ವೈರಲ್ ಫೋಟೋ: ಮಿರ್ಜಾಪುರದ ಶಾಲೆಯಲ್ಲಿ ಬಾಲಕನಿಗೆ ವಿಚಿತ್ರ ಶಿಕ್ಷೆ
ಲಕ್ನೋ ಅಕ್ಟೋಬರ್ 29: ಚಡಿ ಚಂ ಚಂ ವಿದ್ಯಾ ಗಂ ಗಂ ಅನ್ನೋ ಮಾತು ತುಂಬಾ ಹಳೆಯದಾದರೂ ಈಗಿನ ಶಾಲೆಯಲ್ಲಿ ಈ ಮಾತಿನಂತೆ ಶಿಕ್ಷಕರು ನಡೆದುಕೊಳ್ಳುವುದು ಕಷ್ಟವಿದೆ. ಈಗೇನಿದ್ರು ಮಾತಿನ ಮೂಲಕವೇ ಮಕ್ಕಳಿಗೆ ತಿಳಿ ಹೇಳಬೇಕು. ಹೊಡೆಯುವುದು, ಬೇರೆ ಯಾವುದೇ ರೀತಿಯ ಶಿಕ್ಷೆಗಳನ್ನ ನೀಡುವುದನ್ನ ಪೋಷಕರು ಸಹಿಸುವುದೇ ಇಲ್ಲ. ಹೀಗಿರುವಾಗ ಇಲ್ಲೊಬ್ಬ ಮುಖ್ಯೋಪಾಧ್ಯಾಯ ವಿಚಿತ್ರವಾದ ಶಿಕ್ಷೆ ನೀಡುವ ಮೂಲಕ ಪೊಲೀಸರ ಅತಿಥಿಯಾಗಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗೆ ಭಯಾನಕ ಶಿಕ್ಷೆ ಕೊಟ್ಟ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗೆ ವಿಚಿತ್ರವಾದ ಶಿಕ್ಷೆ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವೈರಲ್ ಫೋಟೋದಲ್ಲಿ ಬಾಲಕನ ಕಾಲನ್ನು ಮೇಲಕ್ಕೆ ಮಾಡಿ ಶಾಲೆಯ ಮೇಲ್ಮಹಡಿಯಿಂದ ಎಸೆಯುವಂತೆ ಬೆದರಿಕೆ ಹಾಕುವ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ಮುಖ್ಯೋಪಾಧ್ಯಾಯ ಇನ್ನುಳಿದ ಶಾಲಾ ಮಕ್ಕಳ ಎದುರು ಈ ಶಿಕ್ಷೆ ಬಾಲಕಿನಿಗೆ ನೀಡಿರುವುದು ಪೋಷಕರಲ್ಲಿ ಆತಂಕ ಹುಟ್ಟುಸಿದೆ. ಈ ರೀತಿಯ ನಡುವಳಿಕೆಯನ್ನು ಖಂಡಿಸಲಾಗಿದ್ದು ಅವರ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ. ಗುರುವಾರ ಊಟದ ವಿರಾಮದ ಸಮಯದಲ್ಲಿ ಹಲವಾರು ತರಗತಿಗಳ ವಿದ್ಯಾರ್ಥಿಗಳು ಹೊರಗೆ ಆಟವಾಡುತ್ತಿದ್ದಾಗ ಮತ್ತೊಬ್ಬ ವಿದ್ಯಾರ್ಥಿಯನ್ನು ಕಚ್ಚಿದ್ದಕ್ಕಾಗಿ ಕ್ಷಮೆಯಾಚಿಸಿದರೆ ಅವನನ್ನು ಬಿಡುವುದಾಗಿ ಹೇಳಿದ ಶಿಕ್ಷಕ ಮನೋಜ್ ವಿಶ್ವಕರ್ಮ ಈ ರೀತಿ ನಡೆದುಕೊಂಡಿದ್ದಾರೆ. ಇವರು ಸೋನು ಯಾದವ್ ಎಂಬ ಬಾಲಕನಿಗೆ ಬೆದರಿಕೆ ಹಾಕಿದ್ದಾರೆ. ಭಯದಿಂದ ಅಳುತ್ತಿರುವ ಬಾಲಕನ ದೃಶ್ಯ ವೈರಲ್ ಆಗಿದೆ.
ಕೋಪಗೊಂಡ ಮುಖ್ಯೋಪಾಧ್ಯಾಯರು 2 ನೇ ತರಗತಿ ವಿದ್ಯಾರ್ಥಿಯಾಗಿರುವ ಸೋನುವನ್ನು ಹಿಡಿದು ಮೇಲಿನ ಮಹಡಿಗೆ ಎಳೆದೊಯ್ದರು. 'ಕ್ಷಮಿಸಿ' ಎಂದು ಹೇಳದಿದ್ದರೆ ಮೇಲ್ಮಹಡಿಯಿಂದ ಬೀಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಇನ್ನುಳಿದ ಶಾಲಾ ಮಕ್ಕಳೂ ಜಮಾಯಿಸಿದ್ದಾರೆ. ತಮ್ಮ ಸ್ನೇಹಿತನನ್ನು ಬಿಡುವಂತೆ ವತ್ತಾಯಿಸಿದ್ದಾರೆ. ಈ ವೇಳೆ ಬಾಲಕ ಜೋರಾಗಿ ಅಳುತ್ತಾ ಕಿರುಚಾಡಿದ್ದಾನೆ. ಇನ್ನುಳೀದ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯರಿಗೆ ಹುಡುಗನನ್ನು ಕೆಳಗಿಳಿಸಲು ಒತ್ತಾಯಿಸಿದರು. ಮಕ್ಕಳ ಗುಂಪು ಜಮಾಯಿಸಿದ ನಂತರ ಸೋನು ಅವರನ್ನು ಬಿಡುಗಡೆ ಮಾಡಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಚಿಕ್ಕ ಹುಡುಗನ ತಂದೆ ಮುಖ್ಯೋಪಾಧ್ಯಾಯರ ಕ್ರಮಗಳನ್ನು ಖಂಡಿಸಿದ್ದಾರೆ. ಅವರು ಮಾಡಿದ್ದು"ತಪ್ಪು" ಎಂದು ಹೇಳಿದ್ದಾರೆ. ಆದರೆ ಅವರು ಪ್ರೀತಿಯಿಂದ ವರ್ತಿಸಿದ್ದಾರೆ ಮತ್ತು ಅವರ ಮಗನಿಗೆ ಇದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. "ಶಿಕ್ಷಕರು ಮಾಡಿದ್ದು ತಪ್ಪು ಆದರೆ ಗುರುಜಿ (ಶಿಕ್ಷಕರು) ಪ್ರೀತಿಯಿಂದ ಮಾಡಿದ್ದಾರೆ. ಆದ್ದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ" ಎಂದು ತಂದೆ ರಂಜಿತ್ ಯಾದವ್ ಹೇಳಿದರು.
ಬಾಲನ್ಯಾಯ ಕಾಯಿದೆಯ ಸೆಕ್ಷನ್ಗಳ ಅಡಿಯಲ್ಲಿ ಬಂಧಿಸಲ್ಪಟ್ಟ ಮತ್ತು ಆರೋಪ ಹೊರಿಸಲಾದ ಮುಖ್ಯೋಪಾಧ್ಯಾಯ ಮನೋಜ್ ವಿಶ್ವಕರ್ಮ ಸುದ್ದಿಗಾರರಿಗೆ ಮಾತನಾಡಿ, ಸೋನು ಅವರ ತಂದೆ ಮಗನಿಗೆ ಹೆಚ್ಚು ಒತ್ತು ಕೊಡಲು ಹೇಳಿದ್ದರು. ಅವನು ತುಂಟನಾಗಿದ್ದ, ಚೂಟಿಯಾಗಿದ್ದನು. ಶಾಲೆಯಲ್ಲಿ ಉಳಿದ ಮಕ್ಕಳೊಂದಿಗೆ ಅವನು ಜಗಳವಾಡುತ್ತಿದ್ದನು. ಕೊಂಚ ಭಯ ಹುಟ್ಟಿಸಲು ಹೀಗೆ ಮಾಡಿದೆ. ಇದರ ಹಿಂದೆ ಯಾವುದೇ ತಪ್ಪು ಆಲೋಚನೆ ಇಲ್ಲ" ಎಂದು ಹೇಳಿದರು.
#UPPolice #Mzp pic.twitter.com/1Yo07qhvEN
— Mirzapur Police (@mirzapurpolice) October 28, 2021
"ಸೋನು ತುಂಬಾ ಕಿಡಿಗೇಡಿ... ಮಕ್ಕಳಿಗೆ ಕಚ್ಚುತ್ತಾನೆ, ಶಿಕ್ಷಕರಿಗೂ ಕಚ್ಚುತ್ತಾನೆ. ಅವನನ್ನು ಸರಿಪಡಿಸಲು ಅವನ ತಂದೆ ಕೇಳಿದರು. ಆದ್ದರಿಂದ ನಾವು ಅವನನ್ನು ಹೆದರಿಸಲು ಪ್ರಯತ್ನಿಸಿದ್ದೇವೆ. ಭಯಪಡಿಸಲು ಮೇಲಿನ ಮಹಡಿಯಿಂದ ತಲೆಕೆಳಗಾಗಿ ಹಾಕಲಾಯಿತು"ಎಂದು ಅವರು ಹೇಳಿದರು. ಒಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಈ ರೀತಿ ವಿಚಿತ್ರ ಶಿಕ್ಷೆ ನೀಡಿದ್ದಕ್ಕಾಗಿ ಮುಖ್ಯೋಪಾದ್ಯಾಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.