ಬಾಬ್ರಿ ಮಸೀದಿ ವಿವಾದದ ಹಾದಿಯಲ್ಲೇ ಜ್ಞಾನವಾಪಿ ಮಸೀದಿ ತೀರ್ಪು: ಹೀಗೆ ಹೇಳಿದ್ದೇಕೆ ಓವೈಸಿ?
ವಾರಣಾಸಿ, ಸೆಪ್ಟೆಂಬರ್ 13: ಜ್ಞಾನವಾಪಿ ಶ್ರೀನಗರ ಗೌರಿ ವಿವಾದದಲ್ಲಿ ವಾರಾಣಸಿ ಕೋರ್ಟ್ ನೀಡಿರುವ ಆದೇಶವು "ಅಸ್ಥಿರಗೊಳಿಸುವ ಪರಿಣಾಮ"ಕ್ಕೆ ಕಾರಣವಾಗುತ್ತದೆ. ಇದೂ ಕೂಡ ಬಾಬರಿ ಮಸೀದಿ ವಿಷಯದ ಹಾದಿಯಲ್ಲಿಯೇ ಸಾಗುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಅಂಜುಮನ್ ಇಸ್ಲಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ ಮನವಿಯನ್ನು ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ. ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಪೂಜಿಸುವ ಹಕ್ಕುಗಳನ್ನು ಕೋರಿ ಐವರು ಹಿಂದೂ ಮಹಿಳೆಯರು ಸಲ್ಲಿಸಿದ ಮೊಕದ್ದಮೆಯು ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿದೆ.
Gyanvapi Mosque : ಜ್ಞಾನವಾಪಿ ಮಸೀದಿ ಪ್ರಕರಣ: ಹಿಂದೂಗಳ ಅರ್ಜಿ ಪುರಸ್ಕರಿಸಿದ ಕೋರ್ಟ್- ಸೆ.22ಕ್ಕೆ ವಿಚಾರಣೆ
"ಈ ಕೋರ್ಟ್ ಆದೇಶದಿಂದಾಗಿ ಅಸ್ಥಿರತೆಯ ಪರಿಣಾಮ ಉಂಟಾಗುತ್ತದೆ. ನಾವು ಬಾಬರಿ ಮಸೀದಿ ವಿಷಯದ ಹಾದಿಯಲ್ಲಿಯೇ ಸಾಗುತ್ತಿದ್ದೇವೆ. ಬಾಬರಿ ಮಸೀದಿಯ ಬಗ್ಗೆ ತೀರ್ಪು ನೀಡಿದಾಗ, ಈ ತೀರ್ಪು ನೀಡಿರುವುದರಿಂದ ದೇಶದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ನಾನು ಎಲ್ಲರಿಗೂ ಎಚ್ಚರಿಸಿದ್ದೆ," ಎಂದು ಓವೈಸಿ ತಿಳಿಸಿದ್ದಾರೆ.
ಹೈಕೋರ್ಟ್ ಮೊರೆ ಹೋಗುವಂತೆ ಸಲಹೆ:
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶದ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಈ ಆದೇಶದ ವಿರುದ್ಧ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯು ಮೇಲ್ಮನವಿ ಸಲ್ಲಿಸುತ್ತದೆ ಎಂದು ಭಾವಿಸುತ್ತೇನೆ. ಈ ಆದೇಶದ ನಂತರ, ಪೂಜಾ ಸ್ಥಳಗಳ ಕಾಯಿದೆ 1991ರ ಉದ್ದೇಶ ವಿಫಲಗೊಳ್ಳುತ್ತದೆ ಎಂದು ಓವೈಸಿ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬ್ 22ಕ್ಕೆ ಮುಂದಿನ ವಿಚಾರಣೆ:
ಜ್ಞಾನವಾಪಿ ಶ್ರೀನಗರ ಗೌರಿ ವಿವಾದ ಪ್ರಕರಣದ ತೀರ್ಪನ್ನು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಪ್ರಕಟಿಸಿದ್ದು, ಮುಂದಿನ ವಿಚಾರಣೆಯನ್ನು ಸೆ.22ಕ್ಕೆ ಮುಂದೂಡಿದ್ದಾರೆ. ಈ ತೀರ್ಪಿನ ಬಗ್ಗೆ ವಕೀಲರು ಪ್ರತಿಕ್ರಿಯೆ ನೀಡಿದ್ದು, "ನ್ಯಾಯಾಲಯವು ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಮೊಕದ್ದಮೆಯನ್ನು ನಿರ್ವಹಿಸಬಹುದಾಗಿದೆ ಎಂದು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 22 ರಂದು ನಡೆಯಲಿದೆ" ಎಂದು ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.
"ಇದು ಹಿಂದೂ ಸಮುದಾಯಕ್ಕೆ ಸಂದ ಜಯ. ಮುಂದಿನ ವಿಚಾರಣೆ ಸೆ.22 ರಂದು ನಡೆಯಲಿದೆ. ಇದು ಜ್ಞಾನವಾಪಿ ದೇವಸ್ಥಾನಕ್ಕೆ ಅಡಿಗಲ್ಲು. ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿ" ಎಂದು ಜ್ಞಾನವಾಪಿ ಪ್ರಕರಣದ ಅರ್ಜಿದಾರರಾದ ಸೋಹನ್ ಲಾಲ್ ಆರ್ಯ ಹೇಳಿದ್ದಾರೆ. ತೀರ್ಪು ತಮ್ಮ ಪರವಾಗಿ ಬಂದರೆ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಸಮೀಕ್ಷೆ ಮತ್ತು ಶಿವಲಿಂಗ್~ನ ಕಾರ್ಬನ್ ಡೇಟಿಂಗ್ ಅನ್ನು ಕೋರುತ್ತೇವೆ ಎಂದು ಹಿಂದೂ ಕಡೆಯವರು ಈ ಹಿಂದೆ ಹೇಳಿದ್ದರು.
ಕಾಶಿ ವಿಶ್ವನಾಥ ದೇಗುಲದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಪ್ರತಿನಿತ್ಯ ಹಿಂದೂ ದೇವತೆಗಳ ವಿಗ್ರಹಗಳನ್ನು ಇರಿಸಲು ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.