ಉತ್ತರ ಪ್ರದೇಶ: ಕಳಪೆ ಆಹಾರದ ಬಗ್ಗೆ ಕಣ್ಣೀರಿಡುತ್ತಾ ಪ್ರಶ್ನಿಸಿದ್ದ ಪೊಲೀಸ್ಗೆ ಎತ್ತಂಗಡಿ ಶಿಕ್ಷೆ
ಫಿರೋಜಾಬಾದ್ ಸೆಪ್ಟೆಂಬರ್ 23: 'ಈ ಆಹಾರವನ್ನು ನಾಯಿ ಕೂಡ ತಿನ್ನಲು ಆಗುವುದಿಲ್ಲ' ಎಂದು ಗಳಗಳನೇ ಕಣ್ಣೀರು ಹಾಕಿದ್ದ ಉತ್ತರಪ್ರದೇಶದ ಕಾನ್ಸ್ಟೇಬಲ್ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಕಳಪೆ ಆಹಾರ ನೀಡುತ್ತಿರುವ ವಿಷಯವನ್ನು ಎತ್ತಿ ಹಿಡಿದಿದ್ದ ಪೊಲೀಸ್ ಪೇದೆಯನ್ನು ಫಿರೋಜಾಬಾದ್ನಿಂದ 600 ಕಿಲೋಮೀಟರ್ ದೂರದಲ್ಲಿರುವ ಗಾಜಿಪುರ ಜಿಲ್ಲೆಗೆ ವರ್ಗಾಯಿಸಲಾಗಿದೆ.
ವಿಡಿಯೋ ವೈರಲ್ ಬಳಿಕ 26 ವರ್ಷದ ಕಾನ್ಸ್ಟೇಬಲ್ ಮನೋಜ್ ಕುಮಾರ್ ಅವರನ್ನು 'ದೀರ್ಘ ರಜೆ' ಮೇಲೆ ಕಳುಹಿಸಲಾಗಿತ್ತು. ಬಳಿಕ ಅವರನ್ನು ಗಾಜಿಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸ್ ಲೈನ್ನಲ್ಲಿರುವ ಮೆಸ್ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿದ ಕಾನ್ಸ್ಟೇಬಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಾನ್ಸ್ಟೇಬಲ್ ಮನೋಜ್ ಕುಮಾರ್ ಆಹಾರದ ಗುಣಮಟ್ಟದ ಬಗ್ಗೆ ರಸ್ತೆಯ ಮೇಲೆ ನಿಂತು ಅಳುತ್ತಾ ವಿವರಿಸಿ ಅಪಾರ ಜನಸ್ತೋಮವನ್ನು ಸೆಳೆದಿದ್ದರು. 12 ಗಂಟೆಗಳ ಕರ್ತವ್ಯದ ನಂತರ ಹಸಿದ ಕಾನ್ಸ್ಟೆಬಲ್ ಗುಣಮಟ್ಟವಲ್ಲದ ಆಹಾರವನ್ನು ನೋಡಿ ಕಣ್ಣೀರಾಕಿದ ಮನಕರಗುವ ವಿಡಿಯೋ ವೈರಲ್ ಆಗಿತ್ತು.
ಅಲಿಗಢ್ ಜಿಲ್ಲೆಯ ನಿವಾಸಿ ಮನೋಜ್ ಕುಮಾರ್, "ನನ್ನ ಕುಟುಂಬದಲ್ಲಿ ಇಬ್ಬರು ಕಿರಿಯ ಸಹೋದರರು ಮತ್ತು ಅವಿವಾಹಿತ ಸಹೋದರಿ ಸೇರಿದಂತೆ ಒಟ್ಟು ಆರು ಜನರಿದ್ದಾರೆ. ನನ್ನ ಪೋಷಕರು ವಯಸ್ಸಾದವರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಆರೈಕೆ ಮಾಡಲು ತುಂಬಾ ಕಷ್ಟವಾಗುತ್ತದೆ. ಅವರಿಂದ 600 ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ನಾನು ಮಾತ್ರ ಸಂಪಾದಿಸುವ ಸದಸ್ಯ" ಎಂದಿದ್ದರು.
A UP police constable posted in Firozabad district protests against the quality of food served at the mess in police lines. He was later whisked away. A probe has been ordered. pic.twitter.com/nxspEONdNN
— Piyush Rai (@Benarasiyaa) August 10, 2022
'ನನಗೆ ಕೆಲಸ ಅನಿವಾರ್ಯವಾಗಿದೆ. ಆದರೆ ಶ್ರಮದಿಂದ ಕೆಲಸ ಮಾಡಿದ ಬಳಿಕವೂ ನಮಗೆ ನೀಡುವ ಆಹಾರ ಗುಣಮಟ್ಟದ್ದಾಗಿರುವುದಿಲ್ಲ. ಅದನ್ನು ನಾಯಿ ಕೂಡ ತಿನ್ನಲು ಕಷ್ಟವಾಗುತ್ತದೆ' ಎಂದು ಅಳುತ್ತಾ ಮನೋಜ್ ಊಟದ ತಟ್ಟೆಯಲ್ಲಿದ್ದ ಆಹಾರದ ಬಗ್ಗೆ ವಿವರಣೆ ನೀಡಿದ್ದರು.
ಪೊಲೀಸ್ ಪಡೆಯಲ್ಲಿರುವ ಕುಮಾರ್ನ ಸ್ನೇಹಿತರೊಬ್ಬರು, "ಅವರಂತಹ ಪ್ರಾಮಾಣಿಕ ವ್ಯಕ್ತಿಯನ್ನು ನಿಜವಾದ ಸಮಸ್ಯೆಯನ್ನು ಎತ್ತುವುದಕ್ಕಾಗಿ ಕಷ್ಟಪಡುವುದನ್ನು ನೋಡುವುದು ಬೇಸರ ತಂದಿದೆ. ಅವರು ವಿನಮ್ರ ಹಿನ್ನೆಲೆಯಿಂದ ಬಂದವರು ಮತ್ತು ಅವರ ಇಬ್ಬರು ಸಹೋದರರು ಇನ್ನೂ ಕೆಲಸ ಮಾಡುತ್ತಿಲ್ಲ. ವಾಸ್ತವವಾಗಿ, ಮನೋಜ್ ತನ್ನ ಶಿಕ್ಷಣವನ್ನು ಮುಂದುವರಿಸಲು ದೈನಂದಿನ ಕೂಲಿಯಾಗಿ ಬಾಲಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದ" ಎಂದು ಹೇಳಿದ್ದಾರೆ.
ವಿಡಿಯೊ ವೈರಲ್ ಆದ ನಂತರ ಫಿರೋಜಾಬಾದ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮೆಸ್ನಲ್ಲಿ ನೀಡಲಾದ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ವೃತ್ತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ಆದೇಶ ಹೊರಡಿಸಲಾಗಿದೆ.