ಭಯೋತ್ಪಾದಕರ ಜೊತೆ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ರಾಜಿ: ಯೋಗಿ ಆರೋಪ
ಲಕ್ನೋ, ಫೆಬ್ರವರಿ 22: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದು, ಭಯೋತ್ಪಾದಕರನ್ನು ಪೋಷಿಸುವ ಕೆಲಸವನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಹಾರ್ದೋಯ್ ಕ್ಷೇತ್ರದಲ್ಲಿ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಹ್ಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ 38 ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿರುವುದನ್ನು ಉಲ್ಲೇಖಿಸಿದರು. ಈ 38 ಅಪರಾಧಿಗಳಲ್ಲಿ 8 ಅಪರಾಧಿಗಳು ಅಜಂಘರ್ ನಂಟು ಹೊಂದಿದ್ದಾರೆ. ಈ ಎಂಟು ಅಪರಾಧಿಗಳ ಪೋಷಕರು ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥರು ಈ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಹಾಗೂ ತಪ್ಪೊಪ್ಪಿಕೊಳ್ಳಬೇಕು. ನಿಮಗೆ ವೋಟ್ ಬ್ಯಾಂಕ್ ಮುಖ್ಯವೋ ಅಥವಾ ದೇಶದ ಭದ್ರತೆ ಮುಖ್ಯವೋ ಎಂಬ ಪ್ರಶ್ನೆಗೆ ಅಖಿಲೇಶ್ ಯಾದವ್ ಉತ್ತರಿಸಬೇಕು ಎಂದು ಯೋಗಿ ಆದಿತ್ಯನಾಥ್ ಸವಾಲ್ ಹಾಕಿದರು.

ಅಹ್ಮದಾಬಾದ್ ಸರಣಿ ಸ್ಫೋಟ ಪ್ರಕರಣದ ಉಲ್ಲೇಖ:
ಅಹ್ಮದಾಬಾದ್ ಸರಣಿ ಸ್ಫೋಟದ ಅಪರಾಧಿಗಳಲ್ಲಿ ಒಬ್ಬರಾದ ಮೊಹಮ್ಮದ್ ಸೈಫ್ ತಂದೆ ಶಹಬಾದ್ ಅಹ್ಮದ್ ಜೊತೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಾಣಿಸಿಕೊಂಡ ಫೋಟೋದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಲ್ಲೇಖಿಸಿದರು. ಭಯೋತ್ಪಾದಕನೊಂದಿಗಿನ ಅವರ ಸಂಬಂಧವೇನು ಎಂಬುದರ ಬಗ್ಗೆ ಎಸ್ಪಿ ವಿವರಣೆ ನೀಡಬೇಕಿದೆ ಎಂದು ಹೇಳಿದರು.
ಭಯೋತ್ಪಾದಕರ ಬಗ್ಗೆ ಸಮಾಜವಾದಿ ಪಕ್ಷಕ್ಕೆ ಸಹಾನುಭೂತಿ:
ಸಮಾಜವಾದಿ ಪಕ್ಷವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದ ಆದಿತ್ಯನಾಥ್, 2017ರ ಮೊದಲು ಉತ್ತರ ಪ್ರದೇಶವು ಅರಾಜಕತೆ, ಗಲಭೆಗಳು, ಭಯೋತ್ಪಾದನೆ, ಲೂಟಿ, ಭ್ರಷ್ಟಾಚಾರ ಮತ್ತು ಗೂಂಡಾಗಿರಿಯಿಂದ ಕೂಡಿತ್ತು. ರಾಜ್ಯದಿಂದ ಭಯೋತ್ಪಾದನೆಯನ್ನು ತೊಡೆದುಹಾಕಲು ಮತ್ತು ರಾಜ್ಯದ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ನಾವು ಅಸಹಿಷ್ಣುತೆ ನೀತಿಯೊಂದಿಗೆ ಕೆಲಸ ಮಾಡಿದ್ದೇವೆ. ಅವರು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಅಯೋಧ್ಯೆಯಲ್ಲಿ ರಾಮಜನ್ಮಭೂಮಿ, ಹೈಕೋರ್ಟ್ಗಳು ಮತ್ತು ಸಿಆರ್ಪಿಎಫ್ ಶಿಬಿರಗಳ ಮೇಲೆ ದಾಳಿ ಮಾಡಿದ ಹಲವು ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದುಕೊಂಡಿದ್ದಾರೆ ಎಂದು ಎಸ್ಪಿ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ:
ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಜಾತಿ, ಧರ್ಮದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಸಿಎಂ ಯೋಗಿ ಆದಿತ್ಯನಾಥ್, ಈ ಹಿಂದೆ ಈದ್ಗೆ ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಹೋಳಿ ಅಥವಾ ದೀಪಾವಳಿಗೆ ವಿದ್ಯುತ್ ನೀಡುತ್ತಿರಲಿಲ್ಲ. ಈಗ ಪ್ರತಿ ಮನೆಗೂ ವಿದ್ಯುತ್ ಸಿಗುತ್ತಿದ್ದು, ಜನರಿಗೆ ವಿದ್ಯುತ್ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದರು.
ರಾವಣ ಸೇನೆಯಿಂದ ರಾಮ ಸೇನೆಗೆ ರಾಕೇಶ್ ಸಿಂಗ್:
ರಾಯ್ ಬರೇಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಚಂದ್ಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಕೇಶ್ ಸಿಂಗ್ ಈ ಹಿಂದೆ 'ರಾವಣನ ಸೇನೆ'ಯಲ್ಲಿದ್ದರು. ಕಳೆದ 2017ರಲ್ಲಿ ಇದೇ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಆದರೆ ಈಗ ಅವರು ರಾಮನ ಸೇನೆಯಾಗಿರುವ ಬಿಜೆಪಿಯಲ್ಲಿದ್ದಾರೆ ಎಂದರು. ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಯೋಗಿ ಆರೋಪಿಸಿದರು.
ಕುಟುಂಬಗಳ ಅಭಿವೃದ್ಧಿಯಷ್ಟೇ ಮುಖ್ಯ:
ಎಸ್ಪಿಗಳ ಹೆಸರು ಸಮಾಜವಾದಿ, ಆದರೆ ಅವರ ಕಾರ್ಯವು 'ದಾಂಗೆವಾಡಿ' ಆಗಿದೆ. ಅವರ ಚಿಂತನೆಯ ಪ್ರಕ್ರಿಯೆಯು 'ಪರಿವಾರ ವಾದಿ' ಆಗಿದ್ದು, ತಮ್ಮ ಕುಟುಂಬವನ್ನು ಮಾತ್ರ ಅಭಿವೃದ್ಧಿಪಡಿಸಿದರು. ಉಳಿದ ಎಲ್ಲವನ್ನೂ ಹಾಗೂ ಎಲ್ಲರನ್ನೂ ಹಾಗೆ ಬಿಟ್ಟರು. "ವಿರೋಧ ಪಕ್ಷಗಳು ಬಿಜೆಪಿಯನ್ನು ತಡೆಯಲು ಹೆಚ್ಚಾಗಿ ಪ್ರಯತ್ನಿಸುತ್ತಿದ್ದಾರೆ, ಆದರೆ ಬಿಜೆಪಿಗೆ ಸಾರ್ವಜನಿಕರ ಆಶೀರ್ವಾದವಿದೆ. ನಾವು ಯುಪಿಯಲ್ಲಿ ಮತ್ತೆ 325 ಸ್ಥಾನಗಳ ಗಡಿಯನ್ನು ದಾಟುತ್ತೇವೆ, ಆದರೆ ಹಾರ್ದೋಯಿಯಲ್ಲಿ ಬಿಜೆಪಿಯ ಕಮಲ ಅರಳಿದಾಗ ಮಾತ್ರ ಅದು ಸಾಧ್ಯ" ಎಂದು ಸಿಎಂ ಯೋಗಿ ಹೇಳಿದರು.












Click it and Unblock the Notifications