ಬಿಜೆಪಿ, ಕಾಂಗ್ರೆಸ್ 'ಮೊಟ್ಟೆ' ಜಗಳಕ್ಕೆ ಮತ್ತೊಂದು ವೇದಿಕೆ ಸಜ್ಜು
ಕೊಡಗು ಜಿಲ್ಲಾ ಪ್ರವಾಸದ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆತದ ಪ್ರಕರಣ ಹತ್ತು ಹಲವು ತಿರುವುಗಳನ್ನು ಪಡೆದುಕೊಂಡಿದೆ. ಈಗ, ಎರಡು ಪಕ್ಷಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಇನ್ನೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ಸಿದ್ದವಾಗುತ್ತಿವೆ.
ಮೊಟ್ಟೆ ಎಸೆದವನು ಬಿಜೆಪಿಯ ಅಥವಾ ಕಾಂಗ್ರೆಸ್ಸಿನ ಕಾರ್ಯಕರ್ತನೋ ಎನ್ನುವ ವಿಚಾರದಲ್ಲಿ ಎರಡೂ ಪಕ್ಷಗಳು ಸಾರ್ವಜನಿಕರನ್ನು ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿವೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ.
ಮೊಟ್ಟೆ ಎಸೆತದ ಪ್ರಕರಣ ನಡೆದ ದಿನದಿಂದಲೇ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿದೆ. ಈಗ ಈ ವಿಚಾರವನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕೆ ಕೌಂಟರ್ ಕೊಡಲು ಬಿಜೆಪಿ ಕೂಡಾ ಸಜ್ಜಾಗುತ್ತಿದೆ.
ಕಾಂಗ್ರೆಸ್ ನಡೆಸಲು ನಿರ್ಧರಿಸಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಡ್ಡು ನೀಡಲು ಅಂದೇ ಬಿಜೆಪಿ ಜನಜಾಗೃತಿ ಸಮಾವೇಶ ನಡೆಸಲು ಕೊಡಗು ಜಿಲ್ಲಾ ಬಿಜೆಪಿ ಘಟಕ ನಿರ್ಧರಿಸಿದೆ. ಹಾಗಾಗಿ, ಮೊಟ್ಟೆ ಜಗಳಕ್ಕೆ ಮತ್ತೊಂದು ವೇದಿಕೆ ಸಿದ್ದವಾಗುತ್ತಿದೆ.
|
ಮೊಟ್ಟೆ ಎಸೆದ ವ್ಯಕ್ತಿ ಸಂಘ ಪರಿವಾರದ ಸದಸ್ಯ
ಮೊಟ್ಟೆ ಎಸೆದ ವ್ಯಕ್ತಿ ಸಂಘ ಪರಿವಾರದ ಸದಸ್ಯ ಎಂದು ಕಾಂಗ್ರೆಸ್ಸಿನವರು ದೂರುತ್ತಿದ್ದರೆ, ಅವನು ಹಿಂದೆ ಜೆಡಿಎಸ್ ನಲ್ಲಿದ್ದು ಈಗ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ ಎಂದು ಬಿಜೆಪಿ ಆತನಿಂದ ಹೇಳಿಕೆಯನ್ನೂ ಪಡೆದುಕೊಂಡಿದೆ. ಕೆಪಿಸಿಸಿಯ ಐಟಿ ಸೆಲ್, ಮೊಟ್ಟೆ ಎಸೆದವ ಹಿಂದೆ ಆರ್ಎಸ್ಎಸ್ ಪಥಸಂಚಲನದಲ್ಲಿ ಗಣವಸ್ತ್ರದೊಂದಿಗೆ ಭಾಗವಹಿಸಿದ್ದ ಫೋಟೋ ಸಮೇತ ಟ್ವೀಟ್ ಮಾಡಿದೆ.

ಕೊಡಗು ಚಲೋ, ಕೊಡಗು ಎಸ್ಪಿ ಮುತ್ತಿಗೆ ಕಾರ್ಯಕ್ರಮ
ಇದೇ ಆಗಸ್ಟ್ 26ರಂದು ಕೊಡಗು ಚಲೋ, ಕೊಡಗು ಎಸ್ಪಿ ಮುತ್ತಿಗೆ ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ಸಿದ್ದವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ರೂಪುರೇಷೆಯನ್ನು ರಾಜ್ಯ ಕಾಂಗ್ರೆಸ್ ಸಿದ್ದ ಪಡಿಸುತ್ತಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಯೋಜನೆಯನ್ನು ಹಾಕಿಕೊಂಡಿದೆ. ರಾಜ್ಯ ಮಟ್ಟದ ಪ್ರಮುಖ ನಾಯಕರು ಅಂದಿನ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಬಿಜೆಪಿ ಕೂಡಾ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ
ಇದಕ್ಕೆ ಕೌಂಟರ್ ಕೊಡಲು ಅಂದೇ ಬಿಜೆಪಿ ಕೂಡಾ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದೆ. ಈ ಸಂಬಂಧ ಹೇಳಿಕೆಯನ್ನು ನೀಡಿರುವ ಅಪ್ಪಚ್ಚು ರಂಜನ್, "ಸುಮಾರು ಐವತ್ತು ಸಾವಿರ ಕರಪತ್ರವನ್ನು ಮನೆಮನೆಗೆ ಹಂಚಲಿದ್ದೇವೆ. ಸಿದ್ದರಾಮಯ್ಯನವರು ವಿನಾ ಕಾರಣ ರಾಜ್ಯದಲ್ಲಿ ತಮ್ಮ ಅಸಂಬದ್ದ ಹೇಳಿಕೆಯಿಂದ ಅಶಾಂತಿಯನ್ನು ಮೂಡಿಸುತ್ತಿದ್ದಾರೆ. ಟಿಪ್ಪುವನ್ನು ವೈಭವೀಕರಿಸುತ್ತಿದ್ದಾರೆ. ನಾವು ಆಗಸ್ಟ್ 26ರಂದು ಸಮಾವೇಶ ನಡೆಸಲಿದ್ದೇವೆ"ಎಂದು ಶಾಸಕರು ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ 'ಮೊಟ್ಟೆ'ಜಗಳಕ್ಕೆ ಮತ್ತೊಂದು ವೇದಿಕೆ ಸಜ್ಜು
ಹಾಗಾಗಿ, ಆಗಸ್ಟ್ 26ರಂದು ಎರಡು ರಾಷ್ಟ್ರೀಯ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಕೊಡಗು ಸಜ್ಜಾಗಲಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಮಾವೇಶಗಳು ಬಿಜೆಪಿ-ಕಾಂಗ್ರೆಸ್ಸಿನ ಚುನಾವಣಾ ರಣತಂತ್ರದ ಭಾಗವಾಗಲಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ಗೆಲ್ಲಲಿದೆ ಎನ್ನುವ ವಿಶ್ವಾಸದ ಮಾತನ್ನು ಸಿದ್ದರಾಮಯ್ಯ ಆಡಿದ್ದಾರೆ.












Click it and Unblock the Notifications