ರಾಮ ಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದ್ದ ಎಸ್ಪಿಯನ್ನು ಕ್ಷಮಿಸುತ್ತೀರಾ: ಯೋಗಿ ಪ್ರಶ್ನೆ
ಲಕ್ನೋ, ಅಕ್ಟೋಬರ್ 22: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿ ಇದ್ದ ಸಂದರ್ಭದಲ್ಲಿ ಹಿಂದೂಗಳು ಹಾಗೂ ಭಗವಂತ ರಾಮನ ಭಕ್ತರ ಮೇಲೆ ಸುಳ್ಳು ಕ್ರಿಮಿನಲ್ ಪ್ರಕರಣ ದಾಖಲು ಮಾಡಿದೆ. ತನ್ನ ಅಧಿಕಾರವಧಿಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದಾರೆ. ರಾಮ ಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದೆ," ಎಂದು ಆರೋಪ ಮಾಡಿದ್ದಾರೆ.
ಲಕ್ನೋದಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಸಂಘಟನೆ ಆಯೋಜನೆ ಮಾಡಿದ್ದ '' ಸಾಮಾಜಿಕ ಪ್ರತಿನಿಧಿ ಸಮ್ಮೇಳನ '' ದಲ್ಲಿ '' ಚೌಹಾಣ್ ಸಮಾಜ''ದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಕಾಂಗ್ರೆಸ್ ಮೇಲೆಯೂ ಯೋಗಿ ಆದಿತ್ಯನಾಥ್ ವಾಕ್ಸಮರ ನಡೆಸಿದ್ದಾರೆ. "ಕಾಂಗ್ರೆಸ್ ಭಯೋತ್ಪಾದನೆಯ ಬೀಜಗಳನ್ನು ಬಿತ್ತುತ್ತಿದೆ," ಎಂದು ದೂರಿದ್ದಾರೆ. "1952 ರಲ್ಲಿ ಆರ್ಟಿಕಲ್ 370 ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೇರನ್ನು ಬಿತ್ತಿದ್ದು ಕಾಂಗ್ರೆಸ್," ಎಂದು ದೂರಿದ್ದಾರೆ.
ಸಿಎಂ ಯೋಗಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ
ವಿರೋಧ ಪಕ್ಷಗಳ ಮೇಲೆ ಕಿಡಿಕಾರಿದ ಯೋಗಿ ಆದಿತ್ಯನಾಥ್ ಮುಖ್ಯವಾಗಿ ಸಮಾಜವಾದಿ ಪಕ್ಷದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. "ರಾಮ ಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದ ಸಮಾಜವಾದಿ ಪಕ್ಷವನ್ನು ನೀವು ಕ್ಷಮಿಸುತ್ತೀರಾ?," ಎಂದು ಜನರನ್ನು ಪ್ರಶ್ನಿಸಿದ್ದಾರೆ.
"ನಮ್ಮ ಸರ್ಕಾರ ರಚನೆ ಆದ ಸಂದರ್ಭದಲ್ಲಿ ನಾವು ಮೊದಲ ಮಾಡಿದ ಕಾರ್ಯ, ರೈತರ ಸಾಲವನ್ನು ಮನ್ನಾ ಮಾಡಿದ್ದು. ಆದರೆ 2012 ರಲ್ಲಿ ಸಮಾಜವಾದಿ ಪಕ್ಷ ತಾನು ಸರ್ಕಾರವನ್ನು ರಚನೆ ಮಾಡಿದ ಸಂದರ್ಭದಲ್ಲಿ ಮೊದಲು ಭಯೋತ್ಪಾದಕರ ವಿರುದ್ಧದ ಕೇಸುಗಳನ್ನು ಹಿಂದಕ್ಕೆ ಪಡೆದುಕೊಂಡಿದೆ," ಎಂದರು.
"ಸಮಾಜವಾದಿ ಪಕ್ಷದ ನಾಯಕರುಗಳಾದ ಮುಲ್ಲಾಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ತಮ್ಮ ಆಡಳಿತ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. 1990 ರಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರೆ ರಾಮ ಭಕ್ತರ ಮೇಲೆ ಗುಂಡಿನ ದಾಳಿ ನಡೆಯುತ್ತಿರಲಿಲ್ಲ," ಎಂದು ಹೇಳಿದರು.
'ಈ ಚಿತ್ರ ನೋಡಿ ಯೋಗಿಜಿಗೆ ತುಂಬಾ ನೋವಾಗಿದೆ ಎಂದು ತಿಳಿಯಿತು'
"ರಾಮ ಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದವರನ್ನು ನೀವು ಕ್ಷಮಿಸುತ್ತೀರಾ? ಭಗವಂತ ರಾಮ ಆ ಜನರನ್ನು ಎಂದಿಗೂ ಕ್ಷಮಿಸುವುದಿಲ್ಲ," ಎಂದು ಹೇಳಿದ ಯೋಗಿ ಆದಿತ್ಯನಾಥ್ ಇದೇ ಸಂದರ್ಭದಲ್ಲಿ, "ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು 135 ಕೋಟಿ ಭಾರತೀಯರು ವಿಶ್ವದ ಎದುರು ತಲೆ ಎತ್ತಿ ನಿಲ್ಲಲು ಒಂದು ಅವಕಾಶ ಸೃಷ್ಟಿ ಮಾಡಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಆರೋಪಗಳ ಸುರಿಮಳೆಗೈದ ಯೋಗಿ
ಕರಸೇವಕರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ವಿಚಾರವನ್ನು ಪ್ರಸ್ತಾಪ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ವಿಚಾರದಲ್ಲಿ ಅಂದಿನ ಸಮಾಜವಾದಿ ಸರ್ಕಾರದ ವಿರುದ್ಧ ಭಾಷಣದುದ್ಧಕ್ಕೂ ವಾಕ್ಸಮರ ನಡೆಸಿದರು. "ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಈ ಹಿಂದೆ ತಮ್ಮ ಸರ್ಕಾರವನ್ನು ರಚನೆ ಮಾಡಿದೆ. ಆದರೆ ತಮ್ಮ ಕುಟುಂಬ ಹಾಗೂ ಭಯೋತ್ಪಾದಕರನ್ನು ಹೊರತುಪಡಿಸಿ ಈ ಮೂರು ಸರ್ಕಾರಕ್ಕೂ ಬೇರೆ ಯಾವುದಕ್ಕೂ ಸಮಯವೇ ಇರಲಿಲ್ಲ. 2012 ರಲ್ಲಿ ಹಿಂದೂಗಳ ಮೇಲೆ ಸುಳ್ಳು ದೂರುಗಳನ್ನು ದಾಖಲು ಮಾಡಲಾಗಿದೆ. ಭಯೋತ್ಪಾದಕರನ್ನು ಸರ್ಕಾರ ಆರತಿ ಬೆಳಗಿ ಸ್ವಾಗತಿಸುತ್ತದೆ," ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.
"ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ಜನರು ಈ ಎಲ್ಲಾ ವಿಚಾರವನ್ನು ತಿಳಿಯುವುದು ಮುಖ್ಯ. ನಾವು ಗ್ರಾಮ ಗ್ರಾಮಕ್ಕೂ ಹೋಗಿ ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಯಾಕೆ ಮುಖ್ಯ ಎಂದು ತಿಳಿಸಬೇಕಾಗಿದೆ," ಎಂದು ತಮ್ಮ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
"ಬಿಜೆಪಿ ಸರ್ಕಾರವಿದ್ದರೆ ಬೇರೆ ಯಾರಿಗೂ ಗಲಭೆಯನ್ನು ಎಬ್ಬಿಸುವ ಧೈರ್ಯ ಇರುವುದಿಲ್ಲ. ಯಾವುದೇ ಮಾಫಿಯಾಗಳು ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ಯಾರದೂ ಮಾಫಿಯಾ ಮಾಡಿದರೆ, ರಾಜ್ಯ ಸರ್ಕಾರ ಅವರನ್ನು ಬಿಡದು," ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)