ತಾಂಡವ್ ಕೇಸ್: ಬಂಧನ ಭೀತಿಯಿಂದ ಅಪರ್ಣಾ ಪುರೋಹಿತ್ ಬಚಾವ್
ಅಲಹಾಬಾದ್, ಫೆಬ್ರವರಿ 05: ಸೈಫ್ ಅಲಿ ಖಾನ್ ಅಭಿನಯದ ತಾಂಡವ್ ವೆಬ್ ಸೀರಿಸ್ ತಂಡಕ್ಕೆ ಕಾನೂನು ಸಮರದಲ್ಲಿ ಬಂಧನದಿಂದ ರಕ್ಷಣೆ ಕೋರಿದ್ದ ಅಮೆಜಾನ್ ಪ್ರೈಮ್ ಹಿರಿಯ ಅಧಿಕಾರಿ ಅಪರ್ಣಾ ಪುರೋಹಿತ್ಗೆ ಶುಭ ಸುದ್ದಿ ಸಿಕ್ಕಿದೆ. ಅಪರ್ಣಾ ಅವರ ಬಂಧನಕ್ಕೆ ತಡೆ ನೀಡಿರುವ ಅಲಾಹಾಬಾದ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗಿರುವ ''ತಾಂಡವ್'' ವೆಬ್ ಸೀರಿಸ್ಗೆ ಸಂಬಂಧಿಸಿದಂತೆ ಅಮೆಜಾನ್ ಪ್ರೈಮ್ನ ಕಾರ್ಯಕ್ರಮಗಳ ಭಾರತ ವಿಭಾಗದ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದ್ದರು.
ಬಂಧನ ಭೀತಿಯಲ್ಲಿ ಸೈಫ್ ಅಲಿಖಾನ್ -ತಾಂಡವ್ ಚಿತ್ರ ತಂಡ
ಆದರೆ, ಅಪರ್ಣಾರನ್ನು ಬಂಧಿಸದಂತೆ ಅಲಾಹಾಬಾದ್ ಹೈಕೋರ್ಟ್ ಸೂಚಿಸಿದ್ದು, ಮುಂದಿನ ಆದೇಶದ ತನಕ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ನ್ಯಾಯಮೂರ್ತಿ ಸಿದ್ಧಾರ್ಥ್ ಸೂಚಿಸಿದ್ದಾರೆ. ಜೊತೆಗೆ ಈ ಕುರಿತಂತೆ ಆದೇಶವನ್ನು ಕಾಯ್ದಿರಿಸಿದ್ದಾರೆ.
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ
ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ 'ತಾಂಡವ್' ವೆಬ್ ಸರಣಿ ಮೇಲೆ ಈಗಾಗಲೇ ದೇಶದ ವಿವಿಧೆಡೆ ದೂರು ದಾಖಲಾಗಿದ್ದು, ವಿವಿಧ ಕೋರ್ಟ್ ಗಳಲ್ಲಿ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಾಂಡವ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಜಾಮೀನು ಅರ್ಜಿಯನ್ನು ಆಯಾ ರಾಜ್ಯಗಳ ಹೈಕೋರ್ಟ್ ನಲ್ಲಿ ಸಲ್ಲಿಸುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಅಪರ್ಣಾ ಸೇರಿದಂತೆ ತಾಂಡವ್ ತಂಡಕ್ಕೆ ಭೀತಿ
ಅಮೆಜಾನ್ ಪ್ರೈ ವಿಡಿಯೋದ ಅಪರ್ಣಾ ಪುರೋಹಿತ್, ತಾಂಡವ್ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರಾನ್ ಅಖ್ತರ್, ನಟ ಜೀಶಾನ್ ಅಯುಬ್, ಸೈಫ್ ಅಲಿ ಖಾನ್ ವಿರುದ್ಧ ದೂರು ದಾಖಲಿಸಲಾಗಿದೆ. ಹಿಂದು ದೇವರುಗಳ ವಿರುದ್ಧ ಅವಹೇಳನಕಾರಿ ಸಂಭಾಷಣೆಗಳಿವೆ. ಶಿವನನ್ನು ಕೆಟ್ಟ ಪದಗಳಿಂದ ನಿಂದಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸನ್ನಿವೇಶ, ದೃಶ್ಯ ತೆಗೆದು ಹಾಕಬೇಕು ಹಾಗೂ ಕ್ಷಮೆಯಾಚಿಸಬೇಕು ಎಂದು ದೂರು ದಾಖಲಿಸಲಾಗಿತ್ತು. ಕ್ಷಮೆಯಾಚಿಸಿದ ಚಿತ್ರ ತಂಡ ಎರಡು ದೃಶ್ಯಗಳಿಗೆ ಕತ್ತರಿ ಹಾಕಿದೆ. ಶಿವ ಪಾತ್ರಧಾರಿಯಾಗಿ ಜೀಶಾನ್ ಕಾಣಿಸಿಕೊಂಡಿದ್ದು ಹಾಗೂ ದಲಿತ ಮುಖಂಡರಿಗೆ ಅವಮಾನ ದೃಶ್ಯ ಡಿಲೀಟ್ ಮಾಡಲಾಗಿದೆ.
ಯಾವ ಯಾವ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್
ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಆರೋಪದ ಮೇಲೆ ಐಪಿಸಿ ಸೆಕ್ಷನ್ 295 ಎ, 153ಎ, 501, 501 (1)(B) ಹಾಗೂ 298 ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ಗಳಾದ 66 ಮತ್ತು 67ರ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬಹುತೇಕ ಇದೇ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಹಂತದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ.
ಬೆಂಗಳೂರಿನಲ್ಲೂ ತಾಂಡವ್ ವಿರುದ್ಧ ಪ್ರಕರಣ
ಸಾಮಾಜಿಕ ಕಾರ್ಯಕರ್ತ ಕಿರಣ್ ಆರಾಧ್ಯ ಎಂಬುವರು ಬೆಂಗಳೂರಿನ ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ತಾಂಡವ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಾಂಡವ್ ಚಿತ್ರ ನಿರ್ಮಾಣ ತಂಡದ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ಈ ಪ್ರಕರಣ ತನಿಖೆಯ ಮುಂದಿನ ನಡೆ ಇಡುವುದಕ್ಕೂ ಮುನ್ನ ಕಾನೂನು ತಜ್ಞರ ಸಲಹೆಯನ್ನು ತನಿಖಾಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.