ಯುಪಿಯಲ್ಲಿ ಮತ್ತೆ ಪೊಲೀಸ್ ಕಸ್ಟಡಿ ಸಾವು ಪ್ರಕರಣ: ಪೊಲೀಸ್ ಅಮಾನತು
ಲಕ್ನೋ, ನವೆಂಬರ್ 11: ಉತ್ತರ ಪ್ರದೇಶದಲ್ಲಿ ಮತ್ತೊಂದು ಪೊಲೀಸ್ ಕಸ್ಟಡಿ ಸಾವು ಪ್ರಕರಣ ವರದಿ ಆಗಿದೆ. ಅಪ್ರಾಪ್ತ ಬಾಲಕಿಯೋರ್ವಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿದ್ದ 22 ವರ್ಷ ಪ್ರಾಯದ ಯುವಕನೋರ್ವ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಕಾಸ್ಗಂಜ್ ಮೂಲದ ಅಲ್ತಾಫ್ ಎಂದು ಗುರುತಿಸಲಾಗಿದೆ. ಅಲ್ತಫ್ ಶೌಚಾಲಯದ ನೀರಿನ ಪೈಪ್ ಬಳಸಿಕೊಂಡು ತನ್ನ ಜಾಕೆಟ್ನ ದಾರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಈ ಪೈಪ್ಲೈನ್ ನೆಲದಿಂದ ಒಂದೆರಡು ಅಡಿ ಎತ್ತರದಲ್ಲಿ ಇದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಎಸ್ಎಚ್ಒ ಸೇರಿದಂತೆ ಕೊತ್ವಾಲಿ ಪೊಲೀಸ್ ಠಾಣೆಯ ಐವರು ಅಧಿಕಾರಿಗಳು ಅಮಾನತು ಮಾಡಲಾಗಿದೆ.
ಪೊಲೀಸ್ ಕಸ್ಟಡಿ ಸಾವು ಪ್ರಕರಣ: ಆಗ್ರಾಕ್ಕೆ ತೆರಳುತ್ತಿದ್ದ ಪ್ರಿಯಾಂಕಾಗೆ ತಡೆ
"ಅಲ್ತಾಫ್, ಕಾಸ್ಗಂಜ್ನಲ್ಲಿ ನಾಗ್ಲಾ ಸೈಯದ್ನ ಕಾರ್ಮಿಕ. 16 ವರ್ಷದ ಹಿಂದೂ ಬಾಲಕಿಯನ್ನು ಆತ ಅಪಹರಣ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪ ಮಾಡಿ ದೂರು ಸಲ್ಲಿಸಿದ ಕಾರಣದಿಂದಾಗಿ ವಿಚಾರಣೆ ನಡೆಸಲು ನಾವು ಆತನನ್ನು ಬಂಧನ ಮಾಡಿದೆವು. ಆತ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ನಾವು ಕೂಡಲೇ ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದೇವೆ, ಆದರೆ ಆತ ಚಿಕಿತ್ಸೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ," ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಇನ್ನು "ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಂಡು ಬಂದಿದೆ. ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂಬ ಬಗ್ಗೆ ನಮ್ಮಲ್ಲಿ ಆತನ ಕುಟುಂಬಸ್ಥರ ಲಿಖಿತ ಹೇಳಿಕೆ ಇದೆ," ಎಂದು ಕೂಡಾ ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್ ಕುಟುಂಬಸ್ಥರಲ್ಲಿ ಪ್ರಶ್ನಿಸಿದಾಗ ನಾವು ಬಡವರು, ನಮಗೆ ಯಾವ ವಿಚಾರವು ತಿಳಿದಿಲ್ಲ ಎಂದು ನುಡಿದಿದ್ದಾರೆ ಎಂದು ಮಾಧ್ಯಮವು ವರದಿ ಮಾಡಿದೆ.
ಹತ್ತನೇ ತರಗತಿಯ 16 ವರ್ಷದ ಬಾಲಕಿ ಹಲವು ದಿನಗಳಿಂದ ನಾಪತ್ತೆಯಾಗಿದ್ದು ಪೊಲೀಸರು ಬಾಲಕಿಯ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಾಲಕಿಯ ಪೋಷಕರ ಅಲ್ತಾಫ್ ವಿರುದ್ಧ ಅಪಹರಣದ ಆರೋಪ ಮಾಡಿದ್ದು ಈ ಹಿನ್ನೆಲೆ ಅಲ್ತಾಫ್ ಅನ್ನು ಪೊಲೀಸರು ಬಂಧನ ಮಾಡಿದ್ದರು. ಇನ್ನು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಅಲ್ತಾಫ್ ಮೃತ ದೇಹದ ಅಂತಿಮ ಸಂಸ್ಕಾರ ಬುಧವಾರ ಮಾಡಲಾಗಿದೆ.
