ಕೋವಿಡ್ ನಿರ್ವಹಣೆ: ಯೋಗಿ ಸರ್ಕಾರದ ವಿರುದ್ದ ಬಿಜೆಪಿ ನಾಯಕ ಆಕ್ರೋಶ
ಬಲ್ಲಿಯಾ, ಜೂ.29: ಉತ್ತರಪ್ರದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯನ್ನು ಆಡಳಿತರೂಢ ಪಕ್ಷದ ನಾಯಕರೇ ಟೀಕಿಸಿದ್ದು, ''ಎರಡನೇ ಅಲೆಯ ಸಂದರ್ಭದ ಪ್ರತಿ ಹಳ್ಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ,'' ಎಂದು ಹೇಳಿದ್ದಾರೆ.
ಶನಿವಾರ ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್, ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ಇಕ್ಬಾಲ್ ಸಿಂಗ್, ''ಕೋವಿಡ್ನ ಮೊದಲ ಅಲೆಯಿಂದಾಗಿ ಆರೋಗ್ಯ ಇಲಾಖೆಯು ಯಾವುದೇ ಪಾಠವನ್ನು ಕಲಿತಿಲ್ಲ. ಇದರಿಂದಾಗಿ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಕೋವಿಡ್ ಸಾವಿಗೆ ಕಾರಣವಾಗಿದೆ,'' ಎಂದು ಅಭಿಪ್ರಾಯಿಸಿದ್ದಾರೆ.

''ದೇಶದಲ್ಲಿ ಕಾಣಿಸಿಕೊಂಡ ಎರಡನೇ ಕೊರೊನಾ ಅಲೆಯ ಸಂದರ್ಭದಲ್ಲಿ ರಾಜ್ಯದ ಪ್ರತಿ ಹಳ್ಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ,'' ಎಂದು ರಾಮ್ ಇಕ್ಬಾಲ್ ಸಿಂಗ್ ಆರೋಪ ಮಾಡಿದ್ದಾರೆ.
''ಹಾಗೆಯೇ ಈ ಸೋಂಕಿನಿಂದ ಸಾವನ್ನಪ್ಪಿದ ಜನರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರವು ಕನಿಷ್ಠ 10 ಲಕ್ಷ ರೂ.ಗಳನ್ನು ನೀಡಬೇಕು,'' ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.
ಇನ್ನು ಈ ಸಂದರ್ಭದಲ್ಲೇ, ''ಸ್ವಾತಂತ್ರ್ಯ ದೊರೆತು 75 ವರ್ಷವಾಗಿದೆ. ಆದರೆ 34 ಲಕ್ಷ ಜನಸಂಖ್ಯೆ ಹೊಂದಿರುವ ಈ ಜಿಲ್ಲೆಯಲ್ಲಿ ವೈದ್ಯರೂ ಇಲ್ಲ ಔಷಧಿಯೂ ಇಲ್ಲ'' ಎಂದು ಇಕ್ಬಾಲ್ ಸಿಂಗ್ ಟೀಕಿಸಿದರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಲ್ಲಿಯಾ ಭೇಟಿಯ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮಾಡಿದ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಅಲ್ಲವೇ ಎಂದು ಮಾಧ್ಯಮಗಳು ಇಕ್ಬಾಲ್ ಸಿಂಗ್ರನ್ನು ಪ್ರಶ್ನಿಸಿದಾಗ, ''ಅಧಿಕಾರಿಗಳು ಸಿಎಂನ ದಾರಿ ತಪ್ಪಿಸಿದ್ದಾರೆ, ಸತ್ಯವನ್ನು ಮರೆಮಾಚಲಾಗಿದೆ,'' ಎಂದು ದೂರಿದ್ದಾರೆ.
ಈ ವೇಳೆಯೇ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಬೇಕು ಎಂದು ತಮ್ಮದೇ ಪಕ್ಷವಾದದ ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿದ ಇಕ್ಬಾಲ್ ಸಿಂಗ್, ರಾಜ್ಯದ ಕೋವಿಡ್ ನಿರ್ವಹಣೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಏತನ್ಮಧ್ಯೆ, ಬಲಿಯಾ ಬಿಜೆಪಿ ಸಂಸದ ವೀರೇಂದ್ರ ಸಿಂಗ್ ಮಾಸ್ಟ್ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕೇಂದ್ರದ ಮೂರು ಹೊಸ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಹಳಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ. ಟಿಕಾಯಿತ್ ರೈತ ಚಳವಳಿಯನ್ನು ಬಿಜೆಪಿ ವಿರೋಧಿ, ಪಶ್ಚಿಮ ಬಂಗಾಳ ಚುನಾವಣೆಗಳು, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು 370 ನೇ ವಿಧಿಯೊಂದಿಗೆ ನಂಟು ಮಾಡಿಕೊಳ್ಳಬಾರದು ಎಂದರು.
ಉತ್ತರಪ್ರದೇಶದಲ್ಲಿ ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ದ, ಬಿಜೆಪಿ ಶಾಸಕರು ಹಾಗೂ ನಾಯಕರೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ ಬಿಜೆಪಿಯು ಈಗಾಗಲೇ 2022 ರ ವಿಧಾನ ಸಭೆ ಚುನಾವಣೆಗೆ ತಯಾರಿ ಆರಂಭಿಸಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿಯ ವಾರಾಣಾಸಿ ಕ್ಷೇತ್ರವು ಈ ಉತ್ತರಪ್ರದೇಶದಲ್ಲೇ ಇರುವ ಕಾರಣ ಈ ರಾಜ್ಯದಲ್ಲಿ ತನ್ನ ಆಡಳಿತವನ್ನು ಕಳೆದುಕೊಳ್ಳದಂತೆ ಬಿಜೆಪಿಯು ಎಲ್ಲಾ ಚುನಾವಣಾ ಕಾರ್ಯತಂತ್ರ ಈಗಾಗಲೇ ಪ್ರಾರಂಭಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications