ಯುಪಿ, ಪಂಜಾಬ್ ಚುನಾವಣೆ: ವಿಪಕ್ಷಗಳಿಂದ ಇವಿಎಂ ಸಮಸ್ಯೆಯ ಆರೋಪ
ಲಕ್ನೋ, ಫೆಬ್ರವರಿ 20: ಉತ್ತರ ಪ್ರದೇಶದ 16 ಜಿಲ್ಲೆಗಳ 59 ಕ್ಷೇತ್ರಗಳಿಗೆ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್ನಲ್ಲೂ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಯುಪಿಯಲ್ಲಿ ಶೇ 8.15 ಮತ್ತು ಪಂಜಾಬ್ನಲ್ಲಿ ಶೇ 4.80ರಷ್ಟು ಮತದಾನವಾಗಿದೆ.
ಉತ್ತರ ಪ್ರದೇಶದಲ್ಲಿ ಮತದಾನ ಆರಂಭವಾದ ಬೆನ್ನಲ್ಲೇ, ಕಾನ್ಪುರ ಗ್ರಾಮಾಂತರದಲ್ಲಿ ಇವಿಎಂ ಮತಯಂತ್ರದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಸಮಾಜವಾದಿ ಪಕ್ಷದ ಗುರುತಿನ ಪಕ್ಕದಲ್ಲಿರುವ ಬಟನ್ ಅನ್ನು ಮತದಾರರು ಒತ್ತಿದ ನಂತರವೂ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಬಿಜೆಪಿಯ ಸ್ಲಿಪ್ ಅನ್ನು ನೀಡಿದೆ ಎಂದು ಸಮಾಜವಾದಿ ಪಕ್ಷವು ಆರೋಪಿಸಿದೆ. ಚುನಾವಣಾ ಆಯೋಗ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದೆ.
ಯುಪಿ: ಮತದಾನದ ಫೋಟೋ ಹಂಚಿಕೊಂಡ ಕಾನ್ಪುರ ಮೇಯರ್ ವಿರುದ್ಧ ಎಫ್ಐಆರ್
"ಕಾನ್ಪುರ ಗ್ರಾಮಾಂತರದ ಭೋಗ್ನಿಪುರ 208 ವಿಧಾನಸಭೆಯ ಬೂತ್ ಸಂಖ್ಯೆ 121 ರಲ್ಲಿ ಸಮಾಜವಾದಿ ಪಕ್ಷದ ಬಟನ್ ಒತ್ತಿದ ನಂತರ ಬಿಜೆಪಿಯ ಸ್ಲಿಪ್ ಹೊರಬರುತ್ತಿದೆ. ಸುಗಮ ಮತ್ತು ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಗಮನಹರಿಸಬೇಕು," ಎಂದು ಸಮಾಜವಾದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ಕಾನ್ಪುರ ದೇಹತ್ನ ಭೋಗ್ನಿಪುರ್ನಲ್ಲಿರುವ ಮತಗಟ್ಟೆ ಸಂಖ್ಯೆ 21 ರಲ್ಲಿ ಇವಿಎಂನಲ್ಲಿ ಎಸ್ಪಿಯ ಸೈಕಲ್ ಚಿಹ್ನೆಯನ್ನು ಒತ್ತಿದಾಗ ಬಿಜೆಪಿ ಚಿಹ್ನೆ ಇರುವ ಸ್ಲಿಪ್ ಹೊರಬರುತ್ತಿದೆ ಎಂಬ ದೂರು ನಮಗೆ ಬಂದಿದೆ. ಆದರೆ ಈ ಈ ದೂರು ಆಧಾರರಹಿತವಾಗಿದೆ ಎಂದು ಕಂಡುಬಂದಿದೆ," ಎಂದು ಹೆಚ್ಚುವರಿ ಚುನವಣಾ ಮುಖ್ಯ ಅಧಿಕಾರಿ ಬಿಡಿ ರಾಮ್ ತಿವಾರಿ ಹೇಳಿದ್ದಾರೆ. ಇನ್ನು ಮೈನ್ಪುರಿಯ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳು ಅಸಮರ್ಪಕವಾಗಿವೆ ಎಂದು ಅಖಿಲೇಶ್ ಯಾದವ್ ಅವರ ಪಕ್ಷವೂ ಆರೋಪಿಸಿದೆ.
ಯುಪಿ ಮೂರನೇ ಹಂತದ ಮತದಾನ: ಸೈಕಲ್ ಪಂಚರ್ ಮಾಡುತ್ತಾ ಕಮಲ?
ಇಂದು ಮತದಾನ ನಡೆಯುವ ಸ್ಥಾನಗಳು ಉತ್ತರ ಪ್ರದೇಶದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿವೆ. 2017 ರಲ್ಲಿ, ಈ 59 ಸ್ಥಾನಗಳಲ್ಲಿ ಬಿಜೆಪಿ 49 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಸಮಾಜವಾದಿ ಪಕ್ಷವು 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷವು ಯಾವುದೇ ಸ್ಥಾನವನ್ನು ಇಲ್ಲಿ ಪಡೆದಿಲ್ಲ.
ಕರ್ಹಾಲ್ ಸ್ಥಾನದ ಮೇಲೆ ಎಲ್ಲರ ಚಿತ್ತ
ಸದ್ಯ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಮೊದಲ ರಾಜ್ಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಯಾದವ್ ಕುಟುಂಬದ ಭದ್ರಕೋಟೆಯಾದ ಮೈನ್ಪುರಿಯಲ್ಲಿರುವ ಕರ್ಹಾಲ್ ಸ್ಥಾನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರ ವಿರುದ್ಧ ಬಿಜೆಪಿ ಕೇಂದ್ರ ಸಚಿವ ಎಸ್ಪಿ ಸಿಂಗ್ ಬಘೇಲ್ ಅವರನ್ನು ಕಣಕ್ಕಿಳಿಸಿದೆ. 1992ರಲ್ಲಿ ಪಕ್ಷ ಸ್ಥಾಪನೆಯಾದಾಗಿನಿಂದ ಎಸ್ಪಿ ಈ ಸ್ಥಾನವನ್ನು ಕೇವಲ ಒಂದು ಬಾರಿ ಮಾತ್ರ ಕಳೆದುಕೊಂಡಿದೆ.
ಇತರ ಪ್ರಮುಖ ಅಭ್ಯರ್ಥಿಗಳೆಂದರೆ ಎಸ್ಪಿ ಮುಖ್ಯಸ್ಥರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ (ಜಸ್ವಂತ್ನಗರ), ಬಿಜೆಪಿಯ ಸತೀಶ್ ಮಹಾನಾ (ಕಾನ್ಪುರದ ಮಹಾರಾಜಪುರ), ರಾಮ್ವೀರ್ ಉಪಾಧ್ಯಾಯ (ಹತ್ರಾಸ್ನ ಸದಾಬಾದ್), ಅಸಿಮ್ ಅರುಣ್ (ಕನೌಜ್ ಸದರ್) ಮತ್ತು ಕಾಂಗ್ರೆಸ್ನ ಲೂಯಿಸ್ ಖುರ್ಷಿದ್ (ಫರೂಕಾಬಾದ್ ಸದರ್) ಆಗಿದ್ದಾರೆ. ಲೂಯಿಸ್ ಖುರ್ಷಿದ್ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಆಗಿದ್ದಾರೆ. ಮೂರನೇ ಹಂತದ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆ ಕ್ಷೇತ್ರಗಳ ಪೈಕಿ 172 ಸ್ಥಾನಗಳಿಗೆ ಮತದಾನ ಮುಕ್ತಾಯ ಆಗಲಿದೆ. (ಒನ್ಇಂಡಿಯಾ ಸುದ್ದಿ)
Recommended Video