ಹತ್ರಾಸ್ ಅತ್ಯಾಚಾರ ಕೇಸ್: ರಾತ್ರಿ 2.30ಕ್ಕೆ ಸಂತ್ರಸ್ತೆ ಅಂತ್ಯಕ್ರಿಯೆ
ಲಕ್ನೋ, ಸಪ್ಟೆಂಬರ್.30: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು ಎನ್ನಲಾದ 20 ವರ್ಷದ ಯುವತಿಯ ಅಂತ್ಯ ಸಂಸ್ಕಾರವನ್ನು ಪೊಲೀಸರು ಮಧ್ಯರಾತ್ರಿ 2.30ರ ಸಮಯದಲ್ಲಿ ನೆರವೇರಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಎರಡು ವಾರಗಳ ಹಿಂದೆ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಯುವತಿಯು ಮಂಗಳವಾರಿ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಂತ್ರಸ್ತೆ ಕುಟಂಬಸ್ಥರಿಗೂ ಮಾಹಿತಿ ನೀಡದೇ ಪೊಲೀಸರು ಮಧ್ಯರಾತ್ರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಅಂತ್ಯಸಂಸ್ಕಾರಕ್ಕೂ ಮೊದಲು ನಡೆದ ಘಟನೆಗೆ ಸಂಬಂಧಿಸಿದಂತೆ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ. ಸಂತ್ರಸ್ತೆಯ ಸಂಬಂಧಿಕರಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ನೀಡದೇ, ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಹೊತ್ತೊಯ್ಯಲಾಗಿದೆ. ಈ ವೇಳೆ ಅಸಹಾಯಕ ಸ್ಥಿತಿಯಲ್ಲಿ ಸಂತ್ರಸ್ತೆಯ ತಾಯಿ ಕಣ್ಣೀರು ಹಾಕಿರುವುದು ಕರುಳು ಹಿಂಡುವಂತಿದೆ.

ಹುಲ್ಲು ಕೀಳುತ್ತಿದ್ದ ಯುವತಿ ಮೇಲೆ ಕ್ರೌರ್ಯ:
ಕುಟುಂಬದವರ ಜತೆ ಹೊಲದಲ್ಲಿ ಹುಲ್ಲು ಕೀಳುತ್ತಿದ್ದ ಯುವತಿಯನ್ನು ಎಳೆದೊಯ್ದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಯುವತಿಗೆ ತೀವ್ರ ಗಾಯವಾಗಿದ್ದು, ಆಕೆಯ ನಾಲಿಗೆ ಕತ್ತರಿಸಿ ಹೋಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ಮಂಗಳವಾರ ಬೆಳಗ್ಗೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಹತ್ರಾಸ್ ಪೊಲೀಸರ ವಾದವೇನು:
ಸುದ್ದಿಗಾರರೊಂದಿಗೆ ಮಾತನಾಡಿದ ಹತ್ರಾಸ್ ಎಸ್ಪಿ ವಿಕ್ರಾಂತ್ ವೀರ್, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಆಕೆಯ ದೇಹದಲ್ಲಿ ಯಾವುದೇ ಗುರುತುಗಳು ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆಕೆಯ ನಾಲಿಗೆಯನ್ನು ತುಂಡು ಮಾಡಲಾಗಿದೆ ಎಂಬ ವರದಿಗಳು ಕೂಡ ಸುಳ್ಳು ಎಂದು ಹೇಳಿದರು. 'ಹತ್ರಾಸ್ ಅಥವಾ ಅಲಿಗಡದ ವೈದ್ಯರಾಗಲೀ ಲೈಂಗಿಕ ದೌರ್ಜನ್ಯ ನಡೆದ ಲಕ್ಷಣಗಳನ್ನು ದೃಢಪಡಿಸಿಲ್ಲ. ವಿಧಿವಿಜ್ಞಾನ ನೆರವಿನೊಂದಿಗೆ ವೈದ್ಯರು ಈ ವಿಷಯವನ್ನು ತನಿಖೆ ಮಾಡಿದ್ದಾರೆ. ಸಂತ್ರಸ್ತೆಯ ಖಾಸಗಿ ಅಂಗಗಳಲ್ಲಿ ಅತ್ಯಾಚಾರದ ಕುರುಹುಗಳು ಕಂಡುಬಂದಿಲ್ಲ' ಎಂದು ತಿಳಿಸಿದರು.












Click it and Unblock the Notifications