ಪ್ರಿಯಾಂಕಾ ಗಾಂಧಿಯನ್ನು ಸೈಬೀರಿಯನ್ ಹಕ್ಕಿಗೆ ಹೋಲಿಸಿದ ಉ.ಪ್ರ. ಸಚಿವ
ಲಖನೌ (ಉತ್ತರಪ್ರದೇಶ), ಮಾರ್ಚ್ 25: ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು 'ವಲಸಿಗ ಸೈಬಿರೀಯನ್ ಪಕ್ಷಿ'ಗೆ ಹೋಲಿಸಿರುವ ಉತ್ತರಪ್ರದೇಶದ ಸಚಿವ- ಬಿಜೆಪಿ ನಾಯಕ ಮೊಹ್ಸಿನ್ ರಾಜಾ, ಅಯೋಧ್ಯೆಗೆ ಭೇಟಿ ನೀಡುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಚುನಾವಣೆಯ ಪ್ರಚಾರವನ್ನು 'ಪಿಕ್ನಿಕ್'ಗೆ ಹೋಲಿಸಿದ್ದಾರೆ.
ಯಾರು ರಾಮನ ಅಸ್ತಿತ್ವವವನ್ನು ಪ್ರಶ್ನಿಸುತ್ತಾರೋ ಅವರು ಅಯೋಧ್ಯೆಯಲ್ಲಿ ಏನನ್ನು ಹುಡುಕಲು ಹೋಗುತ್ತಾರೆ? ಅವರು (ಕಾಂಗ್ರೆಸ್) ಪ್ರಯಾಗ್ ರಾಜ್ ನ ಕುಂಭ್ ಮೇಳಕ್ಕೆ ಹೋಗಲಿಲ್ಲ. ಅಯೋಧ್ಯೆಯಲ್ಲಿ ದೀಪೋತ್ಸವ ಇತ್ತು. ಅದಕ್ಕೂ ಭಾಗವಹಿಸಲಿಲ್ಲ. ಅವರು ಅಯೋಧ್ಯೆಗೆ ಮೊಘಲ್ ದೊರೆ ಬಾಬರ್ ನ ನೆನಪಿಸಿಕೊಳ್ಳಲು ಹೋಗುತ್ತಿರಬಹುದು. ಅವನು ಇನ್ನೂ ಅಲ್ಲೇ ಇರಬಹುದು ಎಂದು ಹುಡುಕಲು ಇರಬಹುದು ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಿಯಾಂಕಾ ಸೈಬಿರೀಯನ್ ಪಕ್ಷಿ. ಹವಾಮಾನ ಗಮನಿಸಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಾರೆ ಎಂದು ರಾಜಾ ಹೇಳಿದ್ದಾರೆ. ಮಾರ್ಚ್ ಇಪ್ಪತ್ತೇಳರಿಂದ ಮೂರು ದಿನಗಳ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ಹೆಸರಾಂತ ಹನುಮನ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಮೂರು ದಿನಗಳಲ್ಲಿ ಫೈಜಾಬಾದ್, ಸುಲ್ತಾನ್ ಪುರ್, ಅಮೇಥಿ, ಉನ್ನಾವೋ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮೂರು ದಿನದಲ್ಲಿ ಮೂವತ್ತೆರಡು ಕಡೆ ನಿಂತು, ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕಾಂಗ್ರೆಸ್ ನಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.