ಸಿಎಂ ಯೋಗಿರದ್ದು ಠಾಕೂರ್ ವಾದಿ ಸರ್ಕಾರ ಎಂದ ಸಂಸದರ ವಿರುದ್ಧ ಕೇಸ್
ಲಕ್ನೋ, ಸಪ್ಟೆಂಬರ್.06: ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಜಾತಿ ಆಧಾರಿತ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗುತ್ತಿದೆ. ಈ ಹಿನ್ನೆಲೆ ದೂರವಾಣಿ ಮೂಲಕ ಆಪ್ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದ್ದು, ಇದರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಜಾತಿವಾದದ ಆಡಳಿತ ನಡೆಸುತ್ತಿದೆಯಾ ಎಂದು ಪ್ರಶ್ನಿಸಲಾಗಿತ್ತು.
ಆಮ್ ಆದ್ಮಿ ಪಕ್ಷ ನಡೆಸಿದ ದೂರವಾಣಿ ಸಮೀಕ್ಷೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ಜಾತಿ ಆಧಾರಿತ ಆಡಳಿತ ನೀಡುತ್ತಿದೆ ಎಂದು ಶೇ.63ರಷ್ಟು ಜನರು ನಂಬಿದ್ದಾರೆ. ಠಾಕೂರ್ ಸಮುದಾಯದ ಪ್ರಾಬಲ್ಯಕ್ಕಾಗಿ ಹೆಚ್ಚಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಯೋಗಿ ಆದಿತ್ಯನಾಥ್ ಕೂಡಾ ಇದೇ ಠಾಕೂರ್ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.

ಜಾತಿವಾದದ ಆಡಳಿತ ನಿರಾಕರಿಸಿದವರೆಷ್ಟು?:
ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿರುವ ಆಪ್ ಪಕ್ಷ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಈ ಸಮೀಕ್ಷೆ ನಡೆಸಿದರು. ಆಪ್ ಸಮೀಕ್ಷೆಯಲ್ಲಿ ಶೇ.63.ರಷ್ಟು ಜನರು ಯೋಗಿ ಆದಿತ್ಯನಾಥ್ ಸರ್ಕಾರವು ಜಾತಿವಾದದ ಮೇಲೆ ನಡೆಯುತ್ತಿದೆ ಎಂದು ನಂಬಿದ್ದಾರೆ. ಶೇ.28ರಷ್ಟು ಜನರು ಈ ಅಭಿಪ್ರಾಯವನ್ನು ನಿರಾಕರಿಸಿದ್ದಾರೆ. ಉಳಿದ ಶೇ.9ರಷ್ಟು ಜನರು ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಮೀಕ್ಷಾ ವರದಿಗೂ ಮೊದಲೇ ಎಫ್ಐಆರ್ ದಾಖಲು:
ಕಳೆದ ಮಂಗಳವಾರ ದೂರವಾಣಿ ಮೂಲಕ ಆಮ್ ಆದ್ಮಿ ಪಕ್ಷವು ನಡೆಸಿದ ಸಮೀಕ್ಷೆಯ ವರದಿ ಹೊರ ಬರುವುದಕ್ಕೂ ಮೊದಲೇ ಲಕ್ನೋ ಪೊಲೀಸರು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ 501, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2000ರ ಪ್ರಕಾರ, ತಾಂತ್ರಿಕ ಸಂಪರ್ಕದ ದುರುಪಯೋಗ ಆರೋಪದಡಿ ಎಫ್ಐಆರ್ ದಾಖಲಿಸಿದ್ದಾರೆ. "ಯೋಗಿಯ ಆಡಳಿತದಲ್ಲಿ ದಲಿತರನ್ನು ನಿರಂತರವಾಗಿ ಕಿರುಕುಳ ಮಾಡಲಾಗುತ್ತಿದೆ. ಬ್ರಾಹ್ಮಣರೂ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಸಮಾಜದ ಎಲ್ಲಾ ವಂಚಿತ ವರ್ಗಗಳು ನಿರಂತರ ಅನಾರೋಗ್ಯವನ್ನು ಎದುರಿಸುತ್ತಿವೆ "ಎಂದು ಸಿಂಗ್ ಹೇಳಿದ್ದರು.
"ನಾನು ಅಥವಾ ಆಮ್ ಆದ್ಮಿ ಪಕ್ಷದ ಆರೋಪವು ನಿಜವಲ್ಲ ಎಂದೇ ಭಾವಿಸೋಣ. ಆದರೆ ಸ್ವತಃ ಬಿಜೆಪಿ ಶಾಸಕ ರಾಧಾ ಮೋಹನ್ದಾಸ್ ಅಗರ್ ವಾಲ್ ಕೂಡ ಯೋಗಿ ಸರ್ಕಾರವು ಠಾಕೂರ್ ವಾದಿ ಸರ್ಕಾರ ಎಂದು ದೂಷಿಸಿದ್ದಾರೆ. ಯುಪಿಯಲ್ಲಿ ಹಲವು ಬ್ರಾಹ್ಮಣರು ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಶಾಸಕ ದೇವ್ಮಣಿ ದ್ವಿವೇದಿ ಆರೋಪಿಸಿದ್ದಾರಲ್ಲವೇ", ಎಂದು ಸಂಜಯ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications