ಪವಾಡ! ರಾತ್ರಿಯಿಡೀ ಶವಾಗಾರದ ಫ್ರೀಜರ್ನಲ್ಲಿದ್ದ ಮೃತ ವ್ಯಕ್ತಿ ಜೀವಂತ!
ಲಕ್ನೋ ನವೆಂಬರ್ 22: ಸಾವನ್ನಪ್ಪಿದ್ದಾನೆಂದು ರಾತ್ರಿಯಿಡಿ ಶವಗಾರದಲ್ಲಿಟ್ಟಿದ್ದ ವ್ಯಕ್ತಿ ಬೆಳಗ್ಗೆ ಜೀವಂತವಾಗಿರುವ ಅಘಾತಕಾರಿ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ 45 ವರ್ಷದ ವ್ಯಕ್ತಿಯನ್ನು ಪರೀಕ್ಷೆಯ ನಂತರ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಹೀಗಾಗಿ ಆತನ ಶವವನ್ನು ಆಸ್ಪತ್ರೆಯ ಶವಾಗಾರದ ಫ್ರೀಜರ್ನಲ್ಲಿ ಇರಿಸಲಾಗಿತ್ತು. ಆದರೆ ರಾತ್ರಿಯಿಡೀ ಶವಾಗಾರದ ಫ್ರೀಜರ್ನಲ್ಲಿದ್ದ ನಂತರವೂ ಅವರು ಉಸಿರಾಡುತ್ತಿರುವುದನ್ನು ಮರುದಿನ ಕಂಡು ಮೃತನ ಸಂಬಂಧಿಕರು ಆಶ್ಚರ್ಯಗೊಂಡಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕಳೆದ ಗುರುವಾರ ರಾತ್ರಿ ಬೈಕ್ ಡಿಕ್ಕಿಯಾಗಿ ಶ್ರೀಕೇಶ್ ಕುಮಾರ್ ಎಂಬಾತ ಗಾಯಗೊಂಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಶ್ರೀಕೇಶ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ತುರ್ತು ವೈದ್ಯಕೀಯ ಅಧಿಕಾರಿ ಅವರನ್ನು ಪರೀಕ್ಷಿಸಿದ್ದಾರೆ. ಬಳಿಕ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ಕೂಡ ನೀಡಲಾಗಿದೆ. ಮಾಹಿತಿ ನೀಡಿ 6 ಗಂಟೆ ಕಳೆದರೂ ಸಂಬಂಧಿಕರು ಆಸ್ಪತ್ರೆಗೆ ಬಾರದೆ ಇದ್ದುದರಿಂದ ಮೃತನನ್ನು ಆಸ್ಪತ್ರೆಯ ಶವಾಗಾರದ ಫ್ರೀಜರ್ನಲ್ಲಿ ಇಡಲಾಗಿದೆ. ನಂತರ ಶುಕ್ರವಾರ ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮೃತ ವ್ಯಕ್ತಿ ಎಚ್ಚರ
ಗುರುವಾರ ಮೃತಪಟ್ಟಿದ್ದಾನೆ ಎಂದು ಹೇಳಲಾದ ವ್ಯಕ್ತಿಯನ್ನು ಶುಕ್ರವಾರ ಮುಂಜಾನೆಯವರೆಗೆ ಶವಗಾರದಲ್ಲಿಡಲಾಗಿತ್ತು. ಮನೆಯವರು ಬರುವವರೆಗೂ ಶವಾಗಾರದ ಫ್ರೀಜರ್ನಲ್ಲಿ ಇಡಲಾಗಿದ್ದ ವ್ಯಕ್ತಿ ಮುಂಜಾನೆ ಜೀವಂತವಾಗಿರುವುದು ಕಂಡು ಬಂದಿದೆ. ಇದನ್ನು ಕಂಡು ವೈದ್ಯರೇ ಆಶ್ಚರ್ಯಗೊಂಡಿದ್ದಾರೆ.
ಶವಪರೀಕ್ಷೆಗಾಗಿ ಪೇಪರ್ ವರ್ಕ್ ಪ್ರಾರಂಭಿಸಲು ಪೊಲೀಸ್ ತಂಡ ಆಸ್ಪತ್ರೆಗೆ ಬರಬೇಕಿತ್ತು. ಇದಕ್ಕೆ ವ್ಯಕ್ತಿಯ ಕುಟುಂಬದ ಒಪ್ಪಿಗೆಯೋ ಬೇಕಿತ್ತು. ಅವರು ಮರುದಿನ ಬೆಳಿಗ್ಗೆ ಬಂದ ತಕ್ಷಣ ಶ್ರೀಕೇಶ್ ಜೀವಂತವಾಗಿದ್ದಾರೆಂದು ತಿಳಿದು ಬಂದಿದೆ. ಶ್ರೀಕೇಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಇನ್ನೂ ಕೋಮಾದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಕೇಶನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದು ಪವಾಡವಲ್ಲದೆ ಬೇರೇನೂ ಅಲ್ಲ. ಆದರೆ ಬದುಕಿದ್ದಾಗಲೂ ವೈದ್ಯರು ಹೇಗೆ ಸತ್ತರು ಎಂದು ಘೋಷಿಸಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ವೈದ್ಯರ ಸಮರ್ಥನೆ
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾಜೇಂದ್ರ ಕುಮಾರ್, ಶ್ರೀಕೇಶ್ ಕುಮಾರ್ ಅವರನ್ನು ಅಪಘಾತ ಸಂಭವಿಸಿದ ತಕ್ಷಣ ಆಸ್ಪತ್ರೆಗೆ ತರಲಾಗಿತ್ತು. ನಾವು ಅವರಿಗೆ ಕೂಡಲೇ ಚಿಕಿತ್ಸೆ ನೀಡಿದ್ದೇವೆ. ಚಿಕಿತ್ಸೆಗೂ ಅವರು ಸ್ಪಂದಿಸುತ್ತಿರಲಿಲ್ಲ. ಜೊತೆಗೆ ವ್ಯಕ್ತಿಯಲ್ಲಿ ಯಾವುದೇ ಜೀವಿತಾವಧಿಯ ಚಿಹ್ನೆಗಳು ಕಂಡುಬಂದಿಲ್ಲ. ಆದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಇದಾದ ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಮೃತರನ್ನು ಆಸ್ಪತ್ರೆಯ ಶವಾಗಾರದ ಫ್ರೀಜರ್ನಲ್ಲಿ ಇಡಲಾಗಿದೆ. ಬೆಳಗ್ಗೆ ಆ ವ್ಯಕ್ತಿ ಇನ್ನೂ ಜೀವಂತವಾಗಿರುವುದು ಕಂಡು ಬಂದಿದೆ. ಅವರಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಮೊರಾದಾಬಾದ್ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಶಿವ ಸಿಂಗ್, "ಡಾ ಮನೋಜ್ ಯಾದವ್ ತುರ್ತು ಕರ್ತವ್ಯದಲ್ಲಿದ್ದರು. ರಾತ್ರಿ ಶ್ರೀಕೇಶ್ ಎಂಬ ರೋಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆತನನ್ನು ನೋಡಲಾಗಿದೆ. ಅವರು (ತುರ್ತು ವೈದ್ಯರು) ರೋಗಿಯನ್ನು ಹಲವು ಬಾರಿ ಪರೀಕ್ಷಿಸಿದ್ದಾರೆ ಮತ್ತು ಹೃದಯ ಬಡಿತವನ್ನು ಕಂಡುಕೊಂಡಿಲ್ಲ. ಆದ್ದರಿಂದ ಅವರು ಸತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಬೆಳಿಗ್ಗೆ ಪೊಲೀಸ್ ಮತ್ತು ಶ್ರೀಕೇಶ್ ಕುಟುಂಬವು ಅವನನ್ನು ಜೀವಂತವಾಗಿ ಕಂಡುಕೊಂಡರು. ಇದನ್ನು "ಅಪರೂಪದ ಪ್ರಕರಣಗಳು" ಎಂದು ಕರೆದ ಶಿವ ಸಿಂಗ್, "ಕೆಲವೊಮ್ಮೆ ಯಾರಾದರೂ ಸತ್ತಿದ್ದಾರೆ ಎಂದು ಘೋಷಿಸುವಲ್ಲಿ ಸಮಸ್ಯೆಗಳಾಗುತ್ತವೆ. ಉದಾಹರಣೆಗೆ, "ಕೆಲವರಲ್ಲಿ ಸಾವು ಇಲ್ಲದೆ ಅನೇಕ ಪ್ರಮುಖ ಅಂಗಗಳ ತಾತ್ಕಾಲಿಕ ನಿಲುಗಡೆ ಆಗಿರುತ್ತದೆ" ಎಂದಿದ್ದಾರೆ.
ಕುಟುಂಬಸ್ಥರ ಆರೋಪ
Recommended Video
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕೇಶ್ ಅವರ ಸೋದರ ಮಾವ ಕಿಶೋರಿ ಲಾಲ್, ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ಕರ್ತವ್ಯದ ವೇಳೆ ವೈದ್ಯರು ಶ್ರೀಕೇಶ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. "ತುರ್ತು ಕರ್ತವ್ಯದಲ್ಲಿದ್ದ ವೈದ್ಯರು ತಪಾಸಣೆ ಮಾಡಿದರು, ಆದರೆ ಚಿಕಿತ್ಸೆ ನೀಡಲಿಲ್ಲ. ನಾಡಿಮಿಡಿತವಾಗಲೀ, ಬಿಪಿಯಾಗಲೀ (ರಕ್ತದೊತ್ತಡ) ಇಲ್ಲ ಅವರು ಸತ್ತಿದ್ದಾರೆ ಎಂದು ವೈದ್ಯರು ಹೇಳಿದರು. ಕರ್ತವ್ಯ ನಿರತ ವೈದ್ಯರ ನಿರ್ಲಕ್ಷ್ಯ ಹಾಗೂ ನಿರ್ಲಕ್ಷ್ಯವೇ ಇದಕ್ಕೆ ಕಾರಣ" ಕಿಶೋರಿ ಲಾಲ್ ಆರೋಪಿಸಿದರು.