ಮದರಸಾಗಳು ಗೋಡ್ಸೆ, ಪ್ರಗ್ಯಾಸಿಂಗ್ ಅಂತವರನ್ನು ರೂಪಿಸುವುದಿಲ್ಲ: ಅಜಂ ಖಾನ್
ರಾಂಪುರ, ಜೂನ್ 12: ವಿವಾದಕಾರಿ ಹೇಳಿಕೆ ನೀಡುವುದರಲ್ಲಿ ಸೈ ಎನಿಸಿಕೊಂಡಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್, ಮದರಸಾಗಳು ನಾಥೂರಾಂ ಗೋಡ್ಸೆ ಅಥವಾ ಪ್ರಗ್ಯಾ ಸಿಂಗ್ ಠಾಕೂರ್ ಅಂತವರನ್ನು ಹುಟ್ಟುಹಾಕುವುದಿಲ್ಲ ಎನ್ನುವ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಮದರಸಾಗಳನ್ನು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ತರುವ ಪ್ರಧಾನಿ ಮೋದಿಯ ನೂತನ ಯೋಜನೆಯನ್ನು ಪ್ರಸ್ತಾವಿಸುತ್ತಾ ಅಜಂ ಖಾನ್ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಮದರಸಾಗಳು, ಗೋಡ್ಸೆಯಂತಹ ಮನಸ್ಥಿತಿಯವರನ್ನು ಅಥವಾ ಪ್ರಗ್ಯಾಸಿಂಗ್ ರೀತಿಯ ವ್ಯಕ್ತಿತ್ವದವರನ್ನು ಬೆಳೆಸುವುದಿಲ್ಲ ಎಂದು ಅಜಂ ಖಾನ್ ಹೇಳಿದ್ದಾರೆ.
ನಮ್ಮ ಮದರಸಾ ಬಗ್ಗೆ ಆಲೋಚಿಸುವ ಮೊದಲು, ನಾಥೂರಾಂ ಗೋಡ್ಸೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಶತ್ರು ಎಂದು ಘೋಷಿಸಿ ಎಂದು ಮೋದಿಗೆ ಅಜಂ ಖಾನ್ ಸಲಹೆಯನ್ನು ನೀಡಿದ್ದಾರೆ.

ಉಗ್ರ ಚಟುವಟಿಕೆಯಲ್ಲಿ ತೊಡಗಿರುವವರನ್ನು ರಕ್ಷಿಸುವ ಕೆಲಸವನ್ನು ಮಾಡಬಾರದು. 2008ರ ಮಾಲೇಗಾಂವ್ ಸ್ಫೋಟದ ಘಟನೆಯ ಆರೋಪಿಯಾಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಗೆ ಬಿಜೆಪಿ ಟಿಕೆಟ್ ನೀಡಿತ್ತು, ಅವರು ಚುನಾವಣೆಯಲ್ಲಿ ಗೆದ್ದಿದ್ದರು. ತಮ್ಮ ಚುನಾವಣಾ ಭಾಷಣದುದ್ದಕ್ಕೂ ಅವರು ಗೋಡ್ಸೆಯನ್ನು ಸಮರ್ಥಿಸಿಕೊಂಡರು, ಇಂತವರು ದೇಶಭಕ್ತರೇ ಎಂದು ಅಜಂ ಖಾನ್ ಪ್ರಶ್ನಿಸಿದ್ದಾರೆ.
ಮದರಸಾಗಳಲ್ಲಿ ಧರ್ಮಬೋಧನೆಯ ಕೆಲಸವೂ ನಡೆಯುತ್ತದೆ, ಜೊತೆಗೆ, ಇಂಗ್ಲಿಷ್, ಹಿಂದಿ, ಗಣಿತವನ್ನೂ ಕಲಿಸಿಕೊಡಲಾಗುತ್ತದೆ ಎಂದು ಅಜಂ ಖಾನ್ ಹೇಳಿದ್ದಾರೆ.
ಮದರಸಾಗಳ ಗುಣಮಟ್ಟವನ್ನು ಸುಧಾರಿಸುವುದು ಮೋದಿ ಸರಕಾರದ ಉದ್ದೇಶವಾದರೆ, ಇವುಗಳಿಗಾಗಿ ಕಟ್ಟಡಗಳನ್ನು ಕಟ್ಟಿಸಿ ಕೊಡಲಿ, ಪೀಠೋಪಕರಣಗಳ ವ್ಯವಸ್ಥೆಯನ್ನು ಮಾಡಲಿ, ಮಧ್ಯಾಹ್ನದ ಊಟವನ್ನು ನೀಡಲಿ ಎಂದು ಅಜಂಖಾನ್ ಹೇಳಿದ್ದಾರೆ.
ಹೋದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ ಅಜಂಖಾನ್, ಬಿಜೆಪಿಯ ಜಯಪ್ರದಾ ವಿರುದ್ದ 109,997 ಮತಗಳ ಅಂತರದಿಂದ, ರಾಂಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. (ಚಿತ್ರ: ANI)












Click it and Unblock the Notifications