ವಾರಣಾಸಿಯಲ್ಲಿ ಇವಿಎಂ ಕಳ್ಳತನ ಆರೋಪದ ಬೆನ್ನಲ್ಲೇ ಬೀದಿಗಿಳಿದ ಎಸ್ಪಿ ಕಾರ್ಯಕರ್ತರು
ಲಕ್ನೋ, ಮಾರ್ಚ್ 8: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ಕದ್ದುಕೊಂಡು ಹೋಗಲಾಗಿದೆ ಎಂದು ಅಖಿಲೇಶ್ ಯಾದ್ ಆರೋಪಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ.
ಮಂಗಳವಾರ ರಾತ್ರಿ ವೇಳೆಗೆ ವಾರಣಾಸಿಯ ಪಹರಿಯಾ ಮಂಡಿ ಪ್ರದೇಶದ ಸ್ಟ್ರಾಂಗ್ ರೂಮ್ ಎದುರಿನಲ್ಲಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Video: ದುರ್ಬೀನು ಮೂಲಕ ಎಸ್ಪಿ ಅಭ್ಯರ್ಥಿ ನೋಡುತ್ತಿರುವುದೇನು?
ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೆ ಎರಡು ದಿನಗಳು ಬಾಕಿ ಇರುವಂತೆ ವಾರಣಾಸಿ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ಕದ್ದುಕೊಂಡು ಹೋಗಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದ್ ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ಟ್ವೀಟ್ ಆರೋಪ:
ವಾರಣಾಸಿಯಲ್ಲಿ ನಾವು ಒಂದು ಟ್ರಕ್ ಅನ್ನು ಅಡ್ಡಗಟ್ಟಿದ್ದು, ಎರಡು ಟ್ರಕ್ಗಳು ತಪ್ಪಿಸಿಕೊಂಡು ಹೋಗಿವೆ. ಯಾವುದೇ ಸಂಶಯಾಸ್ಪದ ಚಟುವಟಿಕೆ ಇಲ್ಲದಿದ್ದರೆ, ಇವಿಎಂ ಹೊಂದಿರುವ ಎರಡು ಟ್ರಕ್ಗಳು ಏಕೆ ತಪ್ಪಿಸಿಕೊಂಡು ಹೋಗಬೇಕಿತ್ತು? ಅಭ್ಯರ್ಥಿಗಳ ಒಪ್ಪಿಗೆಯಿಲ್ಲದೆ ನೀವು ಯಾವುದೇ ಇವಿಎಂಗಳನ್ನು ಎಲ್ಲಿಯೂ ತೆಗೆದುಕೊಂಡು ಹೋಗುವಂತಿಲ್ಲ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಕಳೆದ 2017ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 5,000ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ 47 ಸ್ಥಾನಗಳನ್ನು ಗೆದ್ದಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಈಗ ಎಕ್ಸಿಟ್ ಪೋಲ್ಗಳು "ಬಿಜೆಪಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರವನ್ನು ಹಾಕುತ್ತಿವೆ. ಕಳ್ಳತನದಿಂದ ಯಾವುದೇ ಲೆಕ್ಕಾಚಾರವನ್ನು ತಿರುವು ಮುರುವು ಮಾಡಬಹುದು ಎಂದು ಆರೋಪಿಸಿದ್ದಾರೆ.
ವಾರಣಾಸಿಯಲ್ಲಿ ಇವಿಎಂ ಸಿಕ್ಕಿಬಿದ್ದಿರುವ ಸುದ್ದಿ ಯುಪಿಯ ಪ್ರತಿ ವಿಧಾನಸಭೆಗೆ ಎಚ್ಚರಿಕೆ ಸಂದೇಶ ನೀಡುತ್ತಿದೆ. ಮತ ಎಣಿಕೆಯಲ್ಲಿ ಅಕ್ರಮ ಎಸಗುವ ಪ್ರಯತ್ನವನ್ನು ವಿಫಲಗೊಳಿಸಲು ಎಸ್ಪಿ-ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳು ಮತ್ತು ಬೆಂಬಲಿಗರು ತಮ್ಮ ಕ್ಯಾಮೆರಾಗಳೊಂದಿಗೆ ಸಿದ್ಧರಾಗಿರಬೇಕು. ಪ್ರಜಾಪ್ರಭುತ್ವ ಮತ್ತು ಭವಿಷ್ಯವನ್ನು ರಕ್ಷಿಸಲು ಯುವಕರು ಮತ ಎಣಿಕೆಯಲ್ಲಿ ಸೈನಿಕರಾಗಬೇಕಿದೆ," ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ 10ರಂದು ಅಂತಿಮ ಫಲಿತಾಂಶ:
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರ ಬೀಳಲಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ 202 ಸ್ಥಾನಗಳ ಅಗತ್ಯವಿದ್ದು, ಬಹುಪಾಲು ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಎರಡನೇ ಬಾರಿ ಸರ್ಕಾರ ರಚನೆ ಅವಕಾಶ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.