ಫೋನಿನಲ್ಲಿ ಮಾತನಾಡುತ್ತ ಹಾವಿನ ಮೇಲೆ ಕೂತು ಸಾವಿಗೀಡಾದ ಮಹಿಳೆ!
ಗೋರಖ್ಪುರ, ಸೆಪ್ಟೆಂಬರ್ 12: ಫೋನಿನಲ್ಲಿ ಮಾತನಾಡುತ್ತಿದ್ದ ಮಹಿಳೆಯೊಬ್ಬರು ಗಮನಿಸದೆ ಹಾವಿನ ಮೇಲೆ ಕುಳಿತ ಪರಿಣಾಮ, ಹಾವು ಕಚ್ಚಿ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಗೋರ್ಖ್ಪುರದಲ್ಲಿ ನಡೆದಿದೆ.
ಗೋರ್ಖ್ಪುರದ ರಿವನ್ವ್ ಎಂಬ ಗ್ರಾಮದಲ್ಲಿ ಗೀತಾ ಎಂಬುವವರು ಥಾಯ್ಲೆಂಡ್ ನಲ್ಲಿರುವ ತಮ್ಮ ಪತಿ ಜೈ ಸಿಂಗ್ ಯಾದವ್ ಎಂಬುವವರೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು.
ತಮ್ಮ ಮನೆಯ ಬೆಡ್ ಮೇಲೆಯೇ ಹಾವು ಮಲಗಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಹಾಸಿಗೆ ಮೇಲೆ ಹಾಸಲಾಗಿದ್ದ ಹೊದಿಕೆಯ ಮೇಲಿದ್ದ ಡಿಸೈನ್ ಎಂದುಕೊಂಡು ಅವರು ಹಾವಿನ ಮೇಲೆಯೇ ಕುಳಿತುಬಿಟ್ಟರು.

ತಕ್ಷಣವೇ ಅವರಿಗೆ ಹಾವು ಕಚ್ಚಿತ್ತು. ಕೆಲವೇ ಸಮಯದಲ್ಲಿ ಅವರು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಈ ಘಟನೆಯಿಂದ ಕುಪಿತರಾದ ಊರಿನ ಜನರು ಹಾವನ್ನು ಹೊಡೆದು ಸಾಯಿಸಿದ್ದಾರೆ.
ಸಾಮಾನ್ಯವಾಗಿ ಹಾವುಗಳು ತಮಗೆ ಏಟಾದರೆ ಮಾತ್ರವೇ ಕಚ್ಚುತ್ತವೆ. ಈ ಘಟನೆಯಲ್ಲೂ ಹಾವಿರುವುದನ್ನು ಗಮನಿಸದ ಗೀತಾ ಅದರ ಮೇಲೆ ಕೂತಿದ್ದರಿಂದ, ಏಟು ತಿಂದ ಹಾವು ಅವರನ್ನು ಕಚ್ಚಿದೆ.
ಒಂದು ಮಾಹಿತಿಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಹಾವು ಕಚ್ಚಿ ಸಾಯುವವರ ಸಂಖ್ಯೆ ಸುಮಾರು 50,000! ಇಂದಿನ ಆಧುನಿಕ ವೈದ್ಯಕೀಯ ಆವಿಷ್ಕಾರಗಳಲ್ಲಿ ಹಾವುಕಡಿತಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆಯಾದರೂ ಕಡಿತಕ್ಕೊಳಗಾದ ವ್ಯಕ್ತಿ ತಕ್ಷಣವೇ ಪ್ರಥಮ ಚಿಕಿತ್ಸೆ ಪಡೆದು, ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾದರೆ ಮಾತ್ರ ಅವರನ್ನು ಬದುಕುಳಿಸಲು ಸಾಧ್ಯ ಎನ್ನುತ್ತಾರೆ ವೈದ್ಯರು. ಹಾವು ಕಚ್ಚಿದೊಡನೆ ಪಡೆಯಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಇಂದಿಗೂ ಹಲವರಿಗೆ ಅರಿವಿಲ್ಲ, ಅದರಿಂದಾಗಿಯೇ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂಬುದು ವೈದ್ಯರ ಅಭಿಪ್ರಾಯ.












Click it and Unblock the Notifications