ಬಂಪರ್ ಭರವಸೆ: ಯುಪಿಯಲ್ಲಿ ಹೋಳಿ ಹಬ್ಬದ ದಿನವೇ ಮನೆ ಮನೆಗೆ ಉಚಿತ ಸಿಲಿಂಡರ್; ಅಮಿತ್ ಶಾ
ಲಕ್ನೋ, ಫೆಬ್ರವರಿ 15: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸಾಲು ಸಾಲು ಭರವಸೆಗಳನ್ನು ನೀಡುತ್ತಿವೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೋಳಿ ಹಬ್ಬದ ದಿನವೇ ಜನತೆಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಇದೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಬಡವರಿಗೆ ಒಂದು ಕೆಜಿ ತುಪ್ಪ ಹಾಗೂ ಉಚಿತ ಪಡಿತರವನ್ನು ನೀಡಲಾಗುವುದು ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಶ್ವಾಸನೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮಿತ್ ಶಾ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ.
ರಾಯ್ ಬರೇಲಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, "ರಾಜ್ಯದಲ್ಲಿ ಚುನಾವಣೆವರೆಗೂ ಮಾತ್ರ ಬಡವರು ಉಚಿತವಾಗಿ ಪಡಿತರ ಪಡೆಯುತ್ತಾರೆ, ತದನಂತರ ಪಡಿತರ ಸಿಗುವುದಿಲ್ಲ. ಈ ಮೊದಲು ನವೆಂಬರ್ ತಿಂಗಳವರೆಗೂ ಪಡಿತರವನ್ನು ನೀಡುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಯುಪಿ ಚುನಾವಣೆ ಘೋಷಣೆಯಾದ ಹಿನ್ನೆಲೆ ಅದನ್ನು ಮಾರ್ಚ್ ತಿಂಗಳವರೆಗೂ ವಿಸ್ತರಣೆ ಮಾಡಲಾಯಿತು," ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು.

ಒಂದು ಕೆಜಿ ತುಪ್ಪದ ಜೊತೆಗೆ ಉಚಿತ ಗ್ಯಾಸ್ ಸಿಲಿಂಡರ್
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಬಡವರಿಗೆ ಉಚಿತವಾಗಿ ಪಡಿತರವನ್ನು ನೀಡಲಾಗುವುದು. ಸಾಸುವೆ ಎಣ್ಣೆ ಜೊತೆಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಲಾಗುವುದು. ಇದರ ಜೊತೆಗೆ ಬಡವರ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಒಂದು ಕೆಜಿ ಉಚಿತ ತುಪ್ಪವನ್ನು ನೀಡಲಾಗುವುದು ಎಂದು ಅಖಿಲೇಶ್ ಯಾದವ್ ಘೋಷಿಸಿದ್ದರು.

ಉತ್ತರ ಪ್ರದೇಶದಲ್ಲಿ 11 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ
ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷ ಬಿಜೆಪಿ ವಿತರಿಸುತ್ತಿರುವ ಪಡಿತರದ ಗುಣಮಟ್ಟ ತೀರಾ ಕಳಪೆಯಾಗಿದ್ದು, ಉಪ್ಪಿನಲ್ಲಿ ಗಾಜಿನ ಕಣಗಳು ಕಂಡುಬಂದಿವೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಉಚಿತ ಪಡಿತರ ಮತ್ತು ತುಪ್ಪದ ಜೊತೆಗೆ, ರಾಜ್ಯದ ಉದ್ಯೋಗ ಪರಿಸ್ಥಿತಿಯನ್ನು ಉತ್ತಮಗೊಳಿಸಲು 11 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಖಿಲೇಶ್ ಭರವಸೆ ನೀಡಿದರು.