ವಕೀಲರ ಹತ್ಯೆ: ಉತ್ತರ ಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದ ಪ್ರಿಯಾಂಕ
2-3 ಇಂಚು ಎತ್ತರದ ಪೈಪ್ನಲ್ಲಿ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?
ಅಲ್ತಾಫ್ನ ಪೋಷಕರು ಮಾತ್ರ ಇದು ಆತ್ಮಹತ್ಯೆ ಎಂಬುವುದನ್ನು ನಿರಾಕರಿಸಿದ್ದಾರೆ. ಶೌಚಾಲಯದ ನೀರಿನ ಪೈಪ್ ಎರಡು ಮೂರು ಅಡಿ ಎತ್ತರದಲ್ಲಿದೆ. ಹಾಗಿರುವಾಗ ಅದರಲ್ಲಿ ಜ್ಯಾಕೆಟ್ನ ದಾರದ ಮೂಲಕ ನೇಣು ಬಿಗಿದು ಕೊಳ್ಳಲು ಹೇಗೆ ಸಾಧ್ಯ? ಎಂದು ಪೋಷಕರು ಪ್ರಶ್ನಿಸಿದ್ದಾರೆ. "ಪೊಲೀಸರೇ ನನ್ನ ಮಗನನ್ನು ಹತ್ಯೆ ಮಾಡಿದ್ದಾರೆ," ಎಂದು ಅಲ್ತಾಫ್ ತಂದೆ ಚಂದ್ ಮಿಆನ್ ಹೇಳಿದ್ದಾರೆ. ಆದರೆ ಆ ಬಳಿಕ ವಿಡಿಯೋವೊಂದರಲ್ಲಿ ಅಲ್ತಾಫ್ ತಂದೆ "ನಾನು ಕೋಪದಲ್ಲಿ ಹಾಗೆ ಹೇಳಿದೆ. ನಾನು ಪೊಲೀಸರು ವೈದ್ಯರ ಬಳಿ ಮಾತನಾಡಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಪೊಲೀಸರು ನನ್ನ ಮಗನನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಕೈಗೊಂಡ ಎಲ್ಲಾ ಕ್ರಮಗಳಿಂದ ನಾನು ತೃಪ್ತನಾಗಿದ್ದೇನೆ," ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಸ್ಗಂಜ್ ಎಸ್ಪಿ ಬೋತ್ರೆ ರೋಹನ್ ಪ್ರಮೋದ್, "ಬಾಲಕಿಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಅಲ್ತಾಫ್ನನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಆತ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಶೌಚಾಲಯಕ್ಕೆ ಹೋಗಿ ಹಿಂದುರುಗಿ ಬಾರದ ಕಾರಣ ನಾವು ಹೋಗಿ ನೋಡಿದೆವು. ಆಗ ಆತ ಶೌಚಾಲಯದ ನೀರಿನ ಟ್ಯಾಪ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಆತ ಉಸಿರಾಡುತ್ತಿದ್ದ. ನಾವು ಕೂಡಲೇ ಸಮುದಾಯ ಆರೋಗ್ಯ ಕೆಂದ್ರಕ್ಕೆ ಕರೆದೊಯ್ದೆವು. ಆದರೆ ಆತ ಸಾವನ್ನಪ್ಪಿದ," ಎಂದು ಘಟನೆಯ ವಿವರಣೆ ನೀಡಿದ್ದಾರೆ.
ಈ ಪ್ರಕರಣದ ವಿಚಾರದಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಉತ್ತರ ಪ್ರದೇಶದಲ್ಲಿ ಯಾವುದಾದರೂ ಮಾನವ ಹಕ್ಕುಗಳು ಜೀವಂತವಾಗಿ ಉಳಿದಿದೆಯೇ?," ಎಂದು ಪ್ರಶ್ನಿಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, "ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ," ಎಂದು ಹೇಳಿದ್ದಾರೆ. "ಪೊಲೀಸ್ ಕಸ್ಟಡಿ ಪ್ರಕರಣಗಳಲ್ಲಿ ಯುಪಿ ಟಾಪ್ನಲ್ಲಿ ಇದೆ. ಈ ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಯಾರು ಕೂಡಾ ಸುರಕ್ಷಿತರಲ್ಲ," ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಲವಾರು ಪೊಲೀಸ್ ಕಸ್ಟಡಿ ಸಾವು ಪ್ರಕರಣಗಳು ನಡೆದಿದೆ. ಇತ್ತೀಚೆಗೆ 25 ಲಕ್ಷ ಕಳ್ಳತನ ಮಾಡಿದ ಆರೋಪದಲ್ಲಿ ಅರುಣ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದರು. ಆದರೆ ಆ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಆರೋಪ ಮಾಡಲಾಗಿದೆ.
(ಒನ್ಇಂಡಿಯಾ ಸುದ್ದಿ)