ಯುಪಿ: ಕುತ್ತಿಗೆಗೆ ಹಾವು ಸುತ್ತಿಕೊಂಡು ಊರೆಲ್ಲಾ ಸುತ್ತಾಡಿ ಶೋಕಿ ಮಾಡಿದ; ಕೊನೆಗೆ ಸಾವು ತಂದುಕೊಂಡ
ಷಹಜಹಾನ್ಪುರ ಆಗಸ್ಟ್ 22: ಜನ ವಾಸಿಸುವ ಸ್ಥಳಗಳಲ್ಲಿ ಹಾವುಗಳು ಕಾಣಿಸಿಕೊಂಡರೆ ಅವುಗಳನ್ನು ಹಿಡಿಯಲು ಉರಗ ತಜ್ಞರ ಸಹಾಯ ಪಡೆಯಲಾಗುತ್ತದೆ. ಆದರೆ ಸಮಯ ಕೆಟ್ಟಾಗ ಯಾವ ಉರಗ ತಜ್ಞ ಕೂಡ ಏನೂ ಮಾಡಲಾಗದು ಅನ್ನೋದಕ್ಕೇ ಉತ್ತರಪ್ರದೇಶದ ಈ ವ್ಯಕ್ತಿನೇ ಸಾಕ್ಷಿ.
ಉತ್ತರಪ್ರದೇಶದ ಈ ವ್ಯಕ್ತಿ ಹಾವು ಹಿಡಿದು ನೇರವಾಗಿ ಕಾಡಿಗೋ ಅಥವಾ ಜನರಿಂದ ದೂರದ ಸ್ಥಳಕ್ಕೋ ಬಿಟ್ಟು ಬಂದಿದ್ದರೆ ಅವನ ಪ್ರಾಣ ಕೂಡ ಉಳಿಯತ್ತಿತ್ತೋ ಏನು ಗೊತ್ತಿಲ್ಲ. ಆದರೆ ಈ ಮಹಾನುಭಾವ ಮಾಡಿದ್ದೇ ಬೇರೆ. ಮತ್ತೊಂದು ದೊಡ್ಡ ತಪ್ಪು ಅಂದರೆ ಹಾವು ಕಚ್ಚಿದೆ ಅನ್ನೋ ವಿಚಾರ ತಿಳಿದರೂ ನಿರ್ಲಕ್ಷ್ಯ ತೋರಿದ್ದೇ ಈತನ ಜೀವಕ್ಕೆ ಅಪತ್ತು ತಂದೊಡ್ಡಿದೆ. ಹಾವುಗಳನ್ನು ರಕ್ಷಿಸುವಲ್ಲಿ ತನ್ನ ಗ್ರಾಮದಲ್ಲಿ ಜನಪ್ರಿಯರಾಗಿದ್ದ ವ್ಯಕ್ತಿಯೊಬ್ಬರು ವಿಷಪೂರಿತ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.
ದೇವೇಂದ್ರ ಮಿಶ್ರಾ ಎಂದು ಗುರುತಿಸಲಾದ ವ್ಯಕ್ತಿ ತನ್ನ ಹಳ್ಳಿಯ ನೆರೆಹೊರೆಯವರ ಮನೆಯಿಂದ ಹಾವನ್ನು ಹಿಡಿಯಲು ತೆರಳಿದ್ದರು. ಸ್ಥಳದಲ್ಲಿ ಅತ್ಯಂತ ವಿಷಕಾರಿ ಎಂದು ವರದಿಯಾದ ಹಾವನ್ನು ರಕ್ಷಿಸಿದ್ದಾರೆ. ಬಳಿಕ ಮಿಶ್ರಾ ಅವರು ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಹಳ್ಳಿಯನ್ನು ಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೋಲಿನಿಂದ ಹಾವನ್ನು ಹಿಡಿಯುತ್ತಿರುವ ದೃಶ್ಯವಿದೆ. ಇನ್ನೊಂದು ವಿಡಿಯೋದಲ್ಲಿ ಆತ ಹಾವನ್ನು ಹೆಣ್ಣು ಮಗುವಿನ ಕುತ್ತಿಗೆಗೆ ಹಾಕುತ್ತಿರುವುದನ್ನು ತೋರಿಸುತ್ತದೆ. ಮಿಶ್ರಾ ಅವರು ಹಾವನ್ನು ಹಿಡಿದ ಸುಮಾರು ಎರಡು ಗಂಟೆಗಳ ನಂತರ ಹಾವು ಅವರಿಗೆ ಕಚ್ಚಿದೆ. ನಂತರ ಹಾವು ಕಡಿತಕ್ಕೆ ಆಸ್ಪತ್ರೆಗೆ ಹೋಗುವ ಬದಲು ವಿವಿಧ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡಲು ಪ್ರಯತ್ನಿಸಿದರು ಎಂದು ಕೆಲವು ಗ್ರಾಮಸ್ಥರು ಹೇಳಿದ್ದಾರೆ. ಕೆಲವು ಗಂಟೆಗಳ ನಂತರ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.












Click it and Unblock the Notifications