ಕುಡಿದು ಗಲಾಟೆ ಮಾಡಿದ್ದವನ ಪೊಲೀಸ್ ವ್ಯಾನ್ ನಿಂದ ಹೊರಗೆಳೆದು ಕೊಂದರು
ಲಖನೌ, ನವೆಂಬರ್ 27: ಪೊಲೀಸ್ ವ್ಯಾನ್ ನಿಂದ ವ್ಯಕ್ತಿಯೊಬ್ಬನನ್ನು ಹೊರಗೆಳೆದು, ಹೊಡೆದು-ಕೊಂದ ಘಟನೆ ಉತ್ತರಪ್ರದೇಶದ ಶಾಮ್ಲಿಯಲ್ಲಿ ಸೋಮವಾರ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೋಡುತ್ತಾ ನಿಂತಿದ್ದಾರೆಯೇ ವಿನಾ ಆ ವ್ಯಕ್ತಿಯನ್ನು ಉಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ.
ಈ ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ದಾಲಿ ನಡೆಸಿದ ಇತರ ಐವರಿಗಾಗಿ ಹುಡುಕಾಟ ನಡೆದಿದೆ. ಮೃತನನ್ನು ರಾಜೇಂದ್ರ ಎಂದು ಗುರುತಿಸಲಾಗಿದೆ. ಹಥ್ ಚೋಯಾ ಹಳ್ಳಿಯಲ್ಲಿ ರಾಜೇಂದ್ರ ಕುಡಿದು ಬಂದು, ಗಲಾಟೆ ಮಾಡುತ್ತಿದ್ದಾನೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಸಂಜೆ ಅಲ್ಲಿಗೆ ತೆರಳಿದ್ದರು. ಆ ನಂತರ ಅವನನ್ನು ವಶಕ್ಕೆ ಪಡೆದಿದ್ದರು.
ವಿಡಿಯೋದಲ್ಲಿ ಇರುವಂತೆ, ಪೊಲೀಸ್ ವಾಹನದಲ್ಲಿ ಇರುವಾಗಲೇ ರಾಜೇಂದ್ರನಿಗೆ ಹಳ್ಳಿಗರು ಸಮಾ ಬಾರಿಸಿದ್ದಾರೆ. ಆ ನಂತರ ವಾಹನದಿಂದ ಹೊರಗೆಳೆದಿದ್ದಾರೆ. ಸ್ವಲ್ಪ ಹೊತ್ತಿಗೆ ಪ್ರಜ್ಞಾಹೀನನಾಗಿ ರಸ್ತೆಯಲ್ಲಿ ಬಿದ್ದಿದ್ದಾನೆ ರಾಜೇಂದ್ರ. ಆ ವೇಳೆ ಅವನು ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಲಾಗಿದೆ.

ಪೊಲೀಸರ ನಿರ್ಲಕ್ಷ್ಯ ಎಂದು ಪರಿಗಣಿಸಿ, ಎಸ್ ಪಿಯಿಂದ ಅಮಾನತು ಆದೇಶ ಹೊರಡಿಸಿ, ಇಲಾಖಾ ವಿಚಾರಣೆಗೆ ಆದೇಶ ಮಾಡಲಾಗಿದೆ. "ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ ಪೊಲೀಸರು ಈ ಘಟನೆಯು ನಡೆದಿದ್ದು ಹಳ್ಳಿಗರ ಮಧ್ಯದ ವೈಷಮ್ಯದಿಂದ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಆ ನಂತರ ವಿಡಿಯೋ ವೈರಲ್ ಆಗಿದ್ದರಿಂದ ಇಡೀ ಘಟನೆಯ ಬಗ್ಗೆ ಸತ್ಯ ಗೊತ್ತಾಗಿದೆ.
ಬಂಧಿತ ಆರೋಪಿಗಳನ್ನು ಹಶೀಮ್ (ಬಂಧಿಸಲಾಗಿದೆ), ರಿಫು, ಸದ್ ಕತ್, ವಸರ್, ಶಾದತ್, ಆಮೀರ್ ಎಂದು ಗುರುತಿಸಲಾಗಿದೆ. ಈ ಘಟನೆ ನಂತರ ಮಂಗಳವಾರ ಬೆಳಗ್ಗೆ ಹಳ್ಳಿಗರು ಝಿಂಝಾನ- ಉನ್ ರಸ್ತೆಯನ್ನು ತಡೆ ಮಾಡಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ಭರವಸೆ ಸಿಕ್ಕ ನಂತರ ಧರಣಿ ವಾಪಸ್ ಪಡೆದಿದ್ದಾರೆ.












Click it and Unblock the Notifications