ಅಯೋಧ್ಯೆ ಹನುಮಾನ್ ಮಂದಿರದಲ್ಲಿ ಮೋದಿ ವಿಶೇಷ ಪೂಜೆ
ಲಕ್ನೋ, ಆಗಸ್ಟ್ 03 : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಂಕು ಸ್ಥಾಪನೆ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲು ಅವರು ಹನುಮಾನ್ ಗಡಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಅಯೋಧ್ಯೆಯಲ್ಲಿರುವ ಹನುಮಾನ್ ಗಡಿ ದೇವಾಲಯವನ್ನು ಸೋಮವಾರ ಸ್ಯಾನಿಟೈಸ್ ಮಾಡಲಾಗಿದೆ. ಮೊದಲು ದೇವಾಲಯಕ್ಕೆ ಭೇಟಿ ನೀಡಲಿರುವ ನರೇಂದ್ರ ಮೋದಿ ಬಳಿಕ ರಾಮ ಮಂದಿರ ಶಂಕು ಸ್ಥಾಪನೆ ಸ್ಥಳಕ್ಕೆ ತೆರಳಲಿದ್ದಾರೆ.
"ನರೇಂದ್ರ ಮೋದಿ ಅವರು ಮೊದಲು ಹನುಮಾನ್ ಗಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ರಾಮ ಮಂದಿರದ ಜಾಗಕ್ಕೆ ತೆರಳಲಿದ್ದಾರೆ. ಆದ್ದರಿಂದ, ಇಂದು ಸ್ಯಾನಿಟೈಸ್ ಮಾಡಲಾಗುತ್ತಿದೆ" ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ.

ರಾಮ ಮಂದಿರ ಶಂಕು ಸ್ಥಾಪನೆ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಮತ್ತು ವಿವಿಧ ಗಣ್ಯರ ಭೇಟಿ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೋದಿಗೆ ರಕ್ಷಣೆ ನೀಡುವ ಎಸ್ಪಿಜಿ ಪಡೆ ಈಗಾಗಲೇ ಅಯೋಧ್ಯೆಗೆ ಆಗಮಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಇಂದು ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಅಯೋಧ್ಯೆಗೆ ಆಗಮಿಸಲಿರುವ ಅವರು, ಅಧಿಕಾರಿಗಳ ಜೊತೆ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಯೋಗಿ ಆದಿತ್ಯನಾಥ್ ಭಾನುವಾರ ರಾಮ ಮಂದಿರ ಶಂಕು ಸ್ಥಾಪನೆ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಬೇಕಿತ್ತು. ಆದರೆ, ಸಂಪುಟದ ಸಹೋದ್ಯೋಗಿ ಕಮಲ್ ರಾಣಿ ವರುಣ್ ಕೋವಿಡ್ನಿಂದ ಮೃತಪಟ್ಟ ಕಾರಣಕ್ಕಾಗಿ ತಮ್ಮ ಕಾರ್ಯಕ್ರಮವನ್ನು ಅವರು ಮುಂದೂಡಿದ್ದರು.












Click it and Unblock the Notifications