ಅಯೋಧ್ಯೆಗೆ ಸೇನೆ ಕಳುಹಿಸಿ: ಸುಪ್ರೀಂಕೋರ್ಟ್ಗೆ ಅಖಿಲೇಶ್ ಯಾದವ್ ಮನವಿ
ಲಕ್ನೋ, ನವೆಂಬರ್ 23: ಅಯೋಧ್ಯಾದಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯಬಿದ್ದರೆ ಸೇನೆಯನ್ನು ಕಳುಹಿಸುವಂತೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಅಖಿಲೇಶ್ ಯಾದವ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಆಗಲೀ ಅಥವಾ ಸಂವಿಧಾನದಲ್ಲಾಗಲೀ ಬಿಜೆಪಿಗೆ ನಂಬಿಕೆ ಇಲ್ಲ. ಬಿಜೆಪಿ ಯಾವ ಹಂತಕ್ಕೂ ಹೋಗಲು ಸಿದ್ಧ. ಉತ್ತರ ಪ್ರದೇಶದಲ್ಲಿ, ಅದರಲ್ಲಿಯೂ ಮುಖ್ಯವಾಗಿ ಅಯೋಧ್ಯಾದಲ್ಲಿ ಇರುವ ವಾತಾವರಣವನ್ನು ನೋಡಿದಾಗ ಅಗತ್ಯಬಿದ್ದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಲು ಸುಪ್ರೀಂಕೋರ್ಟ್ ಇದನ್ನು ಗಮನದಲ್ಲಿರಿಸಿಕೊಂಡು ಸೇನೆಯನ್ನು ರವಾನಿಸಬೇಕಾಗುತ್ತದೆ ಎಂದು ಅಖಿಲೇಶ್ ಹೇಳಿದ್ದಾರೆ.
ವಿವಾದಾತ್ಮಕ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಕಾರ್ಯಕರ್ತರು, ಸನ್ಯಾಸಿಗಳು ಅಯೋಧ್ಯಾದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿಕೊಳ್ಳಲಿದ್ದಾರೆ.

ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಎರಡು ದಿನಗಳ ಭೇಟಿಗಾಗಿ ಅಯೋಧ್ಯಾಕ್ಕೆ ತೆರಳುತ್ತಿದ್ದು, ಇದೇ ವೇಳೆ ಹಿಂದೂ ಸಂಘಟನೆಗಳ ಸಭೆಯೂ ನಡೆಯುತ್ತಿದೆ.
ರಾಮ ಮಂದಿರ ವಿವಾದದ ಕುರಿತು ಸುಪ್ರೀಂಕೋರ್ಟ್ ಆದಷ್ಟು ಬೇಗನೆ ತೀರ್ಪು ನೀಡಬೇಕು ಎಂದು ಆಗ್ರಹಿಸಿ ಹೆಚ್ಚುತ್ತಿರುವ ಬೇಡಿಕೆಯ ಜತೆಗೆ, ನಿರ್ಮಾಣ ಕಾರ್ಯ ಆರಂಭಿಸಲು ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಒತ್ತಾಯಗಳೂ ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಅಖಿಲೇಶ್ ಯಾದವ್ ಹೇಳಿಕೆ ಮಹತ್ವ ಪಡೆದಿದೆ.












Click it and Unblock the Notifications