ಮತಎಣಿಕೆ 2 ದಿನ ಇರುವಂತೆ ವಾರಣಾಸಿಯಲ್ಲಿ ಇವಿಎಂ ಮಷಿನ್ ಕಳ್ಳತನ: ಅಖಿಲೇಶ್ ಯಾದವ್
ಲಕ್ನೋ, ಮಾರ್ಚ್ 8: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೆ ಎರಡು ದಿನಗಳು ಬಾಕಿ ಇರುವಂತೆ ವಾರಣಾಸಿ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ಕದ್ದುಕೊಂಡು ಹೋಗಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದ್ ಆರೋಪಿಸಿದ್ದಾರೆ.
ಯುಪಿ ಚುನಾವಣೆಯಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಸಮಾಜವಾದಿ ಪಕ್ಷವು ಪ್ರಬಲ ಪೈಪೋಟಿಯನ್ನು ಒಡ್ಡುತ್ತಿದೆ. ಇದರ ಮಧ್ಯೆ ಬಿಜೆಪಿಯು ರಾಜ್ಯದ ಕೆಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವಿಎಂ ಅನ್ನು ಕಳ್ಳತನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Video: ದುರ್ಬೀನು ಮೂಲಕ ಎಸ್ಪಿ ಅಭ್ಯರ್ಥಿ ನೋಡುತ್ತಿರುವುದೇನು?
ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕೇವಲ 5000 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಅಂಥ ಕ್ಷೇತ್ರಗಳನ್ನು ಗುರುತಿಸಿ ಅಲ್ಲಿ ಇವಿಎಂ ಅನ್ನು ಕದಿಯಲಾಗುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸುತ್ತಿದ್ದಾರೆ.
ವಾರಣಾಸಿ ಜಿಲ್ಲಾಡಳಿತದ ಸ್ಪಷ್ಟನೆ:
ಟ್ರಕ್ನಲ್ಲಿರುವ ಇವಿಎಂಗಳಿರುವ ಕೆಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಸಂಬಂಧ ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ ನೀಡಿದ್ದು, ಇವಿಎಂಗಳನ್ನು ಮತದಾನಕ್ಕೆ ಬಳಸಲಾಗುತ್ತಿಲ್ಲ. ಅವುಗಳನ್ನು "ಹ್ಯಾಂಡ್-ಆನ್ ತರಬೇತಿ"ಗಾಗಿ ಬಳಸಲಾಗುತ್ತಿದೆ ಎಂದು ಹೇಳಿದೆ.
"ಕೆಲವು ರಾಜಕೀಯ ಪಕ್ಷಗಳು" ವದಂತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ, ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು "ಸಿಆರ್ಪಿಎಫ್ ವಶದಲ್ಲಿರುವ ಸ್ಟ್ರಾಂಗ್ ರೂಮ್ನಲ್ಲಿ ಸೀಲ್ ಮಾಡಲಾಗಿದೆ. ಸಿಸಿಟಿವಿ ಕಣ್ಗಾವಲು ಇದೆ, ಅಲ್ಲದೇ ಇದನ್ನು ಎಲ್ಲಾ ಪಕ್ಷಗಳ ಸದಸ್ಯರು ಕಣ್ಗಾವಲು ಇಟ್ಟಿರುತ್ತಾರೆ," ಎಂದು ಹೇಳಿದರು. ಇವಿಎಂಗಳನ್ನು ಮಂಡಿ ಎಣಿಕೆ ಕೇಂದ್ರದಲ್ಲಿನ ಸಂಗ್ರಹಣೆ ಪ್ರದೇಶದಿಂದ ಸ್ಥಳೀಯ ಕಾಲೇಜಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಮಾಡಿರುವ ಆರೋಪವೇನು?:
ವಾರಣಾಸಿಯಲ್ಲಿ ನಾವು ಒಂದು ಟ್ರಕ್ ಅನ್ನು ಅಡ್ಡಗಟ್ಟಿದ್ದು, ಎರಡು ಟ್ರಕ್ಗಳು ತಪ್ಪಿಸಿಕೊಂಡು ಹೋಗಿವೆ. ಯಾವುದೇ ಸಂಶಯಾಸ್ಪದ ಚಟುವಟಿಕೆ ಇಲ್ಲದಿದ್ದರೆ, ಇವಿಎಂ ಹೊಂದಿರುವ ಎರಡು ಟ್ರಕ್ಗಳು ಏಕೆ ತಪ್ಪಿಸಿಕೊಂಡು ಹೋಗಬೇಕಿತ್ತು? ಅಭ್ಯರ್ಥಿಗಳ ಒಪ್ಪಿಗೆಯಿಲ್ಲದೆ ನೀವು ಯಾವುದೇ ಇವಿಎಂಗಳನ್ನು ಎಲ್ಲಿಯೂ ತೆಗೆದುಕೊಂಡು ಹೋಗುವಂತಿಲ್ಲ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯೊಬ್ಬರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ 'ಬಿಜೆಪಿ ಸೋತಲ್ಲೆಲ್ಲ ಮತ ಎಣಿಕೆ ನಿಧಾನಗತಿಯಲ್ಲಿ ನಡೆಯಬೇಕು' ಎಂದು ಹೇಳುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಗುತ್ತಿದೆ. "ಈಗ ಇವಿಎಂಗಳು ಸಿಕ್ಕಿಬಿದ್ದಿರುವುದರಿಂದ ಅಧಿಕಾರಿಗಳು ಅನೇಕ ವಿನಾಯಿತಿಯನ್ನು ನೀಡುತ್ತಾರೆ," ಎಂದು ದೂಷಿಸಿದರು.
