ಮೋದಿ ಅನ್ ಫಿಟ್, ಪ್ರಧಾನಿ ಹುದ್ದೆಗೆ ನಾನೇ ಸರಿ: ಮಾಯಾವತಿ ನೇರಾನೇರ ಮಾತು
ಲಕ್ನೋ, ಮೇ 17: "ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಅನ್ ಫಿಟ್, ಅವರಿಗೆ ಹೋಲಿಸಿದರೆ ನಾನೇ ಉತ್ತಮ ಪ್ರಧಾನಿಯಾಗಬಲ್ಲೆ" ಎಮದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ನೇರವಾಗಿ ಹೇಳಿದ್ದಾರೆ. ಈ ಮೂಲಕ ತಾವು ಪ್ರಧಾನಿ ಗಾದಿಯ ರೇಸ್ ನಲ್ಲಿರುವುದಾಗಿ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಉತ್ತರ ಪ್ರದೇಶದ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು, "ಉತ್ತರ ಪ್ರದೇಶದ ಅಭಿವೃದ್ಧಿಯನ್ನು ನೋಡಿದರೆ, ಬಿಎಸ್ಪಿ ಅಧಿಕಾರದಲ್ಲಿದ್ದಾಗ ರಾಜ್ಯ ಸಾಕಷ್ಟು ಅಭಿವೃದ್ಧಿ ಹೊಂದಿರುವುದು ಕಂಡುಬರುತ್ತದೆ. ಮುಂದೆಯೂ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ದಿಕ್ಕನ್ನೇ ಬಿಎಸ್ಪಿ ಬದಲಿಸಲಿದೆ. ಈ ಎಲ್ಲಾ ಕೆಲಸಗಳನ್ನು ನೋಡಿದರೆ, ಬಿಎಸ್ಪಿ ಜನರ ಕಲ್ಯಾಣಕ್ಕಾಗಿ ಮಾಡಿದ ಕೆಲಸಗಳನ್ನು ಅವಲೋಕಿಸಿದರೆ, ಬಿಎಸ್ಪಿಯ ರಾಷ್ಟ್ರೀಯ ಅಧ್ಯಕ್ಷೆ(ಮಾಯಾವತಿ)ಯೇ ಪ್ರಧಾನಿ ಹುದ್ದೆಗೆ ಸೂಕ್ತ ಎನ್ನಿಸುತ್ತದೆ. ನರೇಂದ್ರ ಮೋದಿ ಈ ಹುದ್ದೆಗೆ ಅನ್ ಫಿಟ್" ಎಂದರು.
ಪ್ರಧಾನಿ ಪಟ್ಟ ಬೇಕಿಲ್ಲ ಎಂದು ಸೋಲೊಪ್ಪಿಕೊಂಡಿತೇ ಕಾಂಗ್ರೆಸ್?
"ನಾನು ನಾಲ್ಕು ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದೇನೆ. ನನಗಿಂತ ಹೆಚ್ಚು ಕಾಲ ಮುಖ್ಯಮಂತ್ರಿಯಾದ ದಾಖಲೆ ನರೇಂದ್ರ ಮೋದಿ(ಗುಜರಾತ್) ಅವರ ಹೆಸರಿನಲ್ಲಿದ್ದರೂ, ಅವರ ಅವಧಿಯಲ್ಲಿ ಸಾಕಷ್ಟು ಕೋಮುಗಲಭೆಯಾದ ಕುಖ್ಯಾತಿಯೂ ಇದೆ. ಇದು ಭಾರತದ ಇತಿಹಾಸದಲ್ಲಿ ಕಪ್ಪುಚುಕ್ಕೆ" ಎಂದು ಮಾಯಾವತಿ ಹೇಳಿದರು.
ಮಾಯಾವತಿ ರಾಜಕೀಯ ತಂತ್ರ
ಲೋಕಸಭೆ ಚುನಾವಣೆ ಘೋಷಣೆಯಾಗುವ ಮುಂಚಿನಿಂದಲೂ ಮಾಯಾವತಿ ಪ್ರಧಾನಿ ಹುದ್ದೆಗಾಗಿ ಹಲವು ತಂತ್ರಗಳನ್ನು ಮಾಡುತ್ತಲೇ ಬಂದವರು. ಅದೇ ಲೆಕ್ಕಾಚಾರದಲ್ಲೇ ಈ ಬಾರಿ ಕಾಂಗ್ರೆಸ್ ನೊಂದಿಗೆ ಮೈತ್ರ ಮಾಡಿಕೊಳ್ಳದೆ, ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಅತ್ಯುತ್ತಮ ಸಾಧನೆ ತೋರಿದ್ದೇ ಆದಲ್ಲಿ ರಾಷ್ಟ್ರ ರಾಜಕಾರಣದಲ್ಲೂ ಈ ಮೈತ್ರಿ ಕೂಟವೇ ನಿರ್ಣಾಯಕವಾಗಲಿದೆ. ಆಗ ಮಾಯಾವತಿ ಪ್ರಧಾನಿ ಪಟ್ಟದ ಕನಸಿಗೆ ರೆಕ್ಕೆ-ಪುಕ್ಕ ಬರಬಹುದು.
ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!
ಅಭ್ಯಂತರವಿಲ್ಲ ಎಂದಿದ್ದ ಅಖಿಲೇಶ್
ಮಾಯಾವತಿ ಅವರ ಪ್ರಧಾನಿ ಹುದ್ದೆ ಹಾದಿಗೆ ಮೈತ್ರಕೂಟದ ಮುಖಂಡ ಅಖಿಲೇಶ್ ಯಾದವ್ ಅಡ್ಡಿಯಾಗಬಹುದೇನೋ ಎಂಬ ಅನುಮಾನಗಳಿಗೆ ಈಗಾಗಲೇ ಅವರು ತೆರೆ ಎಳೆದಿದ್ದಾರೆ. 'ನಾನು ಪ್ರಧಾನಿ ಅಭ್ಯರ್ಥಿಯಲ್ಲ. ಉತ್ತರ ಪ್ರದೇಶದವರೇ ಯಾರಾದರೂ ಪ್ರಧಾನಿಯಾಗುವುದಾದರೆ ನಾನಂತೂ ಬೆಂಬಲಿಸುತ್ತೇನೆ. ಮಾಯಾವತಿ ಪ್ರಧಾನಿಯಾಗುವುದಾದರೆ ಸಂತೋಷ' ಎಂದು ಅಖಿಲೇಶ್ ಯಾದವ್ ಹೇಳಿದ್ದರು.
ಕಾಂಗ್ರೆಸ್ ಗೆ ಪ್ರಧಾನಿ ಪಟ್ಟ ಬೇಕಿಲ್ಲ!
ಕಾಂಗ್ರೆಸ್ಸಿಗೆ ಪ್ರಧಾನಿ ಪಟ್ಟ ಬೇಕಂತಿಲ್ಲ. ನಮಗೆ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬುದು ಆದ್ಯ ಗುರಿ. ಅದರತ್ತ ಮೊದಲು ನಾವು ಗಮನ ಹರಿಸುತ್ತೇವೆ. ಪ್ರಧಾನಿ ಹುದ್ದೆಯ ಬಗ್ಗೆ ಚುನಾವಣೆಯ ನಂತರ ನೋಡೋಣ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಆ ಹೇಳಿಕೆಯನ್ನು ಇಂದು ಅವರು ತಿದ್ದಿ, ನನ್ನ ಮಾತಿನರ್ಥ ಅದಲ್ಲ ಎಂದರೂ, ಕಾಂಗ್ರೆಸ್ಸೇತರ ಪಕ್ಷದ ಪ್ರಧಾನಿ ಹುದ್ದೆ ಆಕಾಂಕ್ಷಿಗಳಿಗೆ ಈ ಮಾತು ಸಾಕಷ್ಟು ಖುಷಿ ಕೊಟ್ಟಿತ್ತು.
ಮೇ 23 ರ ಸಭೆಗೆ ಮಾಯಾವತಿ ಹಾಜರಾಗುತ್ತಾರಾ?
ಮೇ 23 ರಂದು, ಅಂದರೆ ಫಲಿತಾಂಶದ ದಿನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿಪಕ್ಷಗಳನ್ನೆಲ್ಲ ಸಭೆಗೆ ಆಮಂತ್ರಿಸಿದ್ದು, ದೆಹಲಿಯಲ್ಲಿ ಮಹಾಘಟಬಂಧನದ ಶಕ್ತಿಪ್ರದರ್ಶನವಾಗಲಿದೆ. ಆದರೆ ಈ ಸಭೆಗೆ ಮಾಯಾವತಿ ಹಾಜರಾಗುತ್ತಾರಾ ಎಂಬುದು ಈಗ ಕುತೂಹಲ ಕೆರಳಿಸಿರುವ ಪ್ರಶ್ನೆ.