ಪಕ್ಷ ಹೇಳಿದ್ದಲ್ಲಿ ಚುನಾವಣೆಗೆ ಸ್ಫರ್ಧೆ ಎಂದ ಆದಿತ್ಯನಾಥ್
ಲಕ್ನೋ, ಜನವರಿ 02: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾನು ಕೂಡಾ ಸ್ಪರ್ಧಿಸುವುದಾಗಿ ಖಚಿತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದರೆ ಯಾವ ಕ್ಷೇತ್ರದಲ್ಲಿ ತಾನು ಸ್ಪರ್ಧೆಗೆ ಇಳಿಯುತ್ತೇನೆ ಎಂಬುವುದನ್ನು ಪಕ್ಷದ ನಾಯಕತ್ವ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ, ಮಥುರಾ ಅಥವಾ ತವರು ಜಿಲ್ಲೆ ಗೋರಖ್ಪುರದಿಂದ ಸ್ಪರ್ಧಿಸುವರೇ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಆದಿತ್ಯನಾಥ್, "ಪಕ್ಷ ಎಲ್ಲಿ ಹೇಳುತ್ತದೆಯೋ ಅಲ್ಲೇ ನಾನು ಚುನಾವಣೆ ಎದುರಿಸುತ್ತೇನೆ," ಎಂದು ಹೇಳಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಲು ಸಾಧ್ಯವಾಗದ ಕೆಲಸವೇನಾದರೂ ಇದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಯೋಗಿ, "ಏನೇ ಹೇಳಿದರೂ ಮಾಡಿದ್ದೇನೆ. ಯಾವುದೇ ಪಶ್ಚಾತ್ತಾಪ ಪಡಬೇಕಾದ ಯಾವುದೇ ಕೆಲಸ ಉಳಿದಿಲ್ಲ," ಎಂದರು.

ಜೆಪಿಯು "ಬಹಳ ದೊಡ್ಡ ಕುಟುಂಬ" ಮತ್ತು ಅದರಲ್ಲಿ ಜನರ ಪಾತ್ರವು ಕಾಲ ಕಳೆದಂತೆ ಬದಲಾವಣೆ ಆಗುತ್ತಲೇ ಹೋಗುತ್ತದೆ ಎಂದು ಹೇಳುವ ಮೂಲಕ ಪಕ್ಷದ ಟಿಕೆಟ್ ಪಡೆಯುವ ಬಗ್ಗೆ ಕೆಲವು ಹಾಲಿ ಶಾಸಕರಲ್ಲಿ ಕಂಡುಬಂದ ಕಳವಳವನ್ನು ನಿವಾರಿಸಲು ಮುಖ್ಯಮಂತ್ರಿ ಪ್ರಯತ್ನಿಸಿದರು.
"ಯಾರೂ ಕೂಡಾ ಸರ್ಕಾರಕ್ಕೆ ಅಗತ್ಯವಲ್ಲ"
"ಪ್ರತಿಯೊಬ್ಬ ವ್ಯಕ್ತಿಯ ಪಾತ್ರವು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಆಗಿರುತ್ತದೆ. ಯಾವುದೇ ವ್ಯಕ್ತಿಯಾಗಲಿ ಎಲ್ಲಾ ಸಂದರ್ಭದಲ್ಲೂ ಸರ್ಕಾರದಲ್ಲಿ ಇರಬೇಕು ಎಂಬ ಅಗತ್ಯವಿಲ್ಲ. ಕೆಲವೊಮ್ಮೆ ಸರ್ಕಾರದ ಕೆಲಸ ಬಿಟ್ಟು ಸಂಘಟನೆಯ ಕೆಲಸವನ್ನು ಮಾಡಬಹುದು," ಎಂದಿದ್ದಾರೆ. "ಚುನಾವಣೆಯ ದಿನಾಂಕ ಘೋಷಣೆ ಆದ ಬಳಿಕವೂ ಕೋವಿಡ್ ಮಾರ್ಗಸೂಚಿಯನ್ನು ಅನುಸರಣೆ ಮಾಡಲಾಗುವುದು," ಎಂದು ಮುಖ್ಯಮಂತ್ರಿ ಹೇಳಿದರು.
"2017 ರ ಚುನಾವಣೆಗೂ ಇದಕ್ಕೂ ಏನು ಬದಲಾವಣೆ"
ಇನ್ನು ಮಾಧ್ಯಮಗಳು 2017 ರ ಚುನಾವಣೆಗೂ ಇದಕ್ಕೂ ಏನು ಬದಲಾವಣೆ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಯೋಗಿ ಆದಿತ್ಯನಾಥ್, "2017 ರಲ್ಲಿ ನಾವು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧವಾಗಿ ಹೋರಾಡಿದ್ದೇವೆ. ಆದರೆ ಈ ಬಾರಿ ನಮ್ಮ ಸರ್ಕಾರ ಮಾಡಿದ ಕಾರ್ಯ ಸಾಧನೆಗಳ ಆಧಾರದ ಮೇಲೆ ಸ್ಫರ್ಧೆ ನಡೆಸುತ್ತೇವೆ," ಎಂದು ತಿಳಿಸಿದ್ದಾರೆ.
ಈ ವೇಳೆಯೇ ಅಧಿಕಾರಕ್ಕೆ ಬಂದ ನಂತರ ಗೃಹ ಗ್ರಾಹಕರಿಗೆ 300 ಉಚಿತ ಯೂನಿಟ್ ವಿದ್ಯುತ್ ನೀಡುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನೀಡಿದ ಭರವಸೆಯನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, "2017 ರ ಮೊದಲು ಐದು ಜಿಲ್ಲೆಗಳಲ್ಲಿ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು ಎಂದು ರಾಜ್ಯದ ಎಲ್ಲಾ ಜನರಿಗೆ ತಿಳಿದಿದೆ. ವಿದ್ಯುತ್ ನೀಡಲೂ ಸಾಧ್ಯವಾಗದವರು ಈಗ ಉಚಿತ ವಿದ್ಯುತ್ ಭರವಸೆ ನೀಡುತ್ತಾರಂತೆ.
2012-17ರ ನಡುವೆ ಸಮಾಜವಾದಿ ಪಕ್ಷವು ರಾಜ್ಯದಲ್ಲಿ ಆಡಳಿತ ನಡೆಸಿತ್ತು. ಆದರೆ ಸರಿಯಾಗಿ ವಿದ್ಯುತ್ ನೀಡಲು ಆ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ನಾವು ರಾಜ್ಯಾದ್ಯಂತ ವಿದ್ಯುತ್ ಸರಬರಾಜು ಮಾಡಿದ್ದೇವೆ. ಈಗ ಅವರು ಕೂಡಾ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ," ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇತ್ತೀಚೆಗೆ ಐಟಿ ದಾಳಿ ವಿಚಾರದಲ್ಲಿ ಎಸ್ಪಿ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, "ನೋಟು ಅಮಾನೀಕರಣಕ್ಕೆ 2016 ರಲ್ಲಿ ಎಸ್ಪಿ ಹಾಗೂ ಬಿಎಸ್ಪಿ ನಾಯಕರು ಯಾಕೆ ವಿರೋಧ ಮಾಡಿದ್ದರು ಎಂಬುವುದು ತೆರಿಗೆ ಇಲಾಖೆಗಳು ಎಸ್ಪಿ, ಬಿಎಸ್ಪಿ ನಾಯಕರುಗಳ ಮನೆ, ಸಂಸ್ಥೆಯ ಮೇಲೆ ದಾಳಿ ನಡೆಸಿ ಭಾರೀ ಹಣ ಲಭಿಸಿದಾಗ ತಿಳಿದು ಬಂದಿದೆ. ಈ ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿರಿಸಿದ್ದರು," ಎಂದಿದ್ದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications