ಪತ್ನಿ ಕೊಲ್ಲಲು ಹಾವಾಡಿಗರನ್ನು ನೇಮಿಸಿದ್ದ ಪತಿ!
ಲಕ್ನೋ, ಜನವರಿ 24 : ಪತ್ನಿಯನ್ನು ಕೊಲೆ ಮಾಡಲು ಇಬ್ಬರು ಹಾವಾಡಿಗರನ್ನು ನೇಮಿಸಿದ್ದ ಪತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿಷಕಾರಿ ಹಾವುಗಳು ಕಚ್ಚಿದರೂ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಉತ್ತರ ಪ್ರದೇಶದ ಬದಾಯುವಿನಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಮಹಿಳೆ ವರದಕ್ಷಿಣೆ ತರಲಿಲ್ಲವೆಂದು ಪತಿ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಇದಕ್ಕಾಗಿ ಇಬ್ಬರು ಹಾವಾಡಿಗರನ್ನು ನೇಮಿಸಿಕೊಂಡಿದ್ದ.
ಮೂರು ವರ್ಷಗಳ ಹಿಂದೆ ಬದಾಯು ಗ್ರಾಮದ ಲಕ್ಷ್ಮೀಪುರ ಗ್ರಾಮದ ನಿವಾಸಿ ಶರೀಫ್ ವಿವಾಹವಾಗಿದ್ದ. ವರದಕ್ಷಿಣೆಗಾಗಿ ಪತ್ನಿಗೆ ಕಾಟ ಕೊಡುತ್ತಿದ್ದ. ಪೋಷಕರ ಮನವೊಲಿಸಿ ಹಣ ತರಬೇಕು ಎಂದು ಪೀಡಿಸುತ್ತಿದ್ದ. ಪತ್ನಿ ನಿರಾಕರಿಸಿದಾಗ ಹತ್ಯೆಗೆ ಸಂಚು ರೂಪಿಸಿದ್ದ.

ಘಟನೆ ವಿವರ: ವೈದ್ಯರ ಬಳಿ ಹೋಗೋಣ ಎಂದು ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಶರೀಫ್ ಹೊರಟಿದ್ದ. ಆತನ ಸಂಚಿನಂತೆ ರಸ್ತೆಯಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಇಬ್ಬರು ಹಾವಾಡಿಗರು ಕಾರು ಹತ್ತಿದ್ದರು.
ಬುಟ್ಟಿಯಲ್ಲಿದ್ದ ಹಾವಿನಿಂದ ಶರೀಫ್ ಪತ್ನಿಗೆ ಕಚ್ಚಿಸಿದ್ದರು. ಶರೀಫ್ ತಕ್ಷಣ ಮನೆಗೆ ಆಗಮಿಸಿ ಪತ್ನಿಯನ್ನು ಕೂಡಿಹಾಕಿ ಪರಾರಿಯಾಗಿದ್ದ. ಸ್ಥಳೀಯರು ಪತ್ನಿಯ ಚೀರಾಟ ಗಮನಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಶರೀಫ್ ಪರಾರಿಯಾಗಿದ್ದು, ಹುಡುಕಾಟವನ್ನು ಪೊಲೀಸರು ನಡೆಸುತ್ತಿದ್ದಾರೆ.
ಪತ್ನಿ ವರದಕ್ಷಿಣೆ ಕಿರುಕುಳ, ವಿಚ್ಚೇಧನ ನೀಡುತ್ತೇನೆ ಎಂದು ಶರೀಫ್ ಬೆದರಿಕೆ ಹಾಕಿದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪತ್ನಿಯನ್ನು ಕೊಲ್ಲಲು ಪತಿ ರೂಪಿಸಿದ ತಂತ್ರ ನೋಡಿ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.











Click it and Unblock the Notifications