"ಯುಪಿಯಲ್ಲಿ ಬಿಜೆಪಿ ನಾಯಕರಿಗೆ ಖಾಲಿ ಸಿಲಂಡರ್ ಪ್ರದರ್ಶನ"
ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಮನೆ ಮನೆಗೆ ತೆರಳಿ ಮತ ಕೇಳುತ್ತಿದ್ದರು. ಆ ಪಕ್ಷದ ಹಿರಿಯ ನಾಯಕರು ಕರಪತ್ರಗಳನ್ನು ಹಂಚುತ್ತಿದ್ದರು. ಆದರೆ ಈಗ ಆ ಪ್ರಚಾರವನ್ನು ನಿಲ್ಲಿಸಲಾಗಿದೆ, ಏಕೆಂದರೆ ಕೆಲವು ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಅವರಿಗೆ ಖಾಲಿ ಗ್ಯಾಸ್ ಸಿಲಿಂಡರ್ಗಳನ್ನು ಪ್ರದರ್ಶಿಸಿದ್ದಾರೆ. ಖಾಲಿ ಸಿಲಿಂಡರ್ಗಳನ್ನು ತೋರಿಸಿದ ದಿನದಿಂದ ಅವರ ಮನೆ-ಮನೆ ಪ್ರಚಾರ ನಿಲ್ಲಿಸಿದ್ದಾರೆ ಎಂದು ಅಖಿಲೇಶ್ ಯಾದವ್ ದೂಷಿಸಿದ್ದಾರೆ.

ಯುಪಿಯಲ್ಲಿ ಹೋಳಿ ಹಬ್ಬದ ದಿನವೇ ಉಚಿತ ಸಿಲಿಂಡರ್
ಉತ್ತರ ಪ್ರದೇಶದ ಔರೈಯಾದಲ್ಲಿ ಮಾತನಾಡಿದ ಅಮಿತ್ ಶಾ, ರೈತರಿಗೆ ಉಚಿತ ವಿದ್ಯುತ್ ಸರಬರಾಜು ಸೇರಿದಂತೆ ಹಲವು ಭರವಸೆಗಳನ್ನು ಘೋಷಿಸಿದರು. ಮಾರ್ಚ್ 10ರಂದು ಮತ ಎಣಿಕೆಯಿದೆ, 10ರಂದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ, ಮಾರ್ಚ್ 18ರ ಹೋಳಿ ಹಬ್ಬದ ದಿನ ಉಚಿತ ಗ್ಯಾಸ್ ಸಿಲಿಂಡರ್ ನಿಮ್ಮ ಮನೆಗೆ ತಲುಪುತ್ತದೆ. ಮುಂದಿನ 5 ವರ್ಷಗಳವರೆಗೆ ಯಾವುದೇ ರೈತರು ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ಶಾ ಹೇಳಿದರು.
ಬಿಜೆಪಿ ತನ್ನ ಯುಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪ್ರತಿಬಿಂಬಿಸುತ್ತದೆ. ರೈತರಿಗೆ ಉಚಿತ ವಿದ್ಯುತ್, ಗೋಧಿ ಮತ್ತು ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆ, ಕಬ್ಬಿನ ಗಿರಣಿ ಆಧುನೀಕರಣದಂತಹ ಯೋಜನೆಗಳನ್ನು ಪಕ್ಷವು ಭರವಸೆ ನೀಡಿದೆ. ಅಖಿಲೇಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ರಾಜ್ಯದಲ್ಲಿ ಬಿಜೆಪಿ ಹೆಣ್ಣು ಮಕ್ಕಳಿಗೆ ಸ್ಕೂಟಿ ನೀಡಿದರೆ ಇಂಧನ ನೀಡುವುದಾಗಿ ಎಸ್ಪಿ ಅಧ್ಯಕ್ಷರು ಹೇಳಿದ್ದಾರೆ. ಆದರೆ ಎಸ್ಪಿ ಅಧಿಕಾರಕ್ಕೆ ಬಂದರೆ ಸ್ಕೂಟಿ ಅಥವಾ ಇಂಧನ ಇರುವುದಿಲ್ಲ ಎಂದು ತಿರುಗೇಟು ನೀಡಿದರು.












Click it and Unblock the Notifications