ಉತ್ತರ ಪ್ರದೇಶದಲ್ಲಿ ಸೋತ ಕೇಶವ್ ಪ್ರಸಾದ್ ಮೌರ್ಯಗೆ ಡಿಸಿಎಂ ಪಟ್ಟ ಕೊಟ್ಟಿದ್ದೇಕೆ ಬಿಜೆಪಿ?
ಲಕ್ನೋ, ಮಾರ್ಚ್ 26: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಿದ ಕೇಶವ್ ಪ್ರಸಾದ್ ಮೌರ್ಯಗೆ ರಾಜ್ಯ ಸರ್ಕಾರದಲ್ಲಿ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಆ ಮೂಲಕ ಎರಡನೇ ಬಾರಿ ರಾಜ್ಯದ ಡಿಸಿಎಂ ಹುದ್ದೆಗೆ ಅವರನ್ನು ಕೂರಿಸುವುದರ ಹಿಂದೆ ಬಿಜೆಪಿಯ ಜಾತಿ ಲೆಕ್ಕಾಚಾರ ಕೆಲಸ ಮಾಡಿದೆ.
ಕೌಶಂಬಿ ಜಿಲ್ಲೆಯ ಸಿರತು ವಿಧಾನಸಭೆ ಕ್ಷೇತ್ರದಲ್ಲಿ ಅಪ್ನಾ ದಳದ ಪಲ್ಲವಿ ಪಟೇಲ್ ವಿರುದ್ಧ ಕೇಶವ್ ಪ್ರಸಾದ್ ಮೌರ್ಯ ಸೋಲು ಕಂಡಿದ್ದರು. ಅದಾಗ್ಯೂ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಅವರಿಗೆ ಸ್ಥಾನ ಒದಗಿಸಲಾಗಿದೆ. ಇತರ ಹಿಂದುಳಿದ ವರ್ಗ(ಒಬಿಸಿ)ದ ನಾಯಕ ಎನ್ನುವ ಪಟ್ಟಿಯು ಡಿಸಿಎಂ ಪಟ್ಟವನ್ನು ನೀಡಿದೆ.
UP Cabinet Minister List 2022: ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 52 ಸಚಿವರ ಸಂಪೂರ್ಣ ಪಟ್ಟಿ
2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಶವ್ ಪ್ರಸಾದ್ ಮೌರ್ಯ ಅವರನ್ನು ದೆಹಲಿ ರಾಜಕಾರಣಕ್ಕೆ ಕರೆತರುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷವು ಆಲೋಚನೆ ನಡೆಸಿತ್ತು. ಆದರೆ ಉತ್ತರ ಪ್ರದೇಶದ ರಾಜ್ಯ ರಾಜಕಾರಣದ ಮಟ್ಟಿಗೆ ಅದು ಬಿಜೆಪಿಗೆ ಮುಳ್ಳಾಗುವ ಲಕ್ಷಣಗಳು ಗೋಚರಿಸಿದವು. ಇದಲ್ಲದೇ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಆಗಲು ಸ್ವತಃ ಕೇಶವ್ ಪ್ರಸಾದ್ ಮೌರ್ಯ ನಿರಾಕರಿಸಿದರು ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಸೋತಿರುವ ಕೇಶವ್ ಪ್ರಸಾದ್ ಮೌರ್ಯಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿರುವುದು ಏಕೆ?, ಡಿಸಿಎಂ ಪಟ್ಟ ನೀಡುವುದರ ಹಿಂದೆ ಬಿಜೆಪಿ ಹಾಕಿಕೊಂಡಿರುವ ಲೆಕ್ಕಾಚಾರಗಳೇನು?, 2024ರ ಲೋಕಸಭೆ ಚುನಾವಣೆಗೆ ಕೇಸರಿ ಪಾಳಯದಲ್ಲಿ ನಡೆಯುತ್ತಿರುವ ಬೆಳವಣಿಗೆಳೇನು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ಓದಿ.
ರಾಷ್ಟ್ರ ರಾಜಕಾರಣಕ್ಕೆ ಬರಲ್ಲ ಎಂದವರಿಗೆ ಡಿಸಿಎಂ ಪಟ್ಟ!
2024ರ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಹೊರತಾಗಿ ಸಮಾಜವಾದಿ ಪಕ್ಷ ಕೂಡಾ ಲೆಕ್ಕಾಚಾರ ಹಾಕಿಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿ ಸೋತ ಮೌರ್ಯರಿಗೆ ಡಿಸಿಎಂ ಹುದ್ದೆ ನೀಡುವುದಕ್ಕೂ ಕಾರಣವಿದೆ. ಯಾದವ್ ಮತಗಳ ಹೊರತಾಗಿ ಇತರೆ ಹಿಂದುಳಿದ ವರ್ಗಗಳನ್ನು ಸೆಳೆಯುವುದಕ್ಕೆ ಸಮಾಜವಾದಿ ಪಕ್ಷ ಆಕ್ರಮಣಕಾರಿ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವೋಟ್ ಬ್ಯಾಂಕ್ ರಾಜಕಾರಣ ಶುರು ಮಾಡಿದ್ದಾರೆ.
