ಯುಪಿ ಚುನಾವಣೆ; ಪಕ್ಷದ ಚಿಹ್ನೆ ಬಿಡುಗಡೆ ಮಾಡಿದ ಚಂದ್ರಶೇಖರ್ ಅಜಾದ್
ಲಕ್ನೋ, ಡಿಸೆಂಬರ್ 10; ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಚಂದ್ರಶೇಖರ್ ಆಜಾದ್ ಪಕ್ಷದ ಚಿಹ್ನೆ ಬಿಡುಗಡೆ ಮಾಡಿದ್ದಾರೆ. 2022ರ ಫೆಬ್ರವರಿ ಅಥವ ಮಾರ್ಚ್ ತಿಂಗಳಿನಲ್ಲಿ ವಿಧಾನಸಭೆ ಚುನವಣೆ ನಡೆಯಲಿದ್ದು, ಪಕ್ಷಗಳ ತಯಾರಿ ಆರಂಭವಾಗಿದೆ.
ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ಅಲಿಯಾಸ್ ರಾವಣ್ ಶುಕ್ರವಾರ ತಮ್ಮ ಆಜಾದ್ ಸಮಾಜ ಪಕ್ಷದ ಚಿಹ್ನೆಯನ್ನು ಬಿಡುಗಡೆ ಮಾಡಿದರು. ಟ್ವಿಟರ್ನಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದು, 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಈ ಗುರುತನ್ನು ನೀಡಿದೆ ಎಂದು ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಮಾತನಾಡಿದ್ದ ಚಂದ್ರಶೇಖರ್ ಅಜಾದ್ ಬಿಜೆಪಿಯೇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ರನ್ನು ಅವರು ಭೇಟಿಯಾಗಿದ್ದು, ಮೈತ್ರಿ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ದಲಿತರು, ಹಿಂದುಳಿದವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಚಂದ್ರಶೇಖರ್ ಅಜಾದ್ ನೇತೃತ್ವದ ಪಕ್ಷ ಮಾಜಿ ಮುಖ್ಯಮಂತ್ರಿ ಮಾಯವತಿ ನೇತೃತ್ವದ ಬಿಎಸ್ಪಿ ಪಕ್ಷಕ್ಕೆ ಪರ್ಯಾಯವಾಗಿದ್ದು ಎಂದೇ ವಿಶ್ಲೇಷಿಸಲಾಗುತ್ತಿದೆ.
शोषित वंचित समाज को हुक्मरान बनाने और सामाजिक न्याय को स्थापित करने के लिए संकल्पित आज़ाद समाज पार्टी (कांशी राम) को भारतीय निर्वाचन आयोग द्वारा 5 राज्यों ( उत्तरप्रदेश, उत्तराखंड, पंजाब, गोवा और मणिपुर) के लिए आवंटित चुनाव चिन्ह - केतली pic.twitter.com/aUJ2VkvoCV
— Chandra Shekhar Aazad (@BhimArmyChief) December 9, 2021
"ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಹಲವು ನಾಯಕರನ್ನು ಭೇಟಿ ಮಾಡಲಾಗಿದೆ. ಸಭೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗ ಮಾಡಲು ಸಾಧ್ಯವಿಲ್ಲ" ಎಂದು ಚಂದ್ರಶೇಖರ್ ಅಜಾದ್ ಹೇಳಿದ್ದರು. ಬಿಹಾರ ಚುನಾವಣೆಯಲ್ಲಿ ಅವರು ಪಪ್ಪು ಯಾದವ್ ಜೊತೆ ಮೈತ್ರಿ ಮಾಡಿಕೊಂಡಿದ್ದರು.
ಉತ್ತರ ಪ್ರದೇಶದಲ್ಲಿ ದಲಿತರ ಹಿತ ರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ನಾಯಕರಲ್ಲಿ ಚಂದ್ರಶೇಖರ್ ಅಜಾದ್ ಮುಂಚೂಣಿಯಲ್ಲಿದ್ದಾರೆ. ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಸಹ ಅವರು ಬೆಂಬಲಿಸಿದ್ದರು.
ಬಿಜೆಪಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಬಿಜೆಪಿ ಸೋಲಿಸಬೇಕು ಎಂದು ಹಲವಾರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಸಮಾಜವಾದಿ ಪಕ್ಷ ಚಿಕ್ಕ ಚಿಕ್ಕ ಸಮಾನ ಮನಸ್ಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.
ಮಾಯಾವತಿ ಮುಂದೆ ದೊಡ್ಡ ಸವಾಲು; 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಿಎಸ್ಪಿ ನಾಯಕಿ ಮಾಯಾವತಿಗೆ ಬಹುದೊಡ್ಡ ಸವಾಲು ಆಗಿದೆ. ಹಲವು ಮುಖಂಡರು ಪಕ್ಷ ತೊರೆದಿದ್ದು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾಯಕಿಗೆ ಈ ಬಾರಿ ಕಠಿಣ ಸವಾಲು ಎದುರಾಗಿದೆ.
ಮಾಯಾವತಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉತ್ತರ ಪ್ರದೇಶ ಬಿಎಸ್ಪಿ ಅಧ್ಯಕ್ಷರಾಗಿದ್ದ ರಾಮ್ ಅಚಲ್ ರಾಜಭರ್, ಲಾಲ್ಜಿ ವರ್ಮಾ ಮುಂತಾದ ನಾಯಕರು ಬಿಎಸ್ಪಿಯ ಶಾಸಕರ ಜೊತೆ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. 6 ಶಾಸಕರು ಬಿಜೆಪಿಗೆ ಸೇರಿದ್ದಾರೆ.
ರಾಜ್ಯದಲ್ಲಿ ಶೇ 10ರಷ್ಟು ಮತದಾರರನ್ನು ಒಳಗೊಂಡ ಜಾಟವ (ಎಸ್ಸಿ) ಸಮುದಾಯಕ್ಕೆ ಇಂದಿಗೂ ಮಾಯಾವತಿ ಪ್ರಶ್ನಾತೀತ ನಾಯಕಿಯಾಗಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಬಿಎಸ್ಪಿ ಮತಗಳಿಕೆ ಕುಸಿತವಾಗುತ್ತಿದೆ. 2007ರಲ್ಲಿ ಶೇ 30ರಷ್ಟಿದ್ದ ಮತಗಳಿಕೆ 2012ರಲ್ಲಿ ಶೇ 26, 2017ರಲ್ಲಿ ಶೇ 22ಕ್ಕೆ ಕುಸಿತವಾಗಿದೆ.
ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಇದೀಗ ಮಾಯವತಿಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಚಂದ್ರಶೇಖರ್ ಪ್ರಾಬಲ್ಯವಿದೆ. ಇದರಿಂದಾಗಿ ಬಿಎಸ್ಪಿ ಮತಗಳಿಕೆ ಮೇಲೆ ಪೆಟ್ಟು ಬೀಳುವ ನಿರೀಕ್ಷೆ ಇದೆ.
2007ರಲ್ಲಿ ಬ್ರಾಹ್ಮಣ ಸಮುದಾಯ ಬಿಎಸ್ಪಿ ಪರವಾಗಿ ನಿಂತಿತ್ತು. ಇದರಿಂದಾಗಿ ಪಕ್ಷ ಅಧಿಕಾರಕ್ಕೆ ಸಹ ಬಂದಿತ್ತು. ಈ ಬಾರಿಯೂ ಅದೇ ತಂತ್ರಗಾರಿಕೆಗೆ ಬಿಎಸ್ಪಿ ಮುಂದಾಗಿದೆ. ರಾಜ್ಯದಲ್ಲಿ ಈಗಾಗಲೇ ಬ್ರಾಹ್ಮಣ ಸಮಾವೇಶಗಳನ್ನು ನಡೆಸಲಾಗುತ್ತಿದೆ.












Click it and Unblock the Notifications