ಉತ್ತರ ಪ್ರದೇಶ:ಎಸ್ಪಿ ಸೇರಿದ ಬಿಜೆಪಿ, ಬಿಎಸ್ಪಿಯ ಇಬ್ಬರು ಶಾಸಕರು
ಲಕ್ನೋ, ಡಿಸೆಂಬರ್ 13:ಉತ್ತರ ಪ್ರದೇಶದದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿನಿಲಿನಲ್ಲಿಯೇ ಬಿಜೆಪಿ ಹಾಗೂ ಬಿಎಸ್ಪಿಗೆ ಆಘಾತ ಎದುರಾಗಿದೆ. ಇಬ್ಬರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಎಸ್ಪಿಯಿಂದ ಇತ್ತೀಚೆಗಷ್ಟೇ ಉಚ್ಚಾಟಿತರಾಗಿದ್ದ ಚಿಲ್ಲುಪುರ್ ಕ್ಷೇತ್ರದ ಶಾಸಕ ವಿನಯ್ ಶಂಕರ್ ತಿವಾರಿ ಮತ್ತು ಬಿಜೆಪಿ ತೊರೆದ ಖಲೀಲಾಬಾದ್ ಶಾಸಕ ದಿಗ್ವಿಜಯ್ ನಾರಾಯಣ್ ಎಸ್ಪಿ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಬ್ಬರನ್ನೂ ಸಮಾಜವಾದಿ ಕಚೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾಗಿರುವ ನೆಪ ನೀಡಿ ಕಳೆದ ಸೋಮವಾರವಷ್ಟೇ ಬಿಎಸ್ಪಿಯು ಶಾಸಕ ವಿನಯ್ ಶಂಕರ್ ತಿವಾರಿ, ಅವರ ಸಹೋದರ, ಮಾಜಿ ಸಂಸದ ಕುಶಾಲ್ ತಿವಾರಿ ಮತ್ತು ಸಂಬಂಧಿ ಪಾಂಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ಬ್ರಿಟಿಷರ ಒಡೆದು ಆಳುವ ನೀತಿಯ ಮಾದರಿಯಲ್ಲೇ ಜನರನ್ನು ಹೆದರಿಸಿ ಮತ್ತು ಕೊಂದು ಬಿಜೆಪಿ ಆಡಳಿತ ನಡೆಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ' ಎಂದರು.

ಅವರಿಬ್ಬರ ಜೊತೆ, ಉತ್ತರ ಪ್ರದೇಶ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಶಂಕರ್ ಪಾಂಡೆ ಕೂಡಾ ಬಿಎಸ್ಪಿ ತೊರೆದು ಎಸ್ಪಿ ಸೇರಿದರು. ಈ ಎಲ್ಲಾ ಪ್ರಮುಖ ಮುಖಂಡರ ಜೊತೆ, ಬ್ರಾಹ್ಮಣ ಸಮುದಾಯದ ಹಲವಾರು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಎಸ್ಪಿ ಸೇರಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿವೆ. ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶ ವಿಧಾಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿವೆ.
ಟೈಮ್ಸ್ ನೌ-ಪೋಲ್ ಸ್ಟಾರ್ಟ್ ಚುನಾವಣಾ ಪೂರ್ವ ಸಮೀಕ್ಷೆ ನಡೆದಿದ್ದು ಅಚ್ಚರಿಯ ಅಂಕಿ-ಅಂಶಗಳು ಹೊರಬಿದ್ದಿವೆ.
403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ 239-245 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುತ್ತಿದೆ ಟೈಮ್ಸ್ ನೌ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ.
ಇನ್ನು ಬಿಜೆಪಿಗೆ ಪ್ರತಿಸ್ಪರ್ಧಿಯಾಗಿರುವ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ 119-125 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ, ಬಿಎಸ್ ಪಿ 28-32 ಸ್ಥಾನಗಳಲ್ಲಿ ಮಾತ್ರ ತನ್ನ ಶಾಸಕರ ಪ್ರಾತಿನಿಧ್ಯದ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಭವಿಷ್ಯ ನುಡಿದಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನ ಪುನರುಜ್ಜೀವನಕ್ಕೆ ತಮ್ಮ ಶತಪ್ರಯತ್ನದ ನಡುವೆಯೂ ಪ್ರಿಯಾಂಕ ವಾಧ್ರ ರಾಜ್ಯದ ಜನಮನ ಗೆಲ್ಲುವುದರಲ್ಲಿ ವಿಫಲರಾಗಲಿದ್ದಾರೆ ಎಂದೂ ಸಮೀಕ್ಷೆ ಹೇಳಿದೆ.