ರಾಜ್ಯದಲ್ಲಿ ಕಲ್ಯಾಣ್ ಸಿಂಗ್ ನಂತರದ ಕಾಲಮಾನದಲ್ಲಿ ಇದೇ ಕೇಶವ್ ಪ್ರಸಾದ್ ಮೌರ್ಯ ಪ್ರಮುಖ ಓಬಿಸಿ ನಾಯಕರು ಎನಿಸಿಕೊಂಡಿದ್ದಾರೆ. ಓಬಿಸಿ ಮತಗಳನ್ನು ಬಿಜೆಪಿ ತನ್ನದೇ ಬೊಕ್ಕಸದಲ್ಲಿ ಉಳಿಸಿಕೊಳ್ಳಲು ಮೌರ್ಯರನ್ನು ರಾಜ್ಯ ರಾಜಕಾರಣದಲ್ಲಿಯೇ ಆಕ್ಟಿವ್ ಆಗಿ ಇರಿಸಬೇಕಾಗಿದೆ. ಈ ದೂರದೃಷ್ಟಿಯನ್ನು ಇಟ್ಟುಕೊಂಡು ಯೋಗಿ ಸಂಪುಟದಲ್ಲಿ ಮೌರ್ಯರಿಗೆ ಸ್ಥಾನ ನೀಡಲಾಗಿದೆ.
ರಾಜ್ಯದಲ್ಲಿ ಹೇಗೆ ವರ್ಕೌಟ್ ಆಗುತ್ತೆ ಜಾತಿ ಲೆಕ್ಕ?
ಉತ್ತರ ಪ್ರದೇಶದಲ್ಲಿ ಯಾದವ್ ಪ್ರಮುಖ ಸಮುದಾಯವಾಗಿ ಗುರುತಿಸಿಕೊಂಡಿದೆ. ಇದರ ಹೊರತಾಗಿರುವ ಕಚ್ಚಿ, ಕುಶ್ವಂತ್, ಶಕ್ಯಾ, ಮೌರ್ಯ, ಸೈನಿ ಮತ್ತು ಮಾಲಿ ವರ್ಗಗಳ ಪ್ರಮುಖ ಪ್ರತಿನಿಧಿ ಆಗಿ ಕೇಶವ್ ಪ್ರಸಾದ್ ಮೌರ್ಯ ಹೆಸರು ಮಾಡಿದ್ದಾರೆ. ರಾಜ್ಯದಲ್ಲಿ 6.69ರಷ್ಟಿರುವ ಈ ವರ್ಗಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ 2001ರಲ್ಲಿ ಅಂದಿನ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಸರ್ಕಾರವು ಸಾಮಾಜಿಕ ನ್ಯಾಯ ಸಮಿತಿಯನ್ನು ರಚನೆ ಮಾಡಿತ್ತು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.43.13ರಷ್ಟು ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರೇ ಆಗಿದ್ದು, ಶೇ.54.05ರಷ್ಟು ಜನರು ಗ್ರಾಮೀಣ ಪ್ರದೇಶಕ್ಕೆ ಸೇರಿದ ಒಬಿಸಿ ಜನಾಂಗದವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಿಜೆಪಿ ವಿರುದ್ಧ ನಿಂತಿರುವ ಕುರ್ಮಿ ಸಮುದಾಯ
ರಾಜ್ಯದಲ್ಲಿ ಯಾದವ್ ಸಮುದಾಯದ ನಂತರದಲ್ಲಿ ಕುರ್ಮಿ ಎಂಬುದು ಅತಿದೊಡ್ಡ ಸಮುದಾಯವಾಗಿದೆ. ಸಾಮಾಜಿಕ ನ್ಯಾಯ ಸಮಿತಿ ನೀಡಿದ ವರದಿ ಪ್ರಕಾರ, ಕುರ್ಮಿ ರಾಜ್ಯದ ಅತಿದೊಡ್ಡ ಎರಡನೇ ಹಿಂದುಳಿದ ಸಮುದಾಯ ಎನಿಸಿದೆ. ಈ ಸಮುದಾಯದ ಮತದಾರರನ್ನು ಸೆಳೆಯುವಲ್ಲಿ ಭಾರತೀಯ ಜನತಾ ಪಕ್ಷವು ಸಂಪೂರ್ಣವಾಗಿ ಸೋತಿದೆ. ಕುರ್ಮಿಗಳು ಬಿಜೆಪಿ ಬದಲಿಗೆ ಸಮಾಜವಾದಿ ಪಕ್ಷದ ಕಡೆಗೆ ಮುಖ ಮಾಡಿದ್ದಾರೆ. ಇತ್ತೀಚಿಗೆ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿನ ಫಲಿತಾಂಶವು ಇದನ್ನು ಸ್ಪಷ್ಟವಾಗಿ ಹೇಳುತ್ತದೆ.
ರಾಜ್ಯದಲ್ಲಿ ಅತಿಹೆಚ್ಚು ಕುರ್ಮಿ ಸಮುದಾಯಗಳಿರುವ ಪ್ರದೇಶಗಳಲ್ಲಿ ಮೂವರು ಬಿಜೆಪಿ ಸಚಿವರು ಸೋಲು ಕಂಡಿದ್ದಾರೆ. ಹೀಗೆ ಸೋಲು ಕಂಡಿರುವ ಮೂವರು ಬಿಜೆಪಿ ಸಚಿವರಲ್ಲಿ ಈ ಕೇಶವ್ ಪ್ರಸಾದ್ ಮೌರ್ಯ ಕೂಡ ಒಬ್ಬರಾಗಿದ್ದಾರೆ.
ಸಿರತು ಕ್ಷೇತ್ರ ವ್ಯಾಪ್ತಿಯಲ್ಲಿ ಕುಂಠಿತವಾದ ಮೌರ್ಯ ಪ್ರಚಾರ
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿದ್ದರ ಹೊರತಾಗಿಯೂ ಕೇಶವ್ ಪ್ರಸಾದ್ ಮೌರ್ಯ ಅವರು ತಮ್ಮ ಸಿರತು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರದ ವೈಖರಿ ಕುಂಠಿತವಾಗಿತ್ತು ಎಂದು ತಿಳಿದು ಬಂದಿತ್ತು. ಇದರ ಜೊತೆ ಬಿಜೆಪಿ ತೊರೆಯುವ ಮೊದಲು ಸ್ವಾಮಿ ಪ್ರಸಾದ್ ಮೌರ್ಯ ಅವರು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಬಿಜೆಪಿಯಲ್ಲಿ "ಬೇಚಾರ (ಅಸಹಾಯಕ)" ಆಗಿದ್ದಾರೆ ಎಂಬ ಹಣೆಪಟ್ಟಿ ಅಂಟಿಸಿದರು. ಈ ಕ್ಷೇತ್ರದಲ್ಲಿ ಹೆಚ್ಚು ಅಸ್ತಿತ್ವ ಹೊಂದಿರುವ ಕುರ್ಮಿಗಳು ಪಲ್ಲವಿ ಪಟೇಲ್ಗೆ ಮತ ಹಾಕಿದ್ದಾರೆ. ಬಿಜೆಪಿ-ಅಪ್ನಾ ದಳ (ಸೋನೆಲಾಲ್) ಮೈತ್ರಿ ಮೌರ್ಯ ಪರವಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ಕೇಶವ ಪ್ರಸಾದ್ ಮೌರ್ಯ ಸೋಲು ಕಂಡರು ಎಂದು ಗೊತ್ತಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಹೇಗಿದೆ?
ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್, ಮಾರ್ಚ್ 25ರ ಶುಕ್ರವಾರ ಸಂಜೆ 4 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಜೊತೆಗೆ 52 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ 18 ಮಂದಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದ್ದರೆ, 14 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 20 ಕಿರಿಯ ಸಚಿವರಾಗಿದ್ದಾರೆ.
ರಾಜ್ಯ ಸಂಪುಟ ರಚನೆ ಸಂದರ್ಭದಲ್ಲಿ ಬಿಜೆಪಿ ಪಕ್ಕಾ ಜಾತಿ ಲೆಕ್ಕಾಚಾರವನ್ನು ಹಾಕಿದೆ. ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ, ಮುಸ್ಲಿಮರು ಮತ್ತು ಸಿಖ್ ಸಮುದಾಯದ ನಾಯಕರಿಗೂ ಸ್ಥಾನಗಳನ್ನು ನೀಡಲಾಗಿದೆ. ಯೋಗಿ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ಜಾತಿಗಳ ಆಧಾರದ ಮೇಲೆ ಅವಕಾಶಗಳನ್ನು ನೀಡಲಾಗಿದೆ. ಮುಖ್ಯಮಂತ್ರಿ ಸೇರಿದಂತೆ 21 ಮಂದಿ ಮೇಲ್ಜಾತಿ ಸಚಿವರಾಗಿದ್ದರೆ, ಉಳಿದಂತೆ 20 ಇತರೆ ಹಿಂದುಳಿದ ವರ್ಗಗಳಿಂದ (ಒಬಿಸಿ), 9 ದಲಿತರು, ಸಿಖ್-ಪಂಜಾಬಿ ಮತ್ತು ಮುಸ್ಲಿಂ ಸಮುದಾಯಗಳಿಂದ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ಯಾದವರಿಗೂ ಪ್ರಾಧಾನ್ಯತೆ ನೀಡಲಾಗಿದೆ.
ಯುಪಿಯಲ್ಲಿ ಬಿಜೆಪಿ ಬರೆದ ಹೊಸ ಇತಿಹಾಸ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು 37 ವರ್ಷಗಳ ನಂತರ ಹೊಸ ಇತಿಹಾಸ ಬರೆದಿದೆ. ಕಳೆದ ನಾಲ್ಕು ದಶಕಗಳಲ್ಲಿ ರಾಜ್ಯದಲ್ಲಿ ಸತತವಾಗಿ ಅಧಿಕಾರವನ್ನು ಗೆದ್ದ ಮೊದಲ ಪಕ್ಷವಾಗಿದೆ.
2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆದರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.