'ಹೋಗಿ ಸಾಯಿ': ಇದು ಕೋವಿಡ್ ಸಹಾಯವಾಣಿ ಸಿಬ್ಬಂದಿ ಸಲಹೆ!
ಲಕ್ನೋ, ಏಪ್ರಿಲ್ 17: ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳವಾಗುತ್ತಿರುವುದರ ಬೆನ್ನಲ್ಲೇ ಆರೋಗ್ಯ ಕ್ಷೇತ್ರದ ಲೋಪದೋಷಗಳು ದಿನೇ ದಿನೇ ಬೆಳಕಿಗೆ ಬರುತ್ತಿವೆ. ಜನಸಾಮಾನ್ಯರ ಸಂಕಷ್ಟ, ಸಮಸ್ಯೆಗಳಿಗೆ ಆರೋಗ್ಯ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಕಾರಣ ಅವರು ಚಿಕಿತ್ಸೆ ಸಿಗದೇ ಮೃತಪಟ್ಟ, ಸರಿಯಾದ ಆಕ್ಸಿಜನ್ ವ್ಯವಸ್ಥೆಯಿಲ್ಲದೆ ರೋಗಿಗಳು ಕೊನೆಯುಸಿರೆಳೆದ ಅನೇಕ ಘಟನೆಗಳು ವರದಿಯಾಗಿವೆ.
ಉತ್ತರ ಪ್ರದೇಶದಲ್ಲಿ ಕೂಡ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಸೂಕ್ತ ಸಮಯಕ್ಕೆ ಔಷಧಗಳನ್ನು ಪೂರೈಸುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರ ಕೊರೊನಾ ವೈರಸ್ ನಿರ್ವಹಣಾ ಕೇಂದ್ರವನ್ನು ಆರಂಭಿಸಿದೆ.
ಆದರೆ ಈ ಸಹಾಯವಾಣಿಗೆ ಕರೆ ಮಾಡಿದ್ದ ಕೋವಿಡ್-19ರ ರೋಗಿ ಹಾಗೂ ಕಮಾಂಡ್ ಸೆಂಟರ್ನ ನಿರ್ವಾಹಕರೊಬ್ಬರ ನಡುವೆ ನಡೆದ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದ್ದು, ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯವಾಣಿ ಕೇಂದ್ರ ಪ್ರತಿಕ್ರಿಯಿಸುತ್ತಿರುವ ರೀತಿಯ ಬಗ್ಗೆ ಆಘಾತ ಮೂಡಿಸಿದೆ. ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ಥಾಪಿಸಿರುವ ಸೌಲಭ್ಯದ ದಕ್ಷತೆ ಬಗ್ಗೆ ಗಂಭೀರ ಅನುಮಾನಗಳನ್ನು ಮೂಡಿಸಿದೆ.

ಲಕ್ನೋದ ಸಂತೋಷ್ ಕುಮಾರ್ ಸಿಂಗ್ ಮತ್ತು ಅವರ ಪತ್ನಿ ಏಪ್ರಿಲ್ 10ರಂದು ಕೋವಿಡ್ ತಪಾಸಣೆಗೆ ಒಳಗಾಗಿದ್ದರು. ಸೋಂಕಿನ ಲಕ್ಷಣಗಳು ಇದ್ದಿದ್ದರಿಂದ ಇಬ್ಬರೂ ಸ್ವಯಂ ಐಸೋಲೇಷನ್ಗೆ ಒಳಪಟ್ಟಿದ್ದರು. ಏ. 12ರಂದು ಬಂದ ವರದಿಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು.
ಸಂತೋಷ್ ಕುಮಾರ್ ಅವರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆಗ ಸಹಾಯವಾಣಿಯಲ್ಲಿ ಮಾತನಾಡಿದ್ದ ವ್ಯಕ್ತಿ ಹೋಮ್ ಐಸೋಲೇಷನ್ ಆಪ್ ಡೌನ್ಲೋಡ್ ಮಾಡಿದ್ದೀರಾ ಎಂದು ಕೇಳಿದ್ದಾನೆ. ಅಂತಹ ಯಾವ ಆಪ್ ಕೂಡ ತಮಗೆ ತಿಳಿದಿಲ್ಲ ಎಂದಾಗ, ಸಹಾಯವಾಣಿ ಪ್ರತಿನಿಧಿ 'ಹೋಗಿ ಸಾಯಿ' ಎಂದು ಹೇಳಿದ್ದಾನೆ.
ಈ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂತೋಷ್ ಕುಮಾರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪ್ರಕಾಶ್ ಅವರಿಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದಾರೆ. ಅಂದಹಾಗೆ, ಸಂತೋಷ್ ಕುಮಾರ್ ತಂದೆ ಮನೋಹರ್ ಸಿಂಗ್ ಲಕ್ನೋದ ಮಹಾನಗರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ.












Click it and Unblock the Notifications