ಬುಂದೇಲ್ ಖಂಡ್ ಪ್ರಾಂತ್ಯದಲ್ಲಿ 19 ಸ್ಥಾನಗಳಿದ್ದು, ಬಿಜೆಪಿ 15-17 ಸ್ಥಾನಗಳನ್ನು ಗೆಲ್ಲಲಿದೆ. ಎಸ್ ಪಿ- 0-1 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದರೆ ಬಿಎಸ್ ಪಿ 2-5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ, ಕಾಂಗ್ರೆಸ್ ಗೆ 1-2 ಸ್ಥಾನಗಳು ಸಿಗಬಹುದು.
ದೋಬ್ ಪ್ರದೇಶದಲ್ಲಿ 71 ಸ್ಥಾನಗಳಿದ್ದು, ಬಿಜೆಪಿ ಇಲ್ಲೂ ಉತ್ತಮ ಸಾಧನೆ ಮಾಡುವ ಸಾಧ್ಯತೆಗಳಿವೆ. ಆಡಳಿತಾರೂಢ ಪಕ್ಷಕ್ಕೆ ಈ ಪ್ರದೇಶದಲ್ಲಿ 37-40 ಸ್ಥಾನಗಳು ಸಿಗುವುದಿದ್ದರೆ, ಸಮಾಜವಾದಿ ಪಕ್ಷ 26-28 ಸ್ಥಾನಗಳನ್ನು ಗೆಲ್ಲಲಿದ್ದು, ಬಿಎಸ್ ಪಿ 4-6 ಸ್ಥಾನಗಳಲ್ಲಿ ಕಾಂಗ್ರೆಸ್ 0-2 ಸ್ಥಾನಗಳಲ್ಲಿ ಗೆಲ್ಲು ಸಾಧ್ಯತೆಗಳಿವೆ.
ಅಖಿಲೇಶ್ ಯಾದವ್ ಅವರು ಚುನಾವಣಾ ರ್ಯಾಲಿಯಲ್ಲಿ ಜಿನ್ನಾ ಪರ ಹೇಳಿಕೆ ನೀಡಿದ್ದಕ್ಕಿಂತಲೂ ಮುನ್ನ ಈ ಸಮೀಕ್ಷೆ ನಡೆದಿದ್ದು, ಈ ಹೇಳಿಕೆ ಬಳಿಕ ಅಖಿಲೇಶ್ ಯಾದವ್ ವಿರುದ್ಧದ ಅಭಿಪ್ರಾಯ ಸೃಷ್ಟಿಯಾಗಿದ್ದು, ಪರಿಣಾಮಗಳು ಮತ್ತಷ್ಟು ನಾಟಕೀಯವಾಗಿ ಬದಲಾಗಬಹುದು ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
92 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪೂರ್ವಾಂಚಲದಲ್ಲಿ ಬಿಜೆಪಿ 47-50 ಕ್ಷೇತ್ರದಲ್ಲಿ ಗೆದ್ದರೆ, ಎಸ್ ಪಿ 31-35 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿ 40-42 ಸ್ಥಾನಗಳನ್ನು ಎಸ್ ಪಿ 21-24 ಸ್ಥಾನಗಳನ್ನು, ಬಿಎಸ್ ಪಿ 2-3 ಸ್ಥಾನ ಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುತ್ತಿದೆ ಟೈಮ್ಸ್ ನೌ ಸಮೀಕ್ಷೆ.
2017 ರಲ್ಲಿ ಬಿಜೆಪಿ 403 ವಿಧಾನಸಭಾ ಕ್ಷೇತ್ರಗಳ ಪೈಕಿ 312 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಪಡೆದಿತ್ತು. ಸಿಎಂ ಯೋಗಿ ಆದಿತ್ಯನಾಥ್ ಅವರು ಈಗ ಅವಧಿಯನ್ನು ಪೂರ್ಣಗೊಳಿಸುತ್ತಿದ್ದಾರೆ. 2017 ರ ಚುನಾವಣೆಯಲ್ಲಿ ಬಿಜೆಪಿ ಶೇ.40 ರಷ್ಟು ಮತಗಳನ್ನು ಪಡೆದಿತ್ತು.












Click it and Unblock the Notifications