ದಲಿತ ಬಾಲಕಿಯರ ಕೊಲೆ ಪ್ರಕರಣ; ಸುಳಿವು ನೀಡಿದ ಸಿಗರೇಟ್ ತುಂಡು
ಉತ್ತರ ಪ್ರದೇಶ, ಫೆಬ್ರವರಿ 20: ಎರಡು ದಿನಗಳ ಹಿಂದಷ್ಟೇ ಮೇವು ತರಲು ಹೋದ ಮೂವರು ಬಾಲಕಿಯರಲ್ಲಿ ಇಬ್ಬರು ಹೊಲದಲ್ಲಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಉನ್ನಾವೋದ ಬಾಬುಹಾರ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು. ಮತ್ತೊಬ್ಬ ಬಾಲಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದು ಈ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಮೃತದೇಹಗಳಲ್ಲಿ ವಿಷದ ಅಂಶವಿದ್ದುದಾಗಿ ವೈದ್ಯರು ತಿಳಿಸಿದ್ದರು.
ಆದರೆ ವಿಷ ಹೇಗೆ ಬಾಲಕಿಯರಲ್ಲಿ ಸೇರಿತು, ಯಾರು ಕೃತ್ಯ ಎಸಗಿದ್ದಾರೆ? ಇದು ಕೊಲೆಯೇ ಆತ್ಮಹತ್ಯೆಯೇ ಎಂಬ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಪ್ರಕರಣ ನಡೆದ ಒಂದೇ ದಿನದಲ್ಲಿ ಪೊಲೀಸರು ಸಾವಿನ ಹಿಂದಿನ ರಹಸ್ಯ ಬೇಧಿಸಿದ್ದಾರೆ. ಆರೋಪಿ ವಿನಯ್ ಅಲಿಯಾಸ್ ಲಂಬು (18) ಎಂಬುವನನ್ನು ಬಂಧಿಸಿದ್ದಾರೆ. ತಾನೇ ವಿಷ ಹಾಕಿ ಕೊಂದಿದ್ದು ಎಂದು ಆತ ಒಪ್ಪಿಕೊಂಡಿದ್ದಾನೆ. ಆದರೆ ಈ ಕೊಲೆಗೆ ಕಾರಣವೇನು? ಮುಂದೆ ಓದಿ...
ಉನ್ನಾವೋ; ಮೇವು ತರಲು ಹೋದ ದಲಿತ ಬಾಲಕಿಯರ ಅನುಮಾನಾಸ್ಪದ ಸಾವು
ಹೊಲದಲ್ಲಿ ಸತ್ತುಬಿದ್ದ ಬಾಲಕಿಯರು
13, 16 ಹಾಗೂ 17 ವಯಸ್ಸಿನ ಮೂವರು ಅಕ್ಕ ತಂಗಿಯರು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಾನುವಾರುಗಳಿಗೆ ಮೇವು ತರಲು ಹೊಲದ ಬಳಿ ಹೋಗಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಯಾರೂ ಮರಳಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯವರು ಹೋಗಿ ನೋಡಿದಾಗ, ಮೂವರು ಹೊಲದಲ್ಲಿ ಬಿದ್ದಿದ್ದರು. ಈ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ನೀರಿನಲ್ಲಿ ಕ್ರಿಮಿನಾಶಕ ಬೆರೆಸಿದ ಆರೋಪಿ
ಆದರೆ ಇವರ ಮರಣೋತ್ತರ ಪರೀಕ್ಷೆಯಲ್ಲಿ, ಇವರ ದೇಹದಲ್ಲಿ ವಿಷ ಸೇರಿಕೊಂಡಿದ್ದು ತಿಳಿದುಬಂದಿತ್ತು. ನಂತರ ಸಾವಿನ ಕುರಿತು ಅನುಮಾನಗಳು ವ್ಯಕ್ತಗೊಂಡಿದ್ದವು. ಇದೀಗ ವಿಷ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಅಕ್ಕ ತಂಗಿಯರಲ್ಲಿ ಒಬ್ಬಳನ್ನು ವಿನಯ್ ಪ್ರೀತಿಸುತ್ತಿದ್ದು, ಆಕೆ ತನ್ನ ಪ್ರೀತಿ ನಿರಾಕರಿಸಿದ ಕಾರಣ ಕೊಲೆ ಮಾಡಲು ನೀರಿನಲ್ಲಿ ತಾನೇ ವಿಷ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದು ಪೂರ್ವ ಯೋಜಿತ ಕೊಲೆ
ಆತ ಪ್ರೀತಿಸುತ್ತಿದ್ದ ಬಾಲಕಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದು, ಆಕೆಯ ತಂಗಿಯರು ಸಾವನ್ನಪ್ಪಿದ್ದಾರೆ. ವಿನಯ್ ಪಕ್ಕದ ಊರಿನ ಯುವಕನಾಗಿದ್ದು, ಲಾಕ್ ಡೌನ್ ಸಮಯ ಈ ಮೂವರು ಅಕ್ಕ ತಂಗಿಯರಿಗೆ ಸ್ನೇಹಿತನಾಗಿದ್ದ. ಇವರ ಹೊಲಗಳು ಅಕ್ಕಪಕ್ಕವೇ ಇತ್ತು. ಆ ಮೂವರಲ್ಲಿ ಒಬ್ಬ ಬಾಲಕಿಯನ್ನು ಪ್ರೀತಿಸುವುದಾಗಿ ಈತ ತಿಳಿಸಿದ್ದು, ಇದಕ್ಕೆ ಆಕೆ ನಿರಾಕರಿಸಿದ್ದಳು. ಹೀಗಾಗಿ ಅವಳನ್ನು ಕೊಲ್ಲಲು ಕ್ರಿಮಿನಾಶಕ ತಂದಿಟ್ಟುಕೊಂಡಿದ್ದ.
ಸುಳಿವು ನೀಡಿದ ಸಿಗರೇಟ್ ತುಂಡು
ನೀರಿನಲ್ಲಿ ಕ್ರಿಮಿನಾಶಕ ಬೆರೆಸಿ ಕೆಲವು ತಿಂಡಿಗಳೊಂದಿಗೆ ಹೊಲಕ್ಕೆ ಹೋಗಿದ್ದು, ಮಾಮೂಲಿನಂತೆ ಅಕ್ಕತಂಗಿಯರನ್ನು ಭೇಟಿ ಮಾಡಿದ್ದಾನೆ. ಆಕೆಗೆ ಕುಡಿಯಲು ನೀರು ಕೊಟ್ಟಿದ್ದಾನೆ. ಆದರೆ ಮೂವರೂ ನೀರು ಕುಡಿದಿದ್ದಾರೆ. ತಕ್ಷಣವೇ ಎಲ್ಲರೂ ಬಿದ್ದು ಹೊರಳಾಡುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆ ಬಾಲಕಿಯರ ಮೃತದೇಹಗಳು ದೊರೆತ ಸ್ಥಳದಲ್ಲೇ ಖಾಲಿ ಬಾಟಲಿ ಹಾಗೂ ಸಿಗರೇಟ್ ತುಂಡು ಬಿದ್ದುದನ್ನು ಪೊಲೀಸರು ಗಮನಿಸಿದ್ದರು. ಈ ಜಾಡು ಹಿಡಿದು ಪೊಲೀಸರು ವಿನಯ್ ಹುಡುಕಾಡಲು ಆರಂಭಿಸಿದ್ದರು. ಇದೀಗ ತಾನೇ ಕೊಲೆ ಮಾಡಿರುವುದಾಗಿ ವಿನಯ್ ಒಪ್ಪಿಕೊಂಡಿದ್ದಾನೆ.