ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧೆ ಸುದ್ದಿ: ನಿಮಗೆ ಸಸ್ಪೆನ್ಸ್ ಇರಲಿ ಎಂದ ರಾಹುಲ್
Recommended Video
ಲಕ್ನೋ, ಏಪ್ರಿಲ್ 18: ಉತ್ತರ ಪ್ರದೇಶದ ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಇದೆ. ಇದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೃಢಪಡಿಸಿಲ್ಲ, ಹಾಗೆಯೇ ನಿರಾಕರಿಸಿಯೂ ಇಲ್ಲ. 'ಸದ್ಯಕ್ಕೆ ನಿಮ್ಮನ್ನು ಸಸ್ಪೆನ್ಸ್ನಲ್ಲಿ ಇರಿಸಲಿದ್ದೇನೆ' ಎಂದು ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
'ದಿ ಹಿಂದೂ' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಸ್ಪರ್ಧೆಯ ಕುರಿತು ಯಾವುದೇ ಖಚಿತ ಉತ್ತರ ನೀಡಿಲ್ಲ. ಗಂಗಾ ಯಾತ್ರೆ ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಮೋದಿ ವಿರುದ್ಧ ಸ್ಪರ್ಧಿಸಲೇ ಎಂದು ಕೇಳುವ ಮೂಲಕ ತಮ್ಮ ಉಮೇದುವಾರಿಕೆ ಬಗ್ಗೆ ಸುಳಿವು ನೀಡಿದ್ದರು.
ವಾರಣಾಸಿಯಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ನೇರ ಪ್ರಶ್ನೆಗೆ ಅವರು, 'ನಿಮ್ಮನ್ನು ಸಸ್ಪೆನ್ಸ್ನಲ್ಲಿ ಇರಿಸಲಿದ್ದೇನೆ. ಸಸ್ಪೆನ್ಸ್ ಯಾವಾಗಲೂ ಕೆಟ್ಟದ್ದೇನೂ ಆಗಿರುವುದಿಲ್ಲ' ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ, ಈ ಪ್ರಶ್ನೆಗೆ ಅವರು ನಿರಾಕರಣೆಯನ್ನೂ ಮಾಡಿಲ್ಲ. 'ನಾನು ಯಾವುದನ್ನೂ ಖಚಿತಪಡಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ' ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ಮತ್ತು ಜೀವನೋಪಾಯ ಭದ್ರತೆಗಳ ನಡುವೆ ಹಾಗೂ ಯುವಜನರ ಆಕಾಂಕ್ಷೆಗಳು ಮತ್ತು ರೈತರ ಸ್ಪಷ್ಟವಾದ ಕೊಂಡಿ ಇದೆ. ಇದನ್ನು ಪ್ರಧಾನಿ ಅವರು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ವಯನಾಡಿನಿಂದ ಸ್ಪರ್ಧೆ ಏಕೆ?
ನಾನು ಅಮೇಥಿಯಿಂದಲೂ ಸ್ಪರ್ಧಿಸುತ್ತಿದ್ದೇನೆ, ದಕ್ಷಿಣ ಭಾರತದಿಂದಲೂ ಸ್ಪರ್ಧಿಸುತ್ತಿದ್ದೇನೆ. ಉತ್ತರ ಭಾರತ, ದಕ್ಷಿಣ ಭಾರತ, ಪೂರ್ವ ಭಾರತ, ಈಶಾನ್ಯ ಭಾರತ ಮತ್ತು ಪಶ್ಚಿಮ ಭಾರತ ಎಲ್ಲವೂ ಸಮಾನ ಪ್ರಾಮುಖ್ಯ ಪಡೆದಿವೆ ಎಂದು ಜನರಿಗೆ ಸ್ಪಷ್ಟ ಸಂದೇಶ ರವಾನಿಸಲು ಕೇರಳದ ವಯನಾಡಿನಿಂದ ಕಣಕ್ಕಿಳಿದಿದ್ದೇನೆ. ಎಲ್ಲ ಆಲೋಚನೆಗಳು, ಗ್ರಹಿಕೆಗಳು, ಭಾಷೆಗಳು ವೈವಿಧ್ಯತೆ ಇದ್ದರೂ ಮುಖ್ಯವಾಗಿವೆ ಎಂಬುದನ್ನು ಭಾರತ ಅರಿತುಕೊಳ್ಳಬೇಕು. ಅದಕ್ಕಾಗಿ ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ವಯನಾಡಿನಿಂದ ಸ್ಪರ್ಧೆಗೆ ಇಳಿದಿರುವ ಕಾರಣ ನೀಡಿದ್ದಾರೆ.

ದಕ್ಷಿಣ ಭಾರತೀಯರಿಗೆ ಗೌರವ ಸಿಕ್ಕಿಲ್ಲ
ಮೋದಿ ಸತತವಾಗಿ ದಕ್ಷಿಣ ಭಾರತದೆಡೆಗೆ ತಾರತಮ್ಯ ಮಾಡಿದ್ದಾರೆ ಎಂಬುದನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳುವ ಸಂದೇಶವಿದು. ಪ್ರತಿ ದಕ್ಷಿಣ ಭಾರತೀಯನಿಗೂ ಇದು ತಿಳಿದಿದೆ. ದೇಶದ ಅನೇಕ ಭಾಗಗಳಲ್ಲಿಯೂ ಇದು ಸತ್ಯವಾಗಿದೆ. ತಮಿಳುನಾಡಿಗೆ ಹೋಗಿ ಅವರನ್ನು ಕೇಳಿ. ಅದೇ ಅನುಭವ ಕೇರಳದವರಿಗೂ ಆಗಿದೆ. ಅವರಿಗೆ ಅರ್ಹವಾಗಿದ್ದ ಅವಕಾಶ ಮತ್ತು ಗೌರವ ನೀಡಿಲ್ಲ ಎಂದು ಅವರಿಗೆ ಅನಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ದೇಶದ ಧ್ವನಿಯ ಭಾವ
ನರೇಂದ್ರ ಮೋದಿ ಅವರ ಸರ್ಕಾರ ಜನರಿಂದ ತಿರಸ್ಕೃತಗೊಳ್ಳಲಿದೆ. ಅವರು ಮತ್ತೆ ಸರ್ಕಾರ ರಚಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶದ ಧ್ವನಿಯ ಭಾವ. ಈ ದೇಶವನ್ನು ಅದು ಆಲಿಸುತ್ತದೆ ಮತ್ತು ದೇಶ ಹೇಳಿದ್ದಕ್ಕೆ ಸ್ಪಂದಿಸುತ್ತದೆ. ಇದಕ್ಕೆ ನಮ್ಮ ಪ್ರಣಾಳಿಕೆ ಒಂದು ಉದಾಹರಣೆ. ಮತ್ತೊಂದು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಪಾತ್ರ ಎಂದಿದ್ದಾರೆ.

ದೇಶ ಸುಧಾರಿಸಲು ಪ್ರಣಾಳಿಕೆ
ಚುನಾವಣೆಯು ನಿರುದ್ಯೋಗ, ರೈತರು ಮತ್ತು ಕೃಷಿಯ ಸಂಕಟಗಳು ಮತ್ತು ದೇಶದ ಆರ್ಥಿಕತೆಯ ವಿಚಾರಗಳನ್ನು ಕೇಂದ್ರವನ್ನಾಗಿಸಿಕೊಂಡಿದೆ. ಈ ವಿಚಾರಗಳು ಚುನಾವಣೆಯನ್ನು ವ್ಯಾಖ್ಯಾನಿಸುತ್ತವೆ. ಈ ವಿಚಾರಗಳನ್ನು ಜನರು ಕೇಳಲು ಬಯಸಿದ್ದಾರೆ. ಮೋದಿ ಅವರು ಸೃಷ್ಟಿಸಿರುವ ಅನಾಹುತಗಳಿಂದ ಭಾರತವನ್ನು ಹೊರಕ್ಕೆ ತರಲು ನಮ್ಮ ಪ್ರಣಾಳಿಕೆ ಸೂಕ್ತ ಚೌಕಟ್ಟು ರೂಪಿಸಿದೆ. ಬಿಜೆಪಿಯ ಪ್ರಣಾಳಿಕೆ ಉದ್ಯೋಗ ಅಥವಾ ದೇಶದ ಜನರಿಗೆ ಸಂಬಂಧಿಸಿದ ಇತರೆ ಸಮಸ್ಯೆಗಳ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಆರೋಪಿಸಿದ್ದಾರೆ.












Click it and Unblock the Notifications