ಕಳೆದ 2017ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 5,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 47 ಸ್ಥಾನಗಳನ್ನು ಗೆದ್ದಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಈಗ ಎಕ್ಸಿಟ್ ಪೋಲ್ಗಳು "ಬಿಜೆಪಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರವನ್ನು ಹಾಕುತ್ತಿವೆ. ಕಳ್ಳತನದಿಂದ ಯಾವುದೇ ಲೆಕ್ಕಾಚಾರವನ್ನು ತಿರುವು ಮುರುವು ಮಾಡಬಹುದು ಎಂದು ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ಟ್ವೀಟ್ ಸಂದೇಶ:
ವಾರಣಾಸಿಯಲ್ಲಿ ಇವಿಎಂ ಸಿಕ್ಕಿಬಿದ್ದಿರುವ ಸುದ್ದಿ ಯುಪಿಯ ಪ್ರತಿ ವಿಧಾನಸಭೆಗೆ ಎಚ್ಚರಿಕೆ ಸಂದೇಶ ನೀಡುತ್ತಿದೆ. ಮತ ಎಣಿಕೆಯಲ್ಲಿ ಅಕ್ರಮ ಎಸಗುವ ಪ್ರಯತ್ನವನ್ನು ವಿಫಲಗೊಳಿಸಲು ಎಸ್ಪಿ-ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳು ಮತ್ತು ಬೆಂಬಲಿಗರು ತಮ್ಮ ಕ್ಯಾಮೆರಾಗಳೊಂದಿಗೆ ಸಿದ್ಧರಾಗಿರಬೇಕು. ಪ್ರಜಾಪ್ರಭುತ್ವ ಮತ್ತು ಭವಿಷ್ಯವನ್ನು ರಕ್ಷಿಸಲು ಯುವಕರು ಮತ ಎಣಿಕೆಯಲ್ಲಿ ಸೈನಿಕರಾಗಬೇಕಿದೆ," ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಯುಪಿ ಫಲಿತಾಂಶದ ಬಗ್ಗೆ ಪೋಲ್ ಆಪ್ ಎಕ್ಸಿಟ್ ಪೋಲ್:
ಉತ್ತರ ಪ್ರದೇಶ ಸಮೀಕ್ಷೆಗಳ ಒಟ್ಟಾರೆ ಚಿತ್ರಣ
ಯುಪಿಗೆ ಸಂಬಂಧಿಸಿದ ಸಮೀಕ್ಷೆಗಳ ಚಿತ್ರಣ
ಉತ್ತರ ಪ್ರದೇಶದ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವಿಗೆ 202 ಸ್ಥಾನಗಳು ಬೇಕು. ಯುಪಿಗೆ ಸಂಬಂಧಿಸಿದಂತೆ ಎಬಿಸಿ ನ್ಯೂಸ್-ಸಿವೋಟರ್, ಇಟಿಜಿ ರಿಸರ್ಚ್, ಇಂಡಿಯಾ ನ್ಯೂಸ್, ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟುಡೇ ಸಿಎನ್ಎಕ್ಸ್, ನ್ಯೂಸ್ 24- ಟುಡೇ ಚಾಣಕ್ಯ, ನ್ಯೂಸ್ ಎಕ್ಸ್ - ಪೋಲ್ ಸ್ಟ್ರಾಟ್, ರಿಪಬ್ಲಿಕ್, ಟೈಮ್ಸ್ ನೌ, ಜೀ ನ್ಯೂಸ್ ಸೇರಿದಂತೆ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವು ಹೀಗಿದೆ:
ಯುಪಿ ಒಟ್ಟಾರೆ ಫಲಿತಾಂಶ:
ಬಿಜೆಪಿ ಮೈತ್ರಿಕೂಟ - 242
ಸಮಾಜವಾದಿ ಮೈತ್ರಿಕೂಟ - 143
ಬಿಎಸ್ಪಿ - 11
ಕಾಂಗ್ರೆಸ್ ಮೈತ್ರಿಕೂಟ - 4