ಮೈತ್ರಿ ಮುಖಂಡರ ಎದುರು ವಾರಣಾಸಿಯಲ್ಲಿ ಇಂದು ಮೋದಿ ನಾಮಪತ್ರ ಸಲ್ಲಿಕೆ
Recommended Video
ವಾರಣಾಸಿ, ಏಪ್ರಿಲ್ 26: ಎನ್ ಡಿಎ ಮೈತ್ರಿಕೂಟದ ಮುಖಂಡರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಮೋದಿ ನಾಮಪತ್ರ ಸಲ್ಲಿಸಲಿದ್ದು, ಅವರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಜೊತೆಯಾಗಲಿದ್ದಾರೆ. ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಲ್ ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್, ಎಐಎಡಿಎಂಕೆ ನಾಯಕರೂ ಉಪಸ್ಥಿತರಿರಲಿದ್ದಾರೆ. ಈ ಮೂಲಕ ಎನ್ ಡಿಎ ಮೈತ್ರಿಕೂಟದ ಶಕ್ತಿ ಪ್ರದರ್ಶನವೂ ನಡೆಯಲಿದೆ.
ವಾರಣಾಸಿ ಕ್ಷೇತ್ರದಲ್ಲಿ ಕೊನೆಯ ಹಂತದಲ್ಲಿ ಅಂದರೆ ಮೇ 19 ರಂದು ಚುನಾವಣೆ ನಡೆಯಲಿದ್ದು, ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ.
ವಾರಣಾಸಿಯ ಪ್ರಸಿದ್ಧ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಲಿರುವ ಮೋದಿ ಅದಕ್ಕೂ ಮೊದಲು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಗುರುವಾರ ಏಳು ಕಿಮೀ. ರೋಡ್ ಶೋ ನಡೆಸಿದ್ದ ನರೇಂದ್ರ ಮೋದಿ, ಸಂಜೆ ದಶಾಶ್ವಮೇಧದಲ್ಲಿ ತಮ್ಮ ರೋಡ್ ಶೋಗೆ ಮಂಗಳ ಹಾಡಿ, ಗಂಗಾರತಿಯಲ್ಲಿ ಪಾಲ್ಗೊಂಡಿದ್ದರು.
ವಾರಣಾಸಿಯಲ್ಲಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಕಳೆದ ಬಾರಿಯೂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಜಯ್ ರೈ ಅವರನ್ನು ಕಣಕ್ಕಿಳಿಸಿದೆ.
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ತಮ್ಮ ಮೈತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಮಾಜಿ ಶಾಸಕರ ಪುತ್ರಿ ಶಾಲಿನಿ ಯಾದವ್ ಎಂಬುವವರನ್ನು ಈಗಾಗಲೇ ಕಣಕ್ಕಿಳಿಸಿವೆ.
2014 ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ 5,81,022 ಮತಗಳನ್ನು ಪಡೆದರೆ, ಅರವಿಂದ್ ಕೇಜ್ರಿವಾಲ್ 2,09,238 ಮತಗಳನ್ನು ಪಡೆದಿದ್ದರು. ಅಜಯ್ ರೈ ಕೇವಲ 75,614 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.












Click it and Unblock the Notifications