'ರಾಮರಾಜ್ಯ ಭರವಸೆ ನೀಡಿದ್ರು, ಆದರೆ ಗೂಂಡಾ ರಾಜ್ಯ ಕೊಟ್ಟರು'
ಲಕ್ನೌ, ಜುಲೈ 22: ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಮರಾಜ್ಯ ಭರವಸೆ ನೀಡಿದ್ರು, ಆದರೆ ಗೂಂಡಾ ರಾಜ್ಯವನ್ನು ಕೊಟ್ಟರು' ಎಂದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ್ದಾರೆ.
ಉ. ಪ್ರದೇಶ; ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಪತ್ರಕರ್ತ ಸಾವು
ಪತ್ರಕರ್ತನ ಹತ್ಯೆಗೆ ಕುರಿತು ಸಂತಾಪ ಸೂಚಿಸಿರುವ ರಾಹುಲ್ ಗಾಂಧಿ 'ತನ್ನ ಸೊಸೆಗೆ ಕಿರುಕುಳ ನೀಡಿದ್ದನ್ನ ವಿರೋಧಿಸಿದ್ದಕ್ಕೆ ಕೊಲ್ಲಲ್ಪಟ್ಟರು. ಪತ್ರಕರ್ತನನ್ನು ಕಳೆದುಕೊಂಡ ದುಃಖಿತ ಕುಟುಂಬಕ್ಕೆ ನನ್ನ ಸಂತಾಪ' ಎಂದಿದ್ದಾರೆ.
ಮುಂದಿನ ಸಾಲಿನಲ್ಲಿ 'ರಾಮರಾಜ್ಯ ಭರವಸೆ ನೀಡಿದ್ರು, ಆದರೆ ಗೂಂಡಾ ರಾಜ್ಯವನ್ನು ಕೊಟ್ಟರು' ಎಂದು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ 10.30 ಸಮಯದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ತಂಡ ಆತನ ತಲೆಗೆ ಶೂಟ್ ಮಾಡಿದೆ. ತೀವ್ರವಾಗಿ ಗಾಯಗೊಂಡ ಪತ್ರಕರ್ತನನ್ನು ಯಶೋಧ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತನ್ನ ಸೊಸೆಗೆ ಕೆಲವು ಮಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಪೊಲೀಸರ ಶಂಕಿಸಿದ್ದಾರೆ.