ಎಸ್ಪಿ ಸರ್ಕಾರ ರಚಿಸಿದರೆ ಮುಂದೇನು; ಆರ್ಎಲ್ಡಿ ಮುಖ್ಯಸ್ಥನಿಗೆ ಅಮಿತ್ ಶಾ ಸಂದೇಶ!
ಲಕ್ನೋ, ಜನವರಿ 29: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಂತರದಲ್ಲಿ ಸಮಾಜವಾದಿ ಪಕ್ಷವು ಸರ್ಕಾರವನ್ನು ರಚಿಸಿದರೆ ಅಜಂ ಖಾನ್ ಒಳಗೆ ಬರುತ್ತಾರೆ ಹಾಗೂ ಜಯಂತ್ ಚೌಧರಿ ಹೊರಗೆ ಉಳಿಯುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಮುಜಾಫರ್ನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಶನಿವಾರ ಭರ್ಜರಿ ಪ್ರಚಾರ ನಡೆಸಿದರು. ಇದೇ ವೇಳೆ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳದ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಜಯಂತ್ ಚೌಧರಿಯವರನ್ನು ಯಾರು ಆಹ್ವಾನಿಸುತ್ತಿದ್ದಾರೆ, ಅವರನ್ನು ಆಹ್ವಾನಿಸುವ ಸ್ಥಿತಿಯಲ್ಲಿ ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದರು.
"ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಫಲಿತಾಂಶ ಬರುವವರೆಗೂ ಮಾತ್ರ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ಒಂದಾಗಿರುತ್ತಾರೆ. ಒಂದು ವೇಳೆ ಸಮಾಜವಾದಿ ಪಕ್ಷದ ಸರ್ಕಾರ ರಚನೆಯಾದರೆ ಅಜಂ ಖಾನ್ ಸರ್ಕಾರದೊಳಗೆ ಬರುತ್ತಾರೆ, ಅದೇ ಸಮಯಕ್ಕೆ ಜಯಂತ್ ಭಾಯ್ ಹೊರಗೆ ಉಳಿಯುತ್ತಾರೆ. ಚುನಾವಣೆ ಬಳಿಕೆ ಏನಾಗುತ್ತದೆ ಎಂಬುದನ್ನು ಅವರ ಅಭ್ಯರ್ಥಿಗಳ ಪಟ್ಟಿಯೇ ಹೇಳುತ್ತದೆ," ಎಂದು ಅಮಿತ್ ಶಾ ಟೀಕಿಸಿದ್ದಾರೆ.
"ಅಖಿಲೇಶ್ ಬಾಬುಗೆ ನಾಚಿಕೆಯೇ ಇಲ್ಲ, ನಿನ್ನೆ ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಅಖಿಲೇಶ್ ಬಾಬು ಹೇಳಿದ್ದರು. ಇಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ನಮ್ಮ ಸರ್ಕಾರದ ಅಂಕಿ-ಅಂಶಗಳನ್ನು ಹೇಳಲು ಬಂದಿದ್ದೇನೆ, ಧೈರ್ಯವಿದ್ದರೆ. ನಾಳೆ ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಆಡಳಿತದ ಅಂಕಿಅಂಶಗಳನ್ನು ಘೋಷಿಸಿ," ಎಂದು ಅಮಿತ್ ಶಾ ಸವಾಲು ಹಾಕಿದರು.
ಈ ಹಿಂದೆ ಇಲ್ಲಿ ಎಸ್ಪಿ-ಬಿಎಸ್ಪಿ ಆಡಳಿತ ನಡೆಸಿದ್ದು, ಬೆಹೆನ್ಜಿ (ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ) ಪಕ್ಷ ಬಂದಾಗ ಅವರು ಒಂದು ಜಾತಿಯ ಬಗ್ಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷ ಬಂದಾಗ ಅವರು ಕುಟುಂಬದ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅಖಿಲೇಶ್ ಬಾಬು ಬಂದಾಗ ಅವರು ಗೂಂಡಾಗಳು, ಮಾಫಿಯಾಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಅಖಿಲೇಶ್ ಮುಜಾಫರ್ನಗರ ಭೇಟಿ ತಡೆಯಲು ಪಿತೂರಿ:
ಮುಜಾಫರ್ನಗರಕ್ಕೆ ಅಖಿಲೇಶ್ ಯಾದವ್ ಭೇಟಿ ನೀಡುವುದನ್ನು ತಡೆಯಲು ಬಿಜೆಪಿ ಪಿತೂರಿ ಮಾಡಿದೆ. ಈ ಹಿನ್ನೆಲೆ ದೆಹಲಿಯಲ್ಲೇ ಹೆಲಿಕಾಪ್ಟರ್ ಅನ್ನು ತಡೆ ಹಿಡಿಯಲಾಯಿತು ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ಇದಕ್ಕೆ ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. "ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿಮಾನ ಹಾರಟವನ್ನು ನಿಂತಿದ್ದರಿಂದ ಪ್ರಚಾರದ ಯೋಜನೆ ವಿಫಲವಾಗಿದೆ. ಆದರೆ 2014ರಲ್ಲಿ ಸಾರ್ವಜನಿಕರೇ ಅವರ ಸೈಕಲ್ ಪಂಕ್ಚರ್ ಮಾಡಿದ್ದರು", ಎಂದು ಕಿಚಾಯಿಸಿದ್ದಾರೆ.
ಬಿಜೆಪಿ ಆಹ್ವಾನ ತಿರಸ್ಕರಿಸಿದ್ದ ಜಯಂತ್ ಚೌಧರಿ:
ಈ ಹಿಂದೆ ಭಾರತೀಯ ಜನತಾ ಪಕ್ಷ ನೀಡಿದ ಆಹ್ವಾನವನ್ನು ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ಸ್ಪಷ್ಟವಾಗಿ ತಿರಸ್ಕರಿಸಿದ್ದರು. "ಬಿಜೆಪಿಯವರೇ ನಿಮ್ಮ ಆಹ್ವಾನ ನನಗೆ ಬೇಕಿಲ್ಲ, ನೀವು ಹಾಳು ಮಾಡಿರುವ 700 ರೈತ ಕುಟುಂಬಗಳಿಗೆ ಅದನ್ನು ನೀಡಿ," ಎಂದು ಟ್ವೀಟ್ ಮಾಡುವ ಮೂಲಕ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ರೈತ ಕುಟುಂಬಗಳ ಕುರಿತು ಜಯಂತ್ ಚೌಧರಿ ಉಲ್ಲೇಖಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಶ್ಚಿಮ ಉತ್ತರ ಪ್ರದೇಶದ ಪ್ರಮುಖ ಜಾಟ್ ಸಮುದಾಯವನ್ನು ಕ್ರೂಢೀಕರಿಸಲು ಬಿಜೆಪಿ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಪುತ್ರ ಪರ್ವೇಶ್ ವರ್ಮಾ ನಿವಾಸಕ್ಕೆ ತೆರಳಿದ ಅಮಿತ್ ಶಾ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. 200ಕ್ಕೂ ಹೆಚ್ಚು ಜಾಟ್ ನಾಯಕರು ಭಾಗವಹಿಸಿದ ಈ ಸಭೆಗಾಗಿ ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿಯವರಿಗೂ ಆಹ್ವಾನ ನೀಡಲಾಗಿತ್ತು.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.