ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ
ಮಡಿಕೇರಿ, ಆಗಸ್ಟ್ 26 : ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅನುತ್ತೀರ್ಣಗೊಂಡ ಕಾರಣ ತಾನು ಮಲಗುವ ಕೋಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕೊಡಗಿನ ಗೋಣಿಕೊಪ್ಪ ಬಳಿಯ ಕಾಟ್ರಕೊಲ್ಲಿಯಲ್ಲಿ ನಡೆದಿದೆ.
ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಮೋನಿಕಾ (21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಕಾಟ್ರಕೊಲ್ಲಿ ನಿವಾಸಿ ಬಸವರಾಜು ಎಂಬುವರ ಮಗಳು ಮೋನಿಕಾ ಓದುವುದರಲ್ಲಿ ಹಿಂದೆ ಬಿದ್ದಿದ್ದಳು. ಆದರೆ ತಂದೆ ಬಸವರಾಜು ಗಾರೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಅಲ್ಲದೆ ಮಗಳನ್ನು ಕಷ್ಟಪಟ್ಟು ಓದಿಸುತ್ತಿದ್ದರು.

ಕಳೆದ ಬಾರಿ ಬರೆದ ಪರೀಕ್ಷೆಯ ಫಲಿತಾಂಶ ಬಂದಾಗ ಮೋನಿಕಾ ಅನುತ್ತೀರ್ಣಳಾಗಿದ್ದಳು. ಈ ವಿಚಾರ ಮನೆಯಲ್ಲಿ ಗೊತ್ತಾಗಿ, ಕಷ್ಟಪಟ್ಟು ಓದಿಸುತ್ತಿದ್ದೇವೆ. ನೀನು ಅನುತ್ತೀರ್ಣಳಾದರೆ ಹೇಗೆ ಎಂದು ಹೆತ್ತವರು ಬುದ್ಧಿವಾದ ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಕೆ ಮನೆಯವರೊಂದಿಗೆ ಮಾತನಾಡದೆ ಬೇಸರಗೊಂಡಿದ್ದಳು. ಆದರೆ ಮಗಳು ಸರಿ ಹೋಗುತ್ತಾಳೆ ಎಂದು ನಂಬಿ ಮನೆಯವರು ಸುಮ್ಮನಾಗಿದ್ದರು.
ಗಣೇಶ ಹಬ್ಬದ ದಿನವಾದ ಶುಕ್ರವಾರ ರಾತ್ರಿ ಎಂದಿನಂತೆ ತನ್ನ ಕೊಠಡಿಗೆ ಮಲಗಲೆಂದು ತೆರಳಿದ ಮೋನಿಕಾ, ಎಲ್ಲರೂ ಮಲಗಿದ ಬಳಿಕ ತನ್ನ ಚೂಡಿದಾರದ ವೇಲ್ ಬಳಸಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಲ್ಲರಿಗಿಂತ ಮೊದಲೇ ಏಳುತ್ತಿದ್ದ ಮೋನಿಕಾ ಶನಿವಾರ ಬೆಳಿಗ್ಗೆ ಬಹಳಷ್ಟು ಹೊತ್ತಾದರೂ ಕೊಠಡಿಯಿಂದ ಹೊರಗೆ ಬಾರದೆ ಇದ್ದಾಗ ಮನೆಯವರು ಬಾಗಿಲು ತೆರೆದು ನೋಡಿದ್ದಾರೆ. ಆಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications