ಉತ್ತರ ಪ್ರದೇಶ: ಹಿಂದೂ-ಮುಸ್ಲಿಂ ಜೋಡಿಗೆ ಬಿಜೆಪಿ ನಾಯಕರ ಆಶೀರ್ವಾದ
ಲಕ್ನೋ, ಫೆಬ್ರವರಿ 20: ಕೋಮು ಸೌಹಾರ್ದ ಹಾಳುಮಾಡುವ ಆರೋಪಕ್ಕೆ ಸದಾ ಗುರಿಯಾಗುತ್ತಿರುವ ಬಿಜೆಪಿ, ಅಂತರ್ಧರ್ಮೀಯ ವಿವಾಹವನ್ನು ಬೆಂಬಲಿಸುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್ ಮುಖಂಡನ ಮಗನೊಂದಿಗೆ ಬಿಜೆಪಿಯ ನಾಯಕನ ಸೋದರ ಸೊಸೆಯ ಮದುವೆ ನೆರವೇರಿತು. ಈ ಸಮಾರಂಭಕ್ಕೆ ಬಿಜೆಪಿಯ ಅನೇಕ ಹಿರಿಯ ಮುಖಂಡರು ಆಗಮಿಸಿ ವಧೂ ವರರನ್ನು ಆಶೀರ್ವದಿಸಿದರು.
ಲೋಕಸಭೆ ಉಪ ಚುನಾವಣೆಯಲ್ಲಿ ಗೋರಖ್ಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕಿ ಸುರ್ಹೀತಾ ಕರೀಮ್ ಅವರ ಮಗ ಫೈಜಾನ್ ಕರೀಮ್ ಜೊತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರ ಸೋದರ ಸೊಸೆ ಶ್ರೀಯಾ ಗುಪ್ತಾ ಮದುವೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶನಿವಾರ ನೆರವೇರಿತು.

ಪಂಚತಾರಾ ಹೋಟೆಲ್ ತಾಜ್ ವಿವಾಂತದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ, ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, ಸಚಿವರಾದ ಸುರೇಶ್ ಖನ್ನಾ ಮತ್ತು ನಂದಗೋಪಾಲ್ ನಂದಿ ಭಾಗವಹಿಸಿದ್ದರು.
ಹಿಂದೂ-ಮುಸ್ಲಿಂ ಸಂಘರ್ಷ ಭಾವ ಬಿತ್ತುವ ಪ್ರಕರಣಗಳ ನಡುವೆಯೇ ರಾಜಕೀಯ ಮುಖಂಡರು ಈ ಅಂತರ್ ಧರ್ಮೀಯ ವಿವಾಹಕ್ಕೆ ಸಾಕ್ಷಿಯಾಗಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಆದರೆ, ಬಿಜೆಪಿಯ ಒಂದು ವರ್ಗ ಇದನ್ನು ಕಟುವಾಗಿ ಟೀಕಿಸಿದೆ.
'ನಮ್ಮ ಪಕ್ಷದ ಹಿರಿಯ ನಾಯಕರು ಜಗತ್ತಿಗೆ ಇಸ್ಲಾಂನಿಂದ ಬೆದರಿಕೆಯಿದೆ ಎಂದು ಹಿಂದುತ್ವದ ಜ್ಞಾನವನ್ನು ಪ್ರಸರಿಸಿದ್ದರು. ಅವರು ಅದರಿಂದ ತಮ್ಮ ಸೋದರಿಯರು ಮತ್ತು ಹೆಣ್ಣುಮಕ್ಕಳ ರಕ್ಷಣೆ ಮಾಡಲು ಸಾಧ್ಯವಾಗಿತ್ತು. ಅವರು ಮುಸ್ಲಿಮರೊಂದಿಗೆ ಓಡಿಹೋಗುತ್ತಿದ್ದರು. ಈಗ ಇದು ಅವರ ಕುಟುಂಬದ ವಿಚಾರವಾಗಿದ್ದರಿಂದ ಇದನ್ನು ಲವ್-ಜಿಹಾದ್ ಎಂದು ಕರೆಯುವುದಿಲ್ಲ' ಎಂಬುದಾಗಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಉತ್ತರ ಪ್ರದೇಶದ ಮಾಜಿ ಸಚಿವ ಐ.ಪಿ. ಸಿಂಗ್ ಹೇಳಿದ್ದಾರೆ.
'ಹಲವು ವರ್ಷಗಳಿಂದ ನಮ್ಮ ಕುಟುಂಬಗಳು ಪರಸ್ಪರ ಪರಿಚಿತ. ಇದು ಎರಡು ಕುಟುಂಬಗಳ ಖಾಸಗಿ ವಿಚಾರ. ಆದರೆ ರಾಜಕೀಯ ಮುಖಂಡರ ಹಾಜರಾತಿಯಿಂದ ದುರದೃಷ್ಟವಶಾತ್ ವಿವಾದ ಸೃಷ್ಟಿಸಿದೆ' ಎಂದು ಕರೀಮ್ ಅವರ ಕುಟುಂಬದ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಲವ್ ಜಿಹಾದ್ ಅತ್ಯಂತ ಅಪಾಯಕಾರಿ ಎಂದು ಕರೆದಿದ್ದರು. ಹಿಂದೂ ಆಗಿದ್ದ ಕೇರಳದ ಯುವತಿ ಹಾದಿಯಾ ಎಂಬ ಹೆಸರಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಶಫಿನ್ ಜಹಾನ್ರನ್ನು ಮದುವೆಯಾಗಿದ್ದ ಪ್ರಕರಣ ವಿವಾದ ಉಂಟುಮಾಡಿತ್ತು. ಇದನ್ನು ಯೋಗಿ ಲವ್ ಜಿಹಾದ್ ಎಂದು ಕರೆದಿದ್ದರು.












Click it and Unblock the Notifications