ಯೋಗಿ ಆದಿತ್ಯನಾಥ್ಗೆ ಜೀವ ಬೆದರಿಕೆ ಹಾಕಿದ ಬಾಲಕ
ಲಕ್ನೋ, ನವೆಂಬರ್ 28: ತನ್ನ ಮೊಬೈಲ್ ಫೋನ್ನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜೀವ ಬೆದರಿಕೆ ಹಾಕಿದ್ದ 15 ವರ್ಷದ ಬಾಲಕನನ್ನು ಪತ್ತೆಹಚ್ಚಿದ ಪೊಲೀಸರು ಬಾಲಾಪರಾಧ ಗೃಹಕ್ಕೆ ಕರೆದುಕೊಂಡು ಹೋಗಿದ್ದಾರೆ.
10ನೇ ತರಗತಿ ಓದುತ್ತಿರುವ ಬಾಲಕ ಆಗ್ರಾ ಗ್ರಾಮದವನಾಗಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಸ್ಫೋಟದಿಂದ ಸಾಯಿಸುವುದಾಗಿ ವಾಟ್ಸಾಪ್ ಮೂಲಕ ರಾಜ್ಯ ಸಹಾಯವಾಣಿ ಸಂಖ್ಯೆಗೆ ಸಂದೇಶ ರವಾನಿಸಿದ್ದ ಎಂದು ಆರೋಪಿಸಲಾಗಿದೆ.
ಸಹಾಯವಾಣಿ ಸಂಖ್ಯೆ 112ಕ್ಕೆ ಬಂದಿದ್ದ ಬೆದರಿಕೆಯನ್ನು ಗಮನಿಸಿದ್ದ ಪೊಲೀಸ್ ಅಧಿಕಾರಿ ಅಂಜುಲ್ ಕುಮಾರ್, ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಬಳಿಕ ಆ ಮೊಬೈಲ್ ಸಂಖ್ಯೆಯನ್ನು ಪರಿವೀಕ್ಷಣಾ ತಂಡಗಳು ಮತ್ತು ಸೈಬರ್ ಘಟಕದ ಪೊಲೀಸರು ಪತ್ತೆಹಚ್ಚಿದ್ದರು. 24 ಗಂಟೆಯೊಳಗೆ ಆ ಬಾಲಕನ್ನು ಗುರುತಿಸಿದ್ದರು. ಇಬ್ಬರು ಪೊಲೀಸರು ಲಕ್ನೋದಿಂದ ಆಗ್ರಾಕ್ಕೆ ತೆರಳಿ ಆತನನ್ನು ಬಂಧಿಸಿ ಬಾಲಾಪರಾಧ ಮಂಡಳಿ ಮುಂದೆ ಹಾಜರುಪಡಿಸಿದ್ದರು. ಆತನನ್ನು ಲಕ್ನೋನ ಬಾಲಮಂದಿರದಲ್ಲಿ ಇರಿಸಲಾಗಿದೆ.

ಪೊಲೀಸರು ಮನೆಗೆ ಬರುವವರೆಗೂ ಬಾಲಕನ ಕುಟುಂಬದವರಿಗೆ ಘಟನೆಯ ಬಗ್ಗೆ ಗೊತ್ತೇ ಇರಲಿಲ್ಲ. ಹೆಚ್ಚು ಮೌನಿಯಾಗಿರುತ್ತಿದ್ದ ಬಾಲಕ ವಾಲಿಬಾಲ್ ಮುಂತಾದ ಆಟಗಳಲ್ಲಿಯೇ ಅಧಿಕ ಸಮಯ ಮಗ್ನನಾಗಿರುತ್ತಿದ್ದ. ಹತ್ತನೇ ತರಗತಿ ಓದುತ್ತಿರುವ ಆತ ಓದಿನಲ್ಲಿಯೂ ಚುರುಕು ಎಂದು ಕುಟುಂಬದವರು ಹೇಳಿದ್ದಾರೆ.
ಆತ ಕ್ರೀಡಾಕೋಟಾದಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಬೇಕು ಎಂದು ಬಯಸಿದ್ದ. ಹತ್ತನೇ ತರಗತಿ ವಿದ್ಯಾರ್ಥಿಯನ್ನು ರಾಜ್ಯದ ಶತ್ರು ಎಂಬಂತೆ ಬಿಂಬಿಸಲಾಗುತ್ತಿದೆ. ಆತನಿಗೆ ಯಾವುದು ಸರಿ ಯಾವುದು ತಪ್ಪು ಎಂದು ಮನವರಿಕೆ ಮಾಡಿದರೆ ಸಾಕು ಎಂದಿರುವ ಕುಟುಂಬದವರು ಆತನನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿದ್ದಾರೆ.
ಸಂದೇಶದಲ್ಲಿ ಮುಖ್ಯಮಂತ್ರಿ ಹೆಸರನ್ನು ಉಲ್ಲೇಖಿಸಿದ್ದರಿಂದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆ ಸಂದೇಶವನ್ನು ಅಧಿಕೃತ ಸಂಖ್ಯೆಗೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಬಾಲಕನಿಗೆ ಯಾವುದೇ ಬೆದರಿಕೆ ಒಡ್ಡುವ ಉದ್ದೇಶ ಇರಲಿಲ್ಲ ಎನಿಸಿದೆ. ಆದರೆ ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಪೊಲೀಸ್ ಅಧಿಕಾರಿ ಸಚಿನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications