ಲೋಕಸಭೆ 2019 : ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಬಿಜೆಪಿಗೆ ಮುಳುವಾಗುವುದೆ?

ನವದೆಹಲಿ, ಜನವರಿ 12 : ಐದು ವರ್ಷಗಳ ಹಿಂದೆ 2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಜಯ ಗಳಿಸಿದ್ದ ಭಾರತೀಯ ಜನತಾ ಪಕ್ಷದ ಮೇಲೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಘಟಬಂಧನ ಯಾವ ರೀತಿ ಪರಿಣಾಮ ಬೀರಲಿದೆ?

80 ಕ್ಷೇತ್ರಗಳಲ್ಲಿ 71 ಸೀಟುಗಳನ್ನು ತನ್ನದಾಗಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷ ಇಂದಿಗೂ ಅದೇ ಮ್ಯಾಜಿಕ್ ತೋರುವ ವಿಶ್ವಾಸ ಮತ್ತು ಉತ್ಸಾಹದಲ್ಲಿದೆಯಾ? ಬಿಜೆಪಿಯನ್ನು ಕಟ್ಟಿ ಹಾಕಲು ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೆರಡು ಜಂಟಿಯಾಗಿ ಏನು ತಂತ್ರಗಾರಿಕೆ ಹೂಡಿಕೊಂಡಿವೆ?

ಅಲ್ಲದೆ, ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿಯೇ ಹೊರಗಿಟ್ಟು ಮಾಡಿಕೊಂಡಿರುವ ಈ ಮೈತ್ರಿಯಿಂದಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಏಕಾಂಗಿಯಾಗಿ ಕಾಂಗ್ರೆಸ್ ಮತ್ತು ಮೈತ್ರಿಕೂಟದ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಎಷ್ಟು ಸೀಟು ಗೆಲ್ಲುವ ಸಾಧ್ಯತೆಗಳಿವೆ?

ಫಲಿತಾಂಶ ಏನೇ ಬರಲಿ, ಜನವರಿ 12ರಂದು ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳು ಮಾಡಿಕೊಂಡಿರುವ ಈ ಚುನಾವಣಾ ಒಡಂಬಡಿಕೆ ಭರ್ಜರಿ ಯುದ್ಧಕ್ಕೆ ನಾಂದಿ ಹಾಡಿದೆ. ಆಗುಹೋಗುಗಳ, ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರಗಳು ಆರಂಭವಾಗಿವೆ. ಮಾತಿನ ಈಟಿಗಳು ತೂರಿಬರುತ್ತಿವೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಭರ್ಜರಿ ವೇದಿಕೆಯಂತೂ ಸಿದ್ಧವಾಗಿದೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು?

ಕಳೆದ ಚುನಾವಣೆಯಲ್ಲಿ ಏನಾಗಿತ್ತು?

ಮುಂದಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಇಣುಕುನೋಟ ಹರಿಸುವ ಮುನ್ನ ಕಳೆದ ಲೋಕಸಭೆ ಚುನಾವಣೆಯಲ್ಲಿ ಏನು ಸಂಭವಿಸಿತ್ತು ಎಂಬುದರತ್ತ ಪಕ್ಷಿನೋಟ ಬೀರೋಣ. 2009ರಲ್ಲಿ ಕೇವಲ 10 ಸೀಟು ಗೆದ್ದಿದ್ದ ಬಿಜೆಪಿ 2014ರಲ್ಲಿ ನರೇಂದ್ರ ಮೋದಿ ಅಲೆಯ ಮೇಲೆ ತೇಲಿತೇಲಿ, ಅಮಿತ್ ಶಾ ಅವರ ತಂತ್ರಗಾರಿಕೆಯಿಂದ ಉಳಿದೆಲ್ಲ ಪಕ್ಷಗಳು ಧೂಳಿಪಟವಾಗುವಂತೆ ಮಾಡಿತ್ತು. 80ರಲ್ಲಿ 71 ಕ್ಷೇತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿಸಿಕೊಂಡಿದ್ದ ಬಿಜೆಪಿಯ ಅಬ್ಬರದ ಮುಂದೆ ಉಳಿದೆಲ್ಲ ಪಕ್ಷಗಳು ಮಂಕುಬಡಿದಂತಾಗಿದ್ದವು. ಸಮಾಜವಾದಿ ಪಕ್ಷ 5 ಗೆದ್ದಿದ್ದರೆ, ಉತ್ತರ ಪ್ರದೇಶದಲ್ಲಿ ದಶಕಗಳ ಕಾಲ ದರ್ಬಾರ್ ಮಾಡಿದ್ದ ಕಾಂಗ್ರೆಸ್ ಗೆದ್ದಿದ್ದು ಕೇವಲ 2. ಈ ಬಾರಿ ಪ್ರಧಾನಿಯಾಗುವ ಕನಸು ಕಾಣುತ್ತಿರುವ ಮಾಯಾವತಿ ಅವರ ಪಕ್ಷ ಗೆದ್ದಿದ್ದು ಬಿಗ್ ಸೊನ್ನೆ.

ಉಪ್ರದಲ್ಲಿ ಇಳಿಯುತ್ತಿರುವ ಯೋಗಿ ಜನಪ್ರಿಯತೆ

ಉಪ್ರದಲ್ಲಿ ಇಳಿಯುತ್ತಿರುವ ಯೋಗಿ ಜನಪ್ರಿಯತೆ

ವಸ್ತುಸ್ಥಿತಿಯೇನೆಂದರೆ, ಭಾರತೀಯ ಜನತಾ ಪಕ್ಷ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕೂಡ ಸಮಾಜವಾದಿ ಪಕ್ಷದ ಧುರೀಣ ಅಖಿಲೇಶ್ ಮುಂದೆ ಸಪ್ಪೆಯಾಗಿ ಕಾಣಿಸುತ್ತಿದ್ದಾರೆ. ಅವರಲ್ಲಿ ಮೊದಲಿನ ಯುದ್ಧ ಉತ್ಸಾಹ ಕಂಡುಬರುತ್ತಿಲ್ಲ. ಇಂಡಿಯಾ ಟುಡೇ ಮತ್ತು ಮೈ ಆಕ್ಸಿಸ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಯೋಗಿ ಆದಿತ್ಯನಾಥ್ ಅವರು ಜನಪ್ರಿಯತೆಯ ಗ್ರಾಫ್ ಇಳಿಮುಖವಾಗಿದೆ. ಅವರ ಕಟುವಾದ ಹಿಂದೂತ್ವ ಪರ ನೀತಿ ಅವರಿಗೇ ಮುಳುವಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಶೇ.43ರಷ್ಟಿದ್ದ ಅವರ ಜನಪ್ರಿಯತೆ ಡಿಸೆಂಬರ್ ಹೊತ್ತಿಗೆ ಶೇ.38ರಷ್ಟು ಇಳಿದಿದೆ. ಇದು ಭಾರತೀಯ ಜನತಾ ಪಕ್ಷಕ್ಕೆ ಸದ್ಯಕ್ಕೆ ಕಳವಳಕಾರಿಯಾದ ಸಂಗತಿ.

ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿವೆ?

ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿವೆ?

ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡಲೇಬೇಕೆಂಬ ಸಂಕಲ್ಪದಿಂದ ಹುಟ್ಟಿಕೊಂಡಿದ್ದು ಘಟಬಂಧನ. ಆದರೆ, ಈ ಘಟಬಂಧನದಿಂದ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್ಸನ್ನು ಹೊರಗಿಡುವ ಮೂಲಕ ತನ್ನ ಕಾಲ ಮೇಲೆಯೇ ಎಸ್ಪಿ-ಬಿಎಸ್ಪಿ ಕಲ್ಲನ್ನು ಎಳೆದುಕೊಂಡಿವೆಯೇ ಎಂಬ ಸಂಶಯವೂ ಕಾಡಲು ಆರಂಭಿಸಿದೆ. ಎಬಿಪಿ ನ್ಯೂಸ್ ಮತ್ತು ಸಿವೋಟರ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ, ಒಂದು ವೇಲೆ ಎಸ್ಪಿ-ಬಿಎಸ್ಪಿ ಒಂದಾಗಿ ಕಾಂಗ್ರೆಸ್ಸನ್ನು ಹೊರಗಿಟ್ಟರೆ ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳು ಮಾತ್ರವಲ್ಲ ಕಾಂಗ್ರೆಸ್ ಲೆಕ್ಕಾಚಾರ ಕೂಡ ತಲೆಕೆಳಗಾಗುತ್ತದೆ ಎಂದು ಹೇಳಿತ್ತು. ಕಳೆದ ಬಾರಿ ಕೇವಲ 5 ಸೀಟು ಗೆದ್ದಿದ್ದ ಮೈತ್ರಿಕೂಟ ಈ ಬಾರಿ 42ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಭಾರತೀಯ ಜನತಾ ಪಕ್ಷಕ್ಕೆ ಭಾರೀ ಮುಖಭಂಗ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ. ಇದರಿಂದ ಕಾಂಗ್ರೆಸ್ಸಿನ ಹಣಬರಹವೇನೂ ಬದಲಾಗಲ್ಲ. ಕಳೆದ ಬಾರಿ 2 ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಇನ್ನೊಂದು ಸೇರಿಸಿಕೊಳ್ಳಬಹುದು ಅಷ್ಟೇ. ಕಾದು ನೋಡೋಣ ಏನಾಗುತ್ತದೋ ಅಂತ.

ಬಿಜೆಪಿಗೆ ಬಿಸಿತುಪ್ಪವಾಗಿರುವ ರಾಮ ಮಂದಿರ

ಬಿಜೆಪಿಗೆ ಬಿಸಿತುಪ್ಪವಾಗಿರುವ ರಾಮ ಮಂದಿರ

ಈ ಚುನಾವಣೆಯಲ್ಲಿ ಕುದಿಯುತ್ತಿರುವ ಅಯೋಧ್ಯಾ ರಾಮ ಮಂದಿರ ನಿರ್ಮಾಣ ಮತ್ತೆ ಪ್ರಮುಖ ವಿಷಯವಾದರೂ ಅಚ್ಚರಿಯಿಲ್ಲ. ಉತ್ತರ ಪ್ರದೇಶದಲ್ಲಿನ ಕಟ್ಟಾ ಹಿಂದೂಗಳು, ಆರೆಸ್ಸೆಸ್ ಬೆಂಬಲಿಗರು ರಾಮ ಮಂದಿರ ನಿರ್ಮಾಣವಾಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಕೆಲ ಸಂಘಟನೆಗಳು ರಾಮ ಮಂದಿರ ನಿರ್ಮಾಣವಾಗದಿದ್ದರೆ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಕೂಡ ಕಟ್ಟೆಚ್ಚರ ನೀಡಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಈ ವಿಷಯ ಬಿಸಿತುಪ್ಪದಂತಾಗಿದೆ. ರಾಮ ಮಂದಿರ ಕಟ್ಟುತ್ತೇನೆ ಎಂದು ವಾಗ್ದಾನವನ್ನೂ ನೀಡುವಂತಿಲ್ಲ, ಕಟ್ಟುವುದು ಸಾಧ್ಯವೇ ಇಲ್ಲ ಎಂದೂ ಹೇಳಿಕೆ ನೀಡುವಂತಿಲ್ಲ. ಕೋರ್ಟ್ ಆದೇಶ ಬರುವವರೆಗೆ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ನರೇಂದ್ರ ಮೋದಿ ಕಟ್ಟುನಿಟ್ಟಾಗಿ ಹೇಳಿರುವುದರಿಂದ ಮತಗಳ ಗಳಿಕೆ ಏರುಪೇರಾದರೂ ಅಚ್ಚರಿಯಿಲ್ಲ.

ವಾರಣಾಸಿ ಬಿಟ್ಟು ಬೇರೆಡೆ ಹೋಗ್ತಾರಾ ಮೋದಿ

ವಾರಣಾಸಿ ಬಿಟ್ಟು ಬೇರೆಡೆ ಹೋಗ್ತಾರಾ ಮೋದಿ

ನಾಯಕರ ಮತ್ತು ಬಿಜೆಪಿಯ ಜನಪ್ರಿಯತೆಯ ಮಟ್ಟ ಉತ್ತರ ಪ್ರದೇಶದಲ್ಲಿ ಏನೇ ಇರಲಿ, ರಾಜ್ಯದ ಜನತೆ ಇನ್ನೂ ಪ್ರಧಾನಿ ನರೇಂದ್ರ ಮೋದಿ ಪರವಾಗಿಯೇ ಇದ್ದಾರೆ. ಈ ದೃಷ್ಟಿಯಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಮೋದಿಯನ್ನೇ ನಂಬಿಕೊಳ್ಳುವುದರಲ್ಲಿ ಅಚ್ಚರಿಯೇ ಇಲ್ಲ. ನರೇಂದ್ರ ಮೋದಿಯವರ ಜನಪ್ರಿಯತೆ ಕೂಡ ತುಸು ಇಳಿದಿದ್ದರೂ ಅವರೇ ಮುಂದಿನ ಪ್ರಧಾನಿಯಾಗಬೇಕು ಎಂದಿದ್ದಾರೆ ಇಲ್ಲಿನ ಜನ. ಆದರೆ, ಈ ಬಾರಿ ಅವರು ಸ್ಪರ್ಧಿಸಿದ್ದ ವಾರಣಾಸಿಯಿಂದ ಹಾರ್ದಿಕ್ ಪಟೇಲ್ ಅವರು ನಿಲ್ಲುತ್ತಾರೆಂಬ ಸುದ್ದಿ ಬಲವಾಗಿ ಬೀಸಿದೆ. ಮೋದಿಯವರ ಅಲೆಯೇ ಮೇಲಾಗುವುದಾ ಅಥವಾ ಪಟೇಲ್ ಮೇನಿಯಾ ಕೈಹಿಡಿಯುವುದಾ ಎಂಬ ಕುತೂಹಲ ಈಗಾಗಲೆ ಮನೆಮಾಡಿದೆ. ಅಲ್ಲದೆ, ಮೋದಿಯವರು ವಾರಣಾಸಿಯನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಲಿದ್ದಾರೆ ಎಂಬ ಸುದ್ದಿಯೂ ಗಾಳಿಯಲ್ಲಿ ತೇಲಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+