ಅತ್ಯಾಚಾರ ಪ್ರಕರಣದಲ್ಲಿ ಉತ್ತರಪ್ರದೇಶ ಮಾಜಿ ಸಚಿವ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ಪ್ರಕಟ
ಲಕ್ನೋ, ನವೆಂಬರ್ 12: ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಉತ್ತರಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಹಾಗೂ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಲಾಗಿದೆ.
ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಸೇರಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ. ಲಕ್ನೋ ವಿಶೇಷ ನ್ಯಾಯಾಲಯದಿಂದ ಗಾಯತ್ರಿ ಪ್ರಜಾಪತಿ ಅವರಿಗೆ ಜೈಲು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ.
ಸಂಸದ/ ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ರೈ ಅವರು ಪ್ರಜಾಪತಿ ತಪ್ಪಿತಸ್ಥರು ಎಂದು ಗುರುವಾರ ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ತಿಳಿಸಿದರು.
ಚಿತ್ರಕೂಟದ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಮಗಳ ಮೇಲೂ ಅತ್ಯಾಚಾರ ನಡೆಸಲು ಯತ್ನಿಸಿದ್ದರಿಂದ 2017ರಲ್ಲಿ ಗಾಯತ್ರಿ ಪ್ರಸಾದ್ ಪ್ರಜಾಪತಿಯನ್ನು ಬಂಧಿಸಲಾಗಿತ್ತು.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮತ್ತು ಇತರ ಇಬ್ಬರಿಗೆ ಲಕ್ನೋದ ವಿಶೇಷ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ರವರ ಕ್ಯಾಬಿನೆಟ್ನ ಪ್ರಮುಖ ಸದಸ್ಯ, ಸಾರಿಗೆ ಮತ್ತು ಗಣಿಗಾರಿಕೆ ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದ ಗಾಯತ್ರಿ ಪ್ರಸಾದ್ ಪ್ರಜಾಪತಿಯನ್ನು ಮಾರ್ಚ್ 2017ರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಮತ್ತು ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧನ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಸಚಿವರ ವಿರುದ್ಧ ಎಫ್ಐಆರ್ ಅನ್ನು ಗೌತಂಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. 2017ರ ಫೆಬ್ರವರಿ 18ರಂದು ಎಫ್ಐಆರ್ ದಾಖಲಾದ ನಂತರ, ಸಚಿವರನ್ನು ಮಾರ್ಚ್ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿದ್ದರು.
ಅಕ್ಟೋಬರ್ 2014ರಿಂದ ಸಚಿವರು ಮತ್ತು ಅವರ ಸಹಚರರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದರು. ಆರೋಪಿಗಳು ಜುಲೈ 2016ರಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ನಂತರ ಅವರ ವಿರುದ್ಧ ದೂರು ನೀಡಲು ನಿರ್ಧರಿಸಿದ್ದರು.
ಗಾಯತ್ರಿ ಪ್ರಸಾದ್ ಪ್ರಜಾಪತಿ ಜೊತೆಗೆ ಆಶಿಶ್ ಶುಕ್ಲಾ ಮತ್ತು ಅಶೋಕ್ ತಿವಾರಿ ಕೂಡ ಶಿಕ್ಷೆಗೆ ಗುರಿಯಾಗಿದ್ದಾರೆ. ಶುಕ್ಲಾ ಅವರು ಅಮೇಥಿಯಲ್ಲಿ ಮಾಜಿ ಕಂದಾಯ ಗುಮಾಸ್ತರಾಗಿದ್ದರೆ, ತಿವಾರಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.
2017ರಲ್ಲಿ ಚಿತ್ರಕೂಟ ಜಿಲ್ಲೆಯ ಮಹಿಳೆಯೊಬ್ಬರು ಪ್ರಜಾಪತಿ ಮಾತ್ರವಲ್ಲದೆ ವಿಕಾಸ್ ವರ್ಮಾ, ಅಮರೇಂದ್ರ ಸಿಂಗ್, ಚಂದ್ರಪಾಲ್, ರೂಪೇಶ್ವರ್, ಆಶಿಶ್ ಶುಕ್ಲಾ ಮತ್ತು ಅಶೋಕ್ ತಿವಾರಿ ಅವರ ವಿರುದ್ಧವೂ ದೂರು ನೀಡಿದ್ದರು. ಫೆಬ್ರವರಿ 2017ರಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಪ್ರಜಾಪತಿ ಮತ್ತಿತರ ಆರೋಪಿಗಳ ವಿರುದ್ಧ ಲಕ್ನೋನ ಗೌತಂಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು.
Recommended Video
ಲಕ್ನೋ ಜೈಲಿನಲ್ಲಿ 41 ತಿಂಗಳು ಕಳೆದ ಬಳಿಕ ವೈದ್ಯಕೀಯ ಕಾರಣಗಳಿಗಾಗಿ ಅಲಾಹಾಬಾದ್ ಹೈಕೋರ್ಟ್ನ ಲಕ್ನೋ ಪೀಠ ಪ್ರಜಾಪತಿ ಅವರಿಗೆ ಸೆಪ್ಟೆಂಬರ್ 2020ರಲ್ಲಿ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಎಲ್ಲಾ ಅಧಿಕೃತ ಸಾಕ್ಷ್ಯಗಳನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ದೋಷಪೂರಿತವಾಗಿದೆ ಎಂದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಹಾಗೂ ಎಂ.ಆರ್. ಶಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಮಧ್ಯಂತರ ಜಾಮೀನು ರದ್ದುಗೊಳಿಸಿತ್ತು.