ಹತ್ರಾಸ್ ಸಂತ್ರಸ್ತೆಯನ್ನು ಸಂಬಂಧಿಕರೇ ಹೊಡೆದು ಕೊಂದರಾ?
ಲಕ್ನೋ, ಅಕ್ಟೋಬರ್.08: ಉತ್ತರ ಪ್ರದೇಶ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಅತ್ಯಾಚಾರ ಪ್ರಕರಣದ ಆರೋಪಿಗಳು ಅಲಿಘರ್ ಜೈಲಿನ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ನಾಲ್ಕೂ ಮಂದಿ ನಿರಪರಾಧಿಗಳು ಎಂದಿರುವ ಆರೋಪಿಗಳು ಆಘಾತಕಾರಿ ಅಂಶವೊಂದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲಿಘರ್ ಜೈಲಿನಲ್ಲಿರುವ ಹತ್ರಾಸ್ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸಂದೀಪ್ ಸಿಂಗ್ ತನಿಖಾಧಿಕಾರಿ ಮತ್ತು ಜೈಲಿನ ಸೂಪರಿಟೆಂಡೆಂಟ್ ಅವರಿಗೆ ಬರೆದ ಪತ್ರದಲ್ಲಿ ಸಂತ್ರಸ್ತೆ ಉತ್ತಮ ಗೆಳತಿಯಾಗಿದ್ದಳು ಎಂದು ಉಲ್ಲೇಖಿಸಿದ್ದಾರೆ.
ಹತ್ರಾಸ್ ಅತ್ಯಾಚಾರದ ವರದಿ ಸಲ್ಲಿಸಲು ಎಸ್ಐಟಿಗೆ 10 ದಿನ ಅವಕಾಶ
"ಸಂತ್ರಸ್ತೆ ನನ್ನ ಉತ್ತಮ ಗೆಳತಿಯಾಗಿದ್ದು, ಅವರ ಜೊತೆಗೆ ನಾನು ಹಲವು ಬಾರಿ ಫೋನ್ ನಲ್ಲಿ ಕೂಡಾ ಸಂಭಾಷಣೆ ನಡೆಸುತ್ತಿದ್ದೆನು. ಆದರೆ ಈ ನಮ್ಮ ಸ್ನೇಹವನ್ನು ಅವರ ಮನೆಯವರು ಒಪ್ಪುತ್ತಿರಲಿಲ್ಲ. ಕಳೆದ ಸಪ್ಟೆಂಬರ್.14ರಂದು ನಾನು ಮತ್ತು ಆಕೆ ಅಂದು ಫೀಲ್ಡ್ ನಲ್ಲಿ ಭೇಟಿ ಮಾಡಿದ್ದೆವು. ಇದರಿಂದ ಕೆರಳಿದ ಕುಟುಂಬ ಸದಸ್ಯರೇ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಿಂದ ಗಾಯಗೊಂಡ ಸಂತ್ರಸ್ತೆ ಪ್ರಾಣ ಬಿಟ್ಟಿದ್ದಾರೆ" ಎಂದು ಪ್ರಮುಖ ಆರೋಪಿ ಸಂದೀಪ್ ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪತ್ರ:
ಹತ್ರಾಸ್ ಸಂತ್ರಸ್ತೆ ಮೇಲೆ ಯಾವುದೇ ರೀತಿ ಹಲ್ಲೆ ನಡೆಸಿಲ್ಲ. ಅತ್ಯಾಚಾರವೂ ನಡೆದಿಲ್ಲ. ನಾವೆಲ್ಲ ಈ ಪ್ರಕರಣದಲ್ಲಿ ನಿರಪರಾಧಿಗಳು ಎಂದು ಉಲ್ಲೇಖಿಸಿದ ಪತ್ರದಲ್ಲಿ ನಾಲ್ವರು ಆರೋಪಿಗಳು ಸಹಿ ಮಾಡಿದ್ದು, ಅಲಿಘರ್ ಜೈಲಿನ ಸೂಪರಿಟೆಂಡೆಂಟ್ ಅವರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಕುಟುಂಬ ಸದಸ್ಯರ ಆರೋಪವೇನು?:
ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಠಾಕೂರ್ ಸಮುದಾಯದ ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಅದಾಗಿ ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಲಿತ ಯುವತಿ ಸಪ್ಟೆಂಬರ್.29ರಂದು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು. ಸಪ್ಟೆಂಬರ್.30ರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.