ಅಖಿಲೇಶ್, ಮಾಯಾವತಿ ಲೋಕ ಚುನಾವಣೆಗೆ ಸ್ಪರ್ಧಿಸಲ್ಲ, ಏಕೆ ಗೊತ್ತೆ?
ಲಖನೌ (ಉತ್ತರಪ್ರದೇಶ), ಮಾರ್ಚ್ 17: 2019ರ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಒಟ್ಟಾಗಿ ಸ್ಪರ್ಧಿಸುತ್ತಿವೆ. ಈ ಮೈತ್ರಿಯು ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹೊಡೆತ ನೀಡಬಹುದು ಎಂಬುದು ಸದ್ಯದ ಅಂದಾಜು.
ಆದರೆ, ಈ ಸಲದ ಚುನಾವಣೆಗೆ ಸ್ಪರ್ಧೆ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ಎಸ್ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಅವರಲ್ಲಿ ಎರಡು ಮನಸ್ಸಿದೆ. ಚುನಾವಣೆ ಪ್ರಚಾರದಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳುವಷ್ಟು ಕೆಲಸ ಇರುವ ಮಧ್ಯೆ ತಾವು ಪ್ರತಿನಿಧಿಸುವ ಕ್ಷೇತ್ರದ ಪ್ರಚಾರಕ್ಕೆ ಗಮನ ನೀಡುವುದು ಅಸಾಧ್ಯ ಎಂದು ಇಬ್ಬರಿಗೂ ಅನ್ನಿಸಿದೆ.
ಬರೋಬ್ಬರಿ 24 ವರ್ಷದ ನಂತರ... ಮುಲಾಯಂ ಪರ ಮಾಯಾವತಿ ಪ್ರಚಾರ
ಈ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಆಲೋಚಿಸಲು ಶುರು ಮಾಡಿದ್ದಾರೆ. ಈ ಹಿಂದೆ ಮಾಧ್ಯಮದವರ ಜತೆ ಅಖಿಲೇಶ್ ಮಾತನಾಡುತ್ತಾ, ತಮ್ಮ ಪತ್ನಿ ಡಿಂಪಲ್ ಪ್ರತಿನಿಧಿಸುವ ಕನೌಜ್ ನಿಂದ ಸ್ಪರ್ಧಿಸುವ ಆಲೋಚನೆ ಬಗ್ಗೆ ಹೇಳಿಕೊಂಡಿದ್ದರು. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಕನೌಜ್ ನಿಂದ ಡಿಂಪಲ್ ಅವರ ಹೆಸರನ್ನೇ ಘೋಷಣೆ ಮಾಡಲಾಯಿತು.
ನಾನಾ ಕ್ಷೇತ್ರಗಳ ಹೆಸರು ಪ್ರಸ್ತಾವ ಆಗಿತ್ತು
ಸದ್ಯಕ್ಕೆ ಮುಲಾಯಂ ಸಿಂಗ್ ಯಾದವ್ ಸಂಸದರಾಗಿರುವ ಅಜಂಗಢ್ ನಿಂದ ಅಖಿಲೇಶ್ ಸ್ಪರ್ಧಿಸಬಹುದು ಎಂಬ ಸುದ್ದಿ ಪಕ್ಷದೊಳಗೆ ಕೆಲ ಕಾಲ ಹರಿದಾಡಿತು. ಮುಲಾಯಂ ಸಿಂಗ್ ಹಾಗೂ ಡಿಂಪಲ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ಹಲವು ನಾಯಕರ ಪರವಾಗಿ ಅಖಿಲೇಶ್ ಯಾದವ್ ಪ್ರಚಾರ ಮಾಡಬೇಕಿರುವುದರಿಂದ ಲೋಕಸಭೆ ಚುನಾವಣೆಗೆ ಅವರು ಸ್ಪರ್ಧಿಸುವುದು ಅನುಮಾನ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಮಾಯಾವತಿ ಪ್ರಚಾರಕ್ಕೆ ಮಾತ್ರ ಸೀಮಿತ
ಬಿಎಸ್ಪಿ ವಿಚಾರಕ್ಕೆ ಬಂದರೆ, ಮಾಯಾವತಿ ನಗೀನಾ ಅಥವಾ ಅಂಬೇಡ್ಕರ್ ನಗರ್ ನಿಂದ ಸ್ಪರ್ಧಿಸಬಹುದು ಎಂದು ಪಕ್ಷದ ಹಿರಿಯ ನಾಯಕರು ಈ ಹಿಂದೆ ಹೇಳಿದ್ದರು. ಈಗ ಆ ಎರಡೂ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಮಾಯಾವತಿ ಪ್ರಚಾರಕ್ಕೆ ಮಾತ್ರ ಸೀಮಿತರಾಗುತ್ತಾರೆ.
ಆಂಧ್ರ ಪ್ರದೇಶ, ತೆಲಂಗಾಣ ಸಭೆಯಲ್ಲೂ ಭಾಗಿ
ಮಾಯಾವತಿ ಹನ್ನೊಂದು ಜಂಟಿ ಸಭೆಗಳಲ್ಲಿ ಪಾಲ್ಗೊಳ್ಳುವುದರ ಹೊರತಾಗಿ ಉತ್ತರ ಪ್ರದೇಶದ ವಿವಿಧೆಡೆ ಪ್ರಚಾರ ನಡೆಸುತ್ತಾರೆ. ಜತೆಗೆ ಇಡೀ ಭಾರತದಲ್ಲಿ ಬಿಎಸ್ ಪಿಯ ಮೂವತ್ತು ಸಭೆಯಲ್ಲಿ ಭಾಗವಹಿಸುತ್ತಾರೆ. ಏಪ್ರಿಲ್ ಮೂರು ಹಾಗೂ ನಾಲ್ಕರಂದು ದಕ್ಷಿಣದ ರಾಜ್ಯಗಳಲ್ಲಿ (ಆಂಧ್ರಪ್ರದೇಶ, ತೆಲಂಗಾಣ) ತಾವು ಮೈತ್ರಿ ಮಾಡಿಕೊಂಡ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಾರೆ.
ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಮಧ್ಯೆ ಮೈತ್ರಿ ಆಗಿದೆ. ದೇಶದಲ್ಲೇ ಅತಿ ಹೆಚ್ಚು ಅಂದರೆ, ಎಂಬತ್ತು ಲೋಕಸಭಾ ಕ್ಷೇತ್ರವಿರುವ ಉತ್ತರಪ್ರದೇಶದಲ್ಲಿ ಎರಡೂ ಪಕ್ಷಗಳು ತಲಾ ಮೂವತ್ತೆಂಟು ಕ್ಷೇತ್ರಗಳನ್ನು ಹಂಚಿಕೊಂಡಿವೆ. ಏಪ್ರಿಲ್ ಹನ್ನೊಂದರಿಂದ ಆರಂಭವಾಗುವ ಚುನಾವಣೆ ಏಳು ಹಂತದಲ್ಲಿ ನಡೆಯಲಿದ್ದು, ಮೇ ಇಪ್ಪತ್ಮೂರರಂದು ಫಲಿತಾಂಶ ಪ್ರಕಟ ಆಗಲಿದೆ.