Breaking: ಸಮವಸ್ತ್ರ ಧರಿಸಿಲ್ಲ ಎಂದು ದಲಿತ ಬಾಲಕಿ ಮೇಲೆ ಹಲ್ಲೆ
ಲಕ್ನೋ, ಆಗಸ್ಟ್ 23: ಸಮವಸ್ತ್ರ ಧರಿಸಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಭದೋಹಿ ಗ್ರಾಮದ ಮಾಜಿ ಮುಖ್ಯಸ್ಥರೊಬ್ಬರು ದಲಿತ ಬಾಲಕಿಯನ್ನು ಥಳಿಸಿ ಶಾಲೆಯಿಂದ ಹೊರಹಾಕಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿ ಮಾಜಿ ಪ್ರಧಾನನನ್ನು ಮನೋಜ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮನೋಜ್ ಕುಮಾರ್ ದುಬೆಯು ಅಧಿಕಾರಿಯೂ ಅಲ್ಲ, ಶಿಕ್ಷಕನೂ ಅಲ್ಲ, ಆದರೂ ಪ್ರತಿದಿನ ಗ್ರಾಮದ ಶಾಲೆಗೆ ಹೋಗಿ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸರಕಾರಿ ಶಾಲೆಗೆ ಹೋದ ಮನೋಜ್ ಕುಮಾರ್ ದುಬೆ ಸಮವಸ್ತ್ರ ಧರಿಸದೆ ಬಂದಿದ್ದ 8 ನೇ ತರಗತಿ ವಿದ್ಯಾರ್ಥಿನಿಯನ್ನು ಸಮವಸ್ತ್ರ ಧರಿಸದ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಬಾಲಕಿ, ತನ್ನ ತಂದೆ ತನಗಾಗಿ ಖರೀದಿಸಿದಾಗ ಸಮವಸ್ತ್ರ ಹಾಕಿಕೊಂಡು ಬರುವುದಾಗಿ ಉತ್ತರಿಸಿದ್ದಾಳೆ ಎಂದು ಚೌರಿ ಪೊಲೀಸ್ ಠಾಣೆ ಪ್ರಭಾರಿ ಗಿರಿಜಾ ಶಂಕರ್ ಯಾದವ್ ತಿಳಿಸಿದರು.

ಬಾಲಕಿಯ ಉತ್ತರ ಕೇಳಿದ ಮನೋಜ್ ಕುಮಾರ್ ದುಬೆ ತರಗತಿಯಲ್ಲಿದ್ದ ಬಾಲಕಿಯನ್ನು ಥಳಿಸಿ, ಆಕೆಯ ವಿರುದ್ಧ ಜಾತಿ ನಿಂದನೆ ಮಾಡಿ ಶಾಲೆಯಿಂದ ಹೊರಹಾಕಿದ್ದಾನೆ ಎಂದು ಅವರು ಹೇಳಿದರು.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಹಲ್ಲೆ, ಬೆದರಿಕೆ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗಿರಿಜಾ ಶಂಕರ್ ಯಾದವ್ ತಿಳಿಸಿದ್ದಾರೆ.
ಆರೋಪಿಯು ಪರಾರಿಯಾಗಿದ್ದು, ಆರೋಪಿಯನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತಿಚೆಗೆ ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ ಶಿಕ್ಷಕನೊಬ್ಬ ಶುಲ್ಕದ ವಿಚಾರದಲ್ಲಿ ವಿಕೃತ ಮೆರೆದಿದ್ದರು. ಶುಲ್ಕ ಪಾವತಿಸದ 3ನೇ ತರಗತಿಯ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಶಾಲಾ ಶುಲ್ಕಕ್ಕಾಗಿ ಶಿಕ್ಷಕರು ಥಳಿಸಿದ್ದಾರೆ ಎಂದು ಮೃತನ ಹಿರಿಯ ಸಹೋದರ ಆರೋಪಿಸಿದ್ದಾರೆ. ಶಾಲಾ ಶುಲ್ಕ ನೀಡಲ್ಲ (ತಿಂಗಳಿಗೆ 250 ರೂ.) ಎಂಬ ಕಾರಣಕ್ಕೆ ನನ್ನ ಸಹೋದರನನ್ನು ಶಿಕ್ಷಕರು ಥಳಿಸಿದ್ದಾರೆ ಎಂದು ಮೃತ ವಿದ್ಯಾರ್ಥಿಯ ಸಹೋದರ ತಿಳಿಸಿದ್ದಾರೆ.












Click it and Unblock the Notifications