ಆಗ್ರಾ ಹೆಸರು ಬದಲಿಸಲು ಯೋಗಿ ಸರ್ಕಾರ ಚಿಂತನೆ
ಲಕ್ನೋ, ನವೆಂಬರ್ 18: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಆಗ್ರಾ ಜಿಲ್ಲೆಯ ಹೆಸರನ್ನು ಆಗ್ರಾವನ ಎಂದು ಬದಲಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಸರ್ಕಾರ ಅಂಬೇಡ್ಕರ್ ವಿಶ್ವವಿದ್ಯಾಲಯದ ಪರಿಣತರ ಸಲಹೆ ಕೇಳಿದೆ.
ಆಗ್ರಾದಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಆಗ್ರಾದ ಐತಿಹಾಸಿಕ ಹೆಸರಿನ ಕುರಿತು ಅಧ್ಯಯನ ನಡೆಸಿ ಸಲಹೆ ನೀಡಲು ಸೂಚನೆ ನೀಡಲಾಗಿದೆ. ಈ ಪ್ರಸ್ತಾವದ ಕುರಿತು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಆಗ್ರಾದ ಇತಿಹಾಸದ ಕುರಿತು ಪರಿಶೀಲನೆ ನಡೆಸಿದ್ದಾರೆ.
ಆಗ್ರಾಕ್ಕೆ ಈ ಮೊದಲು ಆಗ್ರಾವನ ಎಂಬ ಹೆಸರಿತ್ತು ಎಂದು ನಂಬಲಾಗಿದೆ. ಹೀಗಾಗಿ ಜಿಲ್ಲೆಯ ಹಳೆಯ ಹೆಸರನ್ನೇ ಮರುನಾಮಕರಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆಗ್ರಾವನದ ಹೆಸರು ಆಗ್ರಾ ಎಂದು ಯಾವಾಗ ಮತ್ತು ಏಕೆ ಬದಲಾಯಿತು ಎಂಬ ಸಂದರ್ಭ ಹಾಗೂ ಸಮಯದ ಕುರಿತು ತಿಳಿದುಕೊಳ್ಳಲು ಇತಿಹಾಸಕಾರರಿಗೆ ನಿರ್ದೇಶಿಸಲಾಗಿದೆ.

ಈ ಹಿಂದೆಯೂ ಉತ್ತರ ಪ್ರದೇಶ ಸರ್ಕಾರ ಹೆಸರು ಮರುನಾಮಕರಣದ ಸೂಚನೆಗಳನ್ನು ನೀಡಿತ್ತು. ಅಲ್ಲಹಾಬಾದ್ ಹೆಸರನ್ನು ಪ್ರಯಾಗ್ರಾಜ್ ಎಂಬ ಹಳೆಯ ಹೆಸರಿಗೆ ಮರುನಾಮಕರಣ ಮಾಡಲಾಗಿತ್ತು. ಐತಿಹಾಸಿಕ ಮುಘಲ್ ಸರಾಯ್ ರೈಲು ನಿಲ್ದಾಣಕ್ಕೆ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿತ್ತು.












Click it and Unblock the Notifications