25,000 ಮಂದಿ ಹೋಂ ಗಾರ್ಡ್ ಉದ್ಯೋಗ ಕಿತ್ತುಕೊಂಡ ಸಿಎಂ ಯೋಗಿ
ಲಕ್ನೋ, ಅಕ್ಟೋಬರ್ 16: ತೆಲಂಗಾಣ ರಾಜ್ಯದಲ್ಲಿ ಮುಷ್ಕರ ನಿರತ 48 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಕಣ್ಮುಂದೆ ಇರುವಾಗಲೇ ಉತ್ತರಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ ಜಾರಿಗೊಳಿಸಿರುವುದು ಬೆಳಕಿಗೆ ಬಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸುಮಾರು 25,000 ಹೋಂ ಗಾರ್ಡ್(ಗೃಹರಕ್ಷಕ ಸಿಬ್ಬಂದಿ)ಗಳನ್ನು ಕೆಲಸದಿಂದ ವಜಾಗೊಳಿಸುತ್ತಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೂ ಸುಪ್ರೀಂಕೋರ್ಟ್ ನಿರ್ದೇಶನದಂತೆ ಭತ್ಯೆ ನೀಡಲು ಸಾಧ್ಯವಾಗದ ಕಾರಣ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಸದ್ಯ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಪ್ರತಿದಿನದ ಭತ್ಯೆ 672ರು ನಷ್ಟಿದೆ. ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನ ದಿನಕ್ಕೆ 500ರು ಸಿಗುತ್ತಿತ್ತು. ಕೋರ್ಟ್ ಆದೇಶ ಪಾಲಿಸಿ ಎಲ್ಲರಿಗೂ ಭತ್ಯೆ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 10 ರಿಂದ 12 ಕೋಟಿ ರು ಹೆಚ್ಚುವರಿ ಹೊರೆ ಬೀಳಲಿದೆ ಎಂದು ಉತ್ತರಪ್ರದೇಶ ಹೇಳಿದೆ.

ಗೃಹರಕ್ಷಕ ದಳ ಸಿಬ್ಬಂದಿಗಳು ಹುದ್ದೆ ತಾತ್ಕಾಲಿಕವಾದರೂ ಪೊಲೀಸ್ ಠಾಣೆ, ಟ್ರಾಫಿಕ್ ಸಿಗ್ನಲ್ ಗಳನ್ನು ಕಾರ್ಯ ನಿರ್ವಹಿಸಲು ನಿಯೋಜಿಸಲಾಗುತ್ತಿತ್ತು. ಆದರೆ ಸಿಎಂ ಯೋಗಿ ಆದೇಶದ ಅನ್ವಯ ಈಗ ಸಿಬ್ಬಂದಿಗಳನ್ನು ಎಲ್ಲಿಗೂ ನಿಯೋಜಿಸಿಲ್ಲ. "ಈ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು, ದೀಪಾವಳಿ ಹಬ್ಬದ ಬಳಿಕ ಎಲ್ಲರಿಗೂ ನ್ಯಾಯಯುತ ಪರಿಹಾರ ಸಿಗಲಿದೆ" ಎಂದು ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ಆರ್ ಕೆ ತಿವಾರಿ ಹೇಳಿದ್ದಾರೆ.
ಆಗಸ್ಟ್ 28ರಂದು ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಗೃಹ ರಕ್ಷಕ ಸಿಬ್ಬಂದಿಗಳ ನಿಯೋಜನೆ ಬಗ್ಗೆ ಕ್ರಮ ಜರುಗಿಸಲಾಗಿದೆ ಎಂದು ಹೆಚ್ಚುವರಿ ಡಿಜಿಪಿ ಬಿಪಿ ಜೋಗ್ ದಾಂದ್ ಹೇಳಿದ್ದಾರೆ.












Click it and Unblock the Notifications