ಭೀಮ್ ಆರ್ಮಿ ಮುಖ್ಯಸ್ಥರಿಗೆ ಅಖಿಲೇಶ್ ಯಾದವ್ ತಿರುಗೇಟು
ಲಕ್ನೋ, ಜನವರಿ 15: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಸಮಾಜವಾದಿ ಪಕ್ಷದ ಕಡೆಗೆ ಬಿಜೆಪಿಯ ಸಚಿವರು ಮತ್ತು ಶಾಸಕರು ಹೊರಳುತ್ತಿರುವುದರ ಮಧ್ಯೆ ಅಖಿಲೇಶ್ ಯಾದವ್ ವಿರುದ್ಧ ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಗಂಭೀರ ಆರೋಪ ಮಾಡಿದ್ದಾರೆ.
ಅಖಿಲೇಶ್ ಯಾದವ್ಗೆ ದಲಿತರ ಮತಗಳೇ ಬೇಕಾಗಿಲ್ಲ ಎಂಬ ಚಂದ್ರಶೇಖರ್ ಆಜಾದ್ ಹೇಳಿಕೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮುಂದೆ ಬಿಜೆಪಿಯ ಯಾವುದೇ ಶಾಸಕ, ಸಚಿವರನ್ನು ತೆಗೆದುಕೊಳ್ಳುವುದಿಲ್ಲ ಎಂದು ಬಿಜೆಪಿಗೆ ಹೇಳಲಿ. ಅವರು ಬಯಸಿದರೆ ತಮ್ಮ ನಾಯಕರಿಗೆ ಟಿಕೆಟ್ ನಿರಾಕರಿಸಬಹುದು ಎಂದಿದ್ದಾರೆ.
ಅಖಿಲೇಶ್ಗೆ ದಲಿತರ ಮತ ಬೇಕಾಗಿಲ್ಲ: ಭೀಮ್ ಆರ್ಮಿ
ನಾನು ಅವರಿಗೆ ಎರಡು ಸ್ಥಾನಗಳನ್ನು ನೀಡಲು ಸಿದ್ಧವಾಗಿದ್ದೆ. ಆದರೆ, ಈ ಮಧ್ಯೆ ಒಂದು ಫೋನ್ ಕರೆಯನ್ನು ಸ್ವೀಕರಿಸಿದ ಚಂದ್ರಶೇಖರ್ ಅಜಾದ್ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಭೀಮ್ ಆರ್ಮಿ ಅಧ್ಯಕ್ಷರ ಆರೋಪವೇನು?:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಗೆ ಈ ಮೈತ್ರಿಯಲ್ಲಿ ದಲಿತರು ಬೇಡ, ದಲಿತರ ಮತ ಬ್ಯಾಂಕ್ ಮಾತ್ರ ಬೇಕು. ಅವರು ಬಹುಜನ ಸಮಾಜದ ಜನರನ್ನು ಅವಮಾನಿಸಿದ್ದಾರೆ, ನಾನು ಪ್ರಯತ್ನಿಸಿದೆ ಆದರೆ, ಅವರೊಂದಿಗೆ ಮೈತ್ರಿ ಸಾಧ್ಯವಾಗಲಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹೇಳಿದ್ದರು. ಸೀಟು ಹಂಚಿಕೆ ಕುರಿತು ಅಖಿಲೇಶ್ ಯಾದವ್ ಬಳಿ ಮಾತುಕತೆ ನಡೆಸಲಾಗಿದ್ದು, ಆಜಾದ್ ಸಮಾಜವಾದಿ ಪಕ್ಷಕ್ಕೆ ಕೇವಲ 3 ಸೀಟುಗಳನ್ನು ನೀಡುವುದಾಗಿ ಅಖಿಲೇಶ್ ಹೇಳಿದ್ದರು, ಆದರೆ ಆಜಾದ್ ಸಮಾಜವಾದಿ ಪಕ್ಷ 10 ಸೀಟುಗಳನ್ನು ಕೇಳಿತ್ತು.
ಸಮಾಜವಾದಿ ಪಕ್ಷಕ್ಕೆ ಸೇರಿದ ಶಾಸಕರು:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿ ಸೇರಿದಂತೆ ಹಲವು ಬಿಜೆಪಿ ಶಾಸಕರು ಶುಕ್ರವಾರ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲಕ್ನೋದಲ್ಲಿ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಧರಂ ಸಿಂಗ್ ಸೈನಿಯವರಿಗೆ ಕೆಂಪು ಪೇಟೆ ತೊಡಿಸುವ ಮೂಲಕ ಅಖಿಲೇಶ್ ಯಾದವ್, ತಮ್ಮ ಪಕ್ಷಕ್ಕೆ ಸ್ವಾಗತಿಸಿದರು. ಇದೇ ವೇಳೆ ಭಗವತಿ ಸಾಗರ್, ವಿನಯ್ ಶಾಕ್ಯ, ಮುಕೇಶ್ ವರ್ಮಾ ಮತ್ತು ರೋಶನ್ ಲಾಲ್ ವರ್ಮಾ ಸಮಾಜವಾದಿ ಪಕ್ಷಕ್ಕೆ ಸೇರಿಕೊಂಡರು.
ಕೊವಿಡ್-19 ನಿಯಮ ಪಾಲಿಸುವಂತೆ ಸೂಚನೆ:
ಲಕ್ನೋ ಪೊಲೀಸರು ತಮ್ಮ ಪಕ್ಷದ ಕಚೇರಿಯ ಹೊರಗೆ ನಿನ್ನೆ, ಜನವರಿ 14ರಂದು ಪಕ್ಷದಿಂದ ಮಾದರಿ ನೀತಿ ಸಂಹಿತೆ, ಸೆಕ್ಷನ್ 144, ಕೊವಿಡ್ ಪ್ರೋಟೋಕಾಲ್ಗಳ ಉಲ್ಲಂಘನೆಯ ದೃಷ್ಟಿಯಿಂದ ನೋಟೀಸ್ ಅನ್ನು ಹಾಕಿದ್ದಾರೆ ಎಂದರು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಕಚೇರಿಗೆ ಬಂದಾಗಲೆಲ್ಲಾ ಚುನಾವಣಾ ಆಯೋಗದ ಮಾರ್ಗಸೂಚಿಗಳು, ಕೊವಿಡ್ ಪ್ರೋಟೋಕಾಲ್ಗಳನ್ನು ಪಾಲಿಸುವಂತೆ ನಾನು ನಾಯಕರಲ್ಲಿ ಮನವಿ ಮಾಡುತ್ತೇನೆ. ಇಂದು ನಮ್ಮ ಕಚೇರಿಯಲ್ಲಿ ನೋಟಿಸ್ ನಲ್ಲೂ ಕೂಡ ಹಾಕಲಾಗಿದೆ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ ಪೈಪೋಟಿ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
2017 ಉತ್ತರ ಪ್ರದೇಶ ಚುನಾವಣೆ ಫಲಿತಾಂಶ
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.