಿರ್ಮಾಣವಾಗಲಿ
ಜಿಲ್ಲಾಡಳಿತ ಇತ್ತ ಕಡೆ ಗಮನಹರಿಸಿ ಪೊಲೀಸ್ ಕಾವಲು ಹಾಕುವ ಮೂಲಕ ಪುಂಡ ಪೋಕರಿಗಳ ಹಾವಳಿಯನ್ನು ತಡೆಗಟ್ಟಬೇಕಿದೆ. ಜತೆಗೆ ಚಿಕ್ಲಿ ಜಲಾಶಯಕ್ಕೆ ಎಲ್ಲ ರೀತಿಯ ಪ್ರವಾಸಿಗರು ನಿರ್ಭಯವಾಗಿ ಬಂದು ಹೋಗುